Home ಟಾಪ್ ಸುದ್ದಿಗಳು ಸೊಸೆ ಭವಾನಿ ರೇವಣ್ಣ ಮೇಲೆ ಸಿಟ್ಟಾದ ದೇವೇಗೌಡ: ಪತ್ನಿಗೆ ಬುದ್ಧಿ ಹೇಳು ಎಂದು ಪುತ್ರನಿಗೆ ತಾಕೀತು

ಸೊಸೆ ಭವಾನಿ ರೇವಣ್ಣ ಮೇಲೆ ಸಿಟ್ಟಾದ ದೇವೇಗೌಡ: ಪತ್ನಿಗೆ ಬುದ್ಧಿ ಹೇಳು ಎಂದು ಪುತ್ರನಿಗೆ ತಾಕೀತು

ಬೆಂಗಳೂರು: ಸೊಸೆ ಭವಾನಿ ರೇವಣ್ಣ ಅವರ ನಡೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸಿಟ್ಟಾಗಿದ್ದಾರೆ ಎನ್ನಲಾಗಿದೆ. ಕುಟುಂಬಕ್ಕೆ ಕೆಟ್ಟ ಹೆಸರು ಬರದಂತೆ ನೋಡಿಕೋ, ನಿನ್ನ ಪತ್ನಿಗೆ ಯಾವ ರೀತಿ ಎಚ್ಚರಿಕೆ ನೀಡುತ್ತೀಯೋ ನಿನಗೆ ಬಿಟ್ಟಿದ್ದು ಎಂದು ಪುತ್ರ ಎಚ್.ಡಿ. ರೇವಣ್ಣ ಅವರಿಗೆ ದೇವೇಗೌಡ ಕಡ್ಡಿ ಮುರಿದಂತೆ ಹೇಳಿದ್ದಾರೆ ಎನ್ನಲಾಗಿದೆ.

ಪ್ರಜ್ವಲ್‌ ರೇವಣ್ಣ ಮೇಲೆ ಕೇಸ್‌ ದಾಖಲಾಗಿ 17 ದಿನವೇ ಗತಿಸಿಹೋಗಿದೆ. ಇನ್ನು ಈ ಕೇಸ್‌ಗೆ ಸಂಬಂಧಿಸಿ ಸಂತ್ರಸ್ತ ಮಹಿಳೆಯನ್ನು ಕಿಡ್ನ್ಯಾಪ್‌ ಮಾಡಿದ ಆರೋಪ ಎದುರಿಸಿ ಎಚ್‌.ಡಿ. ರೇವಣ್ಣ ಜೈಲು ಸೇರಿದ್ದರೂ ಆ ಕಡೆ ಭವಾನಿ ಕಣ್ಣೆತ್ತಿಯೂ ನೋಡಿಲ್ಲ. ಇನ್ನು ಇದೇ ಕೇಸ್‌ ವಿಚಾರವಾಗಿ ಎಸ್‌ಐಟಿ ಎರಡು ಬಾರಿ ನೋಟಿಸ್‌ ಕೊಟ್ಟರೂ ಡೋಂಟ್‌ ಕೇರ್‌ ಎಂಬಂತೆ ಕುಳಿತುಬಿಟ್ಟಿದ್ದಾರೆ. ಪ್ರಜ್ವಲ್ ರೀತಿಯಲ್ಲಿ ತಾಯಿಯೂ ವಿಚಾರಣೆಗೆ ಬರಲು ಹಿಂದೇಟು ಹಾಕಿದ್ದಾರೆ. ಈ ಎಲ್ಲ ಬೆಳವಣಿಗೆ ಮಧ್ಯೆ ರೇವಣ್ಣ ಅವರಿಗೆ ಜಾಮೀನು ಸಿಕ್ಕರೂ ಖುಷಿ ವ್ಯಕ್ತಪಡಿಸೋಕೆ ಕೂಡಾ ಅವರು ಕಾಣಿಸಿಕೊಳ್ಳಲಿಲ್ಲ. ಅಲ್ಲದೆ, ದೇವೇಗೌಡರ ಮನೆಯತ್ತಲೂ ಸುಳಿಯಲಿಲ್ಲ. ಇದು ದೇವೇಗೌಡರ ಕೆಂಗಣ್ಣಿಗೆ ಗುರಿಯಾಗಿದೆ ಎನ್ನಲಾಗಿದೆ. ತಾವು ಗಳಿಸಿಟ್ಟ ಗೌರವ, ಹೆಸರನ್ನು ಮಣ್ಣು ಪಾಲಾಗಲು ಬಿಡುವುದಿಲ್ಲ. ಆ ರೀತಿ ಮಾಡಲು ಇನ್ನು ಮುಂದೆ ಅವಕಾಶವನ್ನೂ ಕೊಡುವುದಿಲ್ಲ ಎಂದು ಗುಡುಗಿದ್ದಾರೆನ್ನಲಾಗಿದೆ.

ಭವಾನಿ ಮತ್ತು ಮಕ್ಕಳು ಏನು ಬೇಕಿದ್ದರೂ ಮಾಡಿಕೊಳ್ಳಲಿ. ಆದರೆ, ಇನ್ನು ಮುಂದೆ ಕುಟುಂಬಕ್ಕೆ ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳಿ. ಈ ಬಗ್ಗೆ ಸಮಯ ನೋಡಿ ಅವರೆಲ್ಲರಿಗೂ ಎಚ್ಚರಿಕೆ ಕೊಡು. ಪ್ರಜ್ವಲ್ ವಿದೇಶದಿಂದ ಬಂದು ಕೋರ್ಟ್‌ನಿಂದ ಜಾಮೀನು ಪಡೆದ ಸಾರ್ವಜನಿಕ ಜೀವನದಲ್ಲಿ ಎಚ್ಚರಿಕೆಯಿಂದ ಇರಬೇಕು. ಈ ನಿಟ್ಟಿನಲ್ಲಿ ನೀನು ಜವಾಬ್ದಾರಿಯಿಂದ ನೋಡಿಕೊ ಎಂದು ಎಚ್.ಡಿ. ರೇವಣ್ಣ ಅವರಿಗೆ ಎಚ್.ಡಿ. ದೇವೇಗೌಡ ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp
Exit mobile version