ರಾಜ್ಯ ಸರ್ಕಾರ ತಜ್ಞರ ವರದಿ ನಿರ್ಲಕ್ಷಿಸಿರುವುದೇ ಕೊರೋನಾ ಮಹಾಸ್ಪೋಟಕ್ಕೆ ಕಾರಣ : ದಿನೇಶ್ ಗುಂಡುರಾವ್ ಆಕ್ರೋಶ

Prasthutha|

ಬೆಂಗಳೂರು : ಕೊರೊನಾ ಎರಡನೇ ಅಲೆಯ ಬಗ್ಗೆ ತಜ್ಞರು ನೀಡಿದ ವರದಿಯನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಿದರ ಪರಿಣಾಮದಿಂದ ರಾಜ್ಯದಲ್ಲಿ ಜನ ಸಾವು ನೋವು ಅನುಭವಿಸುವಂತಾಗಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡುರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ವಿ.ರವಿ ಅವರ ಹೇಳಿಕೆಗೆ ತಮ್ಮ ಟ್ವಿಟ್‍ನಲ್ಲಿ ಪ್ರತಿಕ್ರಿಯಿಸಿರುವ ಅವರು, ಕೋವಿಡ್ 2ನೇ ಅಲೆಯ ಪರಿಣಾಮದ ಬಗ್ಗೆ ಕಳೆದ ನವೆಂಬರ್‍ ನಲ್ಲಿ ತಜ್ಞರು ನೀಡಿದ್ದ ವರದಿಯನ್ನು ರಾಜ್ಯ ಸರ್ಕಾರ ಕಸದ ಬುಟ್ಟಿಗೆ ಹಾಕಿತ್ತು.

ಅದರ ಪರಿಣಾಮವನ್ನು ರಾಜ್ಯದ ಜನ ಈಗ ಅನುಭವಿಸುವಂತಾಗಿದೆ. ತಜ್ಞರ ವರದಿಯನ್ನು ಸರ್ಕಾರ ಸ್ವಲ್ಪವೇ ಗಂಭೀರವಾಗಿ ಪರಿಗಣಿಸಿದ್ದರೂ ರಾಜ್ಯ ಇಂತದ್ದೊಂದು ದುರಂತಕ್ಕೆ ಸಾಕ್ಷಿಯಾಗುತ್ತಿರಲಿಲ್ಲ ಎಂದಿದ್ದಾರೆ.

- Advertisement -

ರಾಜ್ಯ ಸರ್ಕಾರದ ಪಾಪದ ಫಲವನ್ನು ಜನ ಅನುಭವಿಸಬೇಕಾಗಿರುವುದು ದುರಂತ. ರಾಜ್ಯದಲ್ಲಿ ಆಗುತ್ತಿರುವ ಪ್ರತಿ ಕೊರೊನಾ ಸಾವಿನ ಹಿಂದೆಯೂ ಸರ್ಕಾರದ ಬೇಜವಾಬ್ಧಾರಿಯಿದೆ. ಅಂದು ತಜ್ಞರ ವರದಿ ಕಡೆಗಣಿಸಿ ಹುಡುಗಾಟವಾಡಿದ್ದ ಸರ್ಕಾರ, ಇಂದು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು ಎಂಬಂತೆ ಕೊರೊನಾ ನಿಯಂತ್ರಿಸಲು ಹೆಣಗಾಡುವುದರಲ್ಲಿ ಏನರ್ಥವಿದೆ ಎಂದು ಪ್ರಶ್ನಿಸಿದ್ದಾರೆ.

ಕೊರೊನಾ ಭೀಕರತೆಯ ಬಗ್ಗೆ ವಿಪಕ್ಷಗಳು ಆಗಲೇ ಸರ್ಕಾರವನ್ನು ಎಚ್ಚರಿಸಬೇಕಿತ್ತು ಎಂದು ಸಿ.ಟಿ.ರವಿ ಹೇಳಿದ್ದಾರೆ. ಸರ್ಕಾರ ವಿಪಕ್ಷಗಳ ಎಚ್ಚರಿಕೆಯನ್ನು ಯಾವಾಗ ಕಿವಿಗೆ ಹಾಕಿಕೊಂಡು ಪಾಲಿಸಿದೆ ಎಂದು ಸಿ.ಟಿ.ರವಿಯವರು ಆತ್ಮಾವಲೋಕನ ಮಾಡಿಕೊಳ್ಳಲಿ. ವಿಪಕ್ಷಗಳ ಎಚ್ಚರಿಕೆ ಅಂದು ಕೂಡ ಸರ್ಕಾರಕ್ಕೆ ಅಪಥ್ಯವಾಗಿತ್ತು, ಇಂದು ಕೂಡ ಅಪಥ್ಯವಾಗಿದೆ.

ತಜ್ಞರ ವರದಿಯನ್ನೇ ಕಾಲ ಕಸ ಮಾಡಿಕೊಂಡಿದ್ದ ಈ ಸರ್ಕಾರ ವಿಪಕ್ಷಗಳ ಎಚ್ಚರಿಕೆಯನ್ನು ಪಾಲಿಸಲು ಸಾಧ್ಯವಿತ್ತೆ ಎಂದಿದ್ದಾರೆ. ಹೊರುವವನಿಗೆ ಹೆಗಲು ಭಾರ ಎಂಬಂತೆ ಸಿ.ಟಿ.ರವಿಯವರು ನೆಪ ಹೇಳುವುದನ್ನು ಬಿಟ್ಟು ತಮ್ಮ ರಾಜ್ಯ ಸರ್ಕಾರದ ಅಸಮರ್ಥತೆಯನ್ನು ಒಪ್ಪಿಕೊಳ್ಳಲಿ. ಕನಿಷ್ಟ ಆಗಲಾದರೂ ಮಾಡಿದ ಪಾಪದ ಭಾರ ಕಡಿಮೆಯಾಗಬಹುದು ಎಂದು ಕಿಡಿಕಾರಿದ್ದಾರೆ.

ಎಲ್ಲಿ ಹೋಯಿತು ಆತ್ಮ ನಿರ್ಭರ ಭಾರತ, ಎಲ್ಲಿ ಹೋಯಿತು ವಿಶ್ವಗುರು ಭಾರತ, ಮಾತು ಮನೆ ಕೆಡಿಸಿತು..ತೂತು ಒಲೆ ಕೆಡಿಸಿತು ಎಂದರೆ ಇದೆ ಅಲ್ಲವೆ.? ಮೋದಿಯವರೆ, ನಿಮ್ಮ ಆತ್ಮಪ್ರಶಂಸೆಯ ತೌಡು ಕುಟ್ಟುವ ಪುಕ್ಕಟೆ ಮಾತು ಈ ದೇಶಕ್ಕೆ ಸಾಕಾಗಿದೆ. ಇನ್ನಾದರೂ ಸದೃಢ ಭಾರತ ಕಟ್ಟಲು ಮುಂದಾಗಿ ಎಂದು ದಿನೇಶ್ ಗುಂಡುರಾವ್ ಒತ್ತಾಯಿಸಿದ್ದಾರೆ.

Join Whatsapp