ಮಂಗಳೂರು: ಕೋವಿಡ್ ಮಹಾಮಾರಿಯ ನಂತರ ದೇಶಾದ್ಯಂತ, ವಿಶೇಷವಾಗಿ ಕರ್ನಾಟಕದಲ್ಲಿ ಹೃದಯಾಘಾತದಿಂದ ಯುವಕರು ಮೃತಪಡುತ್ತಿರುವ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಈ ಬೆಳವಣಿಗೆ ಆರೋಗ್ಯ ತಜ್ಞರು ಮತ್ತು ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿದೆ. ಹಾಸನ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಹಲವರು ಹೃದಯಾಘಾತದಿಂದ ಮೃತಪಟ್ಟಿದ್ದು, ಮೈಸೂರಿನಲ್ಲಿ ಯುವ ಉದ್ಯಮಿಯೊಬ್ಬರು ಇದೇ ಕಾರಣದಿಂದ ಕೊನೆಯುಸಿರೆಳೆದಿದ್ದಾರೆ.
ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೃದಯಾಘಾತದ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿರುವುದು ಅಂಕಿ-ಅಂಶಗಳಿಂದ ದೃಢಪಟ್ಟಿದೆ. ದಕ್ಷಿಣ ಕನ್ನಡದಲ್ಲಿ ಕಳೆದ ಆರು ತಿಂಗಳಲ್ಲಿ 85 ಮಂದಿ ಹೃದಯಾಘಾತದಿಂದ ಬಲಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ ಎಚ್ಆರ್ ತಿಮ್ಮಯ್ಯ ಅವರ ಪ್ರಕಾರ, ಜನವರಿ 2025 ರಿಂದ ಜೂನ್ 2025 ರವರೆಗೆ ಜಿಲ್ಲೆಯಲ್ಲಿ 380 ಜನರಿಗೆ ಹೃದಯಾಘಾತವಾಗಿದ್ದು, ಇದರಲ್ಲಿ 85 ಮಂದಿ ಮೃತಪಟ್ಟಿದ್ದಾರೆ. ಈ ಸಾವುಗಳಲ್ಲಿ 54 ಪುರುಷರು ಮತ್ತು 31 ಮಹಿಳೆಯರು ಸೇರಿದ್ದಾರೆ.
ವಯಸ್ಸಿನ ವಿಂಗಡಣೆಯಲ್ಲಿ ಸಾವಿನ ಅಂಕಿ-ಅಂಶ ಇಲ್ಲಿದೆ:
20-30 ವರ್ಷ: 1
31-40 ವರ್ಷ: 3
41-50 ವರ್ಷ: 18
51-60 ವರ್ಷ: 18
61 ವರ್ಷ ಮೇಲ್ಪಟ್ಟವರು: 45
ಡಾ. ತಿಮ್ಮಯ್ಯ ಅವರು ಜನರಿಗೆ ಆತಂಕಗೊಳ್ಳದಂತೆ ಸೂಚಿಸಿದ್ದು, ಶಿಸ್ತಿನ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ, ಮತ್ತು ಒತ್ತಡ ನಿರ್ವಹಣೆಯಿಂದ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಅವರು ಒತ್ತಿ ಹೇಳಿದ್ದಾರೆ.
ಈ ಆತಂಕಕಾರಿ ಬೆಳವಣಿಗೆಯ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆಯು ಜನರಿಗೆ ತಮ್ಮ ಆರೋಗ್ಯದ ಕಡೆಗೆ ಗಮನಹರಿಸುವಂತೆ ಕರೆ ನೀಡಿದೆ. ಹೃದಯಾಘಾತದ ಲಕ್ಷಣಗಳ ಬಗ್ಗೆ ಜಾಗೃತಿಯನ್ನು ಮೂಡಿಸಲು ಮತ್ತು ತುರ್ತು ವೈದ್ಯಕೀಯ ಸೇವೆಗಳನ್ನು ಒದಗಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ಇದು ತಕ್ಷಣದ ಗಮನ ಸೆಳೆಯಬೇಕಾದ ವಿಷಯವಾಗಿದ್ದು, ಆರೋಗ್ಯ ರಕ್ಷಣೆಗೆ ಎಲ್ಲರೂ ಒತ್ತು ನೀಡಬೇಕಾಗಿದೆ.