Home ಕರಾವಳಿ ಕೋಟ್ಯಂತರ ರೂ. ಅವ್ಯವಹಾರ; ಮಂಗಳೂರು ಮೂಲದ ಬ್ಯಾಂಕ್ ಶಾಖಾಧಿಕಾರಿ ಪರಾರಿ

ಕೋಟ್ಯಂತರ ರೂ. ಅವ್ಯವಹಾರ; ಮಂಗಳೂರು ಮೂಲದ ಬ್ಯಾಂಕ್ ಶಾಖಾಧಿಕಾರಿ ಪರಾರಿ

ಭಟ್ಕಳ: ನಗರದ ನ್ಯೂ ಇಂಗ್ಲೀಷ್ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನ ಶಾಖೆಯಲ್ಲಿ ಸುಮಾರು 1.50 ಕೋಟಿಗೂ ಮಿಕ್ಕ ಅವ್ಯವಹಾರವಾಗಿದ್ದು ಶಾಖೆಯ ವ್ಯವಸ್ಥಾಪಕರನ್ನು ಅಮಾನತುಗೊಳಿಸಿ ಬ್ಯಾಂಕ್ ಪ್ರಧಾನ ಕಚೇರಿಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಕಳೆದ 2 ವರ್ಷಗಳಿಂದ ಇಲ್ಲಿ ಶಾಖಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಮಂಗಳೂರು ಮೂಲದ ಶಾಖಾಧಿಕಾರಿ ಅನೂಪ್ ಪೈ ಅವರು ಅವ್ಯವಹಾರ ನಡೆಸುತ್ತಿದ್ದಾರೆನ್ನಲಾಗಿದ್ದು, ಮಾರ್ಚ್ ಅಂತ್ಯಕ್ಕೆ ಬ್ಯಾಂಕಿನ ಆಡಿಟ್ ಮಾಡುವ ಸಂದರ್ಭದಲ್ಲಿ ಆಡಿಟರ್ ಈ ಅವ್ಯವಹಾರವನ್ನು ಬಯಲಿಗೆಳೆದಿದ್ದಾರೆ.

ಬ್ಯಾಂಕಿನಲ್ಲಿ ತುರ್ತು ಸಂದರ್ಭಕ್ಕೆಂದು ಇಡಲಾಗಿದ್ದ ಸಿಸ್ಟಮ್ ಅಕೌಂಟ್ ನಿಂದ ಹಣ ಡ್ರಾ ಮಾಡುತ್ತಿದ್ದ ಇವರು ಸುಮಾರು ಒಂದೂವರೆ ಕೋಟಿ ರೂಪಾಯಿಗಳಷ್ಟು ಅವ್ಯವಹಾರ ನಡೆಸಿದ್ದಾರೆನ್ನಲಾಗಿದೆ.

ಆಡಿಟ್ ವರದಿಯಲ್ಲಿ ವಿಷಯ ತಿಳಿಯುತ್ತಿದ್ದಂತೆಯೇ ಶಾಖಾಧಿಕಾರಿಯನ್ನು ಅಮಾನತು ಮಾಡಲಾಗಿದ್ದು, ನಂತರ ಶಾಖಾಧಿಕಾರಿಯಾಗಿ ಬಂದಿದ್ದ ರಾಘವೇಂದ್ರ ಅವರು ಅವ್ಯವಹಾರದ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ದಾಖಲಿಸಿರುವುದು ತಿಳಿಯುತ್ತಿದ್ದಂತೆಯೇ ಅನೂಪ ಪೈ ಅವರು ನಾಪತ್ತೆಯಾಗಿದ್ದು ಪೊಲೀಸರು ಅವರು ಉಳಿದುಕೊಂಡಿದ್ದ ಬಾಡಿಗೆ ಮನೆಗೆ ಹೋದಾಗ ಬೀಗ ಹಾಕಿತ್ತು ಎನ್ನಲಾಗಿದೆ.

Join Whatsapp
Exit mobile version