Home ಕರಾವಳಿ ಜಿಲ್ಲಾಧಿಕಾರಿ, ಸಬ್ ಇನ್ಸ್ ಪೆಕ್ಟರ್ ಗೆ ಬೆದರಿಕೆ: ಆರೋಪಿಯನ್ನು ಬಂಧಿಸುವಂತೆ ದಲಿತ ಹಕ್ಕುಗಳ ಸಮಿತಿ ಒತ್ತಾಯ

ಜಿಲ್ಲಾಧಿಕಾರಿ, ಸಬ್ ಇನ್ಸ್ ಪೆಕ್ಟರ್ ಗೆ ಬೆದರಿಕೆ: ಆರೋಪಿಯನ್ನು ಬಂಧಿಸುವಂತೆ ದಲಿತ ಹಕ್ಕುಗಳ ಸಮಿತಿ ಒತ್ತಾಯ

ಬೆಳ್ತಂಗಡಿ: ಬಂಟ್ವಾಳ ತಾಲೂಕಿನ ಕಾರಿಂಜೆಯಲ್ಲಿ ನಡೆದ ಸಭೆಯೊಂದರಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡ, ಕ್ರಿಮಿನಲ್ ವ್ಯಕ್ತಿ ಜಿಲ್ಲಾಧಿಕಾರಿಯವರನ್ನು ಏಕವಚನದಲ್ಲಿ ಕೊಲೆ ಬೆದರಿಕೆ ಒಡ್ಡಿದಲ್ಲದೆ, ಕೇಸ್ ದಾಖಲಿಸಿದ ಪುಂಜಾಲಕಟ್ಟೆ ಸಬ್ ಇನ್ಸ್ ಪೆಕ್ಟರ್ ಸೌಮ್ಯ ಅವರ ಕೈಕಾಲು ಮುರಿಯುತ್ತೇವೆ ಎಂದು ಬೆದರಿಕೆ ಒಡ್ಡಿದ ರಾಧಾಕೃಷ್ಣ ಅಡ್ಯಂತಾಯನನ್ನು ತಕ್ಷಣ ಬಂಧಿಸಿ ಜೈಲಿಗಟ್ಟಬೇಕು ಎಂದು ದಲಿತ ಹಕ್ಕುಗಳ ಸಮಿತಿ ರಾಜ್ಯ ಸಮಿತಿ ಸದಸ್ಯ ಶೇಖರ್ ಲಾಯಿಲ ಆಗ್ರಹಿಸಿದ್ದಾರೆ.


ಸರ್ವಜನಾಂಗದ ಶಾಂತಿಯ ತೋಟವಾಗಿರುವ ದ.ಕ. ಜಿಲ್ಲೆಗೆ ಧರ್ಮದ ವಿಷ ಉಣಿಸಿ ಜಿಲ್ಲೆಯ ಸೌಹಾರ್ದ ಕೆಡಿಸುವ ಕಾರ್ಯದಲ್ಲಿ ಸಂಘಪರಿವಾರದ ಭಯೋತ್ಪಾದಕರು ಕಾರ್ಯನಿರತವಾಗಿದ್ದು, ಇದು ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ಅಪಾಯಕಾರಿ ಬೆಳವಣಿಗೆ. ಜಿಲ್ಲೆಯ ಕಾರ್ಯಾಂಗ, ನ್ಯಾಯಾಂಗ ವ್ಯವಸ್ಥೆಗೆ ಅಡ್ಡಿ, ಆತಂಕ ತರುವ ಯಾವುದೇ ಸಂಘಟನೆಗಳ ವ್ಯಕ್ತಿಗಳು ಭಯೋತ್ಪಾದಕರಿಗಿಂತ ಕಡಿಮೆ ಇಲ್ಲ. ಜಿಲ್ಲಾಧಿಕಾರಿಯ ಕಾಲರ್ ಪಟ್ಟಿ ಹಿಡಿಯುವ, ಮಹಿಳಾ ಪಿಎಸ್ ಐರವರ ಕೈಕಾಲು ಮುರಿಯುವ ಬೆದರಿಕೆ ಒಡ್ಡಿದ ಯಾವುದೇ ಗೂಂಡಾಗಳು ನಾಗರಿಕ ಸಮಾಜದಲ್ಲಿ ಬದುಕಲು ಅನರ್ಹತೆ ಹೊಂದಿದ್ದು, ತಕ್ಷಣ ಅವರನ್ನು ಬಂಧಿಸಿ ಜೈಲಿಗಟ್ಟಬೇಕು. ಮಹಿಳೆಯರನ್ನು ಮಾತೆ, ದೇವತೆ ಎಂದು ಬೊಗಳಿದರೆ ಸಾಲದು, ಅವರನ್ನು ಗೌರವಿಸುವ ಗುಣವನ್ನು ಸಂಘಪರಿವಾರದ ನಾಯಕರು ಬೆಳೆಸಿಕೊಳ್ಳಬೇಕು. ಸಂಘಪರಿವಾರದ ನಾಯಕರೆಂಬ ಗೂಂಡಾಗಳ ಮಾತಗಳು ಭಯೋತ್ಪಾದಕರನ್ನು ಮೀರಿಸುವಂತಿದೆ ಎಂದು ಶೇಖರ್ ಅಭಿಪ್ರಾಯ ಪಟ್ಟಿದ್ದಾರೆ.


ರಾಜ್ಯದಲ್ಲಿ ಬಸವರಾಜ್ ಬೊಮ್ಮಯಿ ಆಡಳಿತದಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಂಘಪರಿವಾರದ ಗೂಂಡಾಗಿರಿ ಹೆಚ್ಚಾಗಿದೆ. ಈ ಗೂಂಡಾಗಿರಿಯ ಹಿಂದೆ ರಾಜಕೀಯ ಅಜೆಂಡಾವಿದ್ದು, ಇದರ ವಿರುದ್ಧ ಪಕ್ಷ , ಜಾತಿ , ಧರ್ಮ ಮೀರಿ ಸಂಘಟಿತ ಹೋರಾಟ ಅಗತ್ಯವಿದೆ ಎಂದು ಶೇಖರ್ ಲಾಯಿಲ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version