ಮಂಗಳೂರು | ತಾಯಿಯನ್ನು ರಕ್ಷಿಸಲು ಆಟೋ ರಿಕ್ಷಾವನ್ನೇ ಎತ್ತಿದ ಧೀರ ಬಾಲಕಿ, ಸಿಎಂ ಸಿದ್ದರಾಮಯ್ಯ ಶ್ಲಾಘನೆ

Prasthutha|

- Advertisement -

ಮಂಗಳೂರು: ತಾಯಿಯನ್ನು ರಕ್ಷಿಸಲು ಆಟೋ ರಿಕ್ಷಾವನ್ನೇ ಎತ್ತಿದ ಬಾಲಕಿಯೊಬ್ಬಳ ಸಮಯಪ್ರಜ್ಞೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಂಡಾಡಿದ್ದಾರೆ.

ಈ ಬಗ್ಗೆ ‘ಎಕ್ಸ್’ನಲ್ಲಿಂದು ಪೋಸ್ಟ್‌ವೊಂದನ್ನು ಹಾಕಿರುವ ಮುಖ್ಯಮಂತ್ರಿ, ‘ಕಿನ್ನಿಗೋಳಿ ಸಮೀಪ ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ವೇಗವಾಗಿ ಬಂದ ಆಟೋವೊಂದು ಢಿಕ್ಕಿ ಹೊಡೆದಿದೆ. ಈ ವೇಳೆ ಅಲ್ಲೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪುಟ್ಟ ಬಾಲಕಿಯೊಬ್ಬಳು ಯಾರ ಸಹಾಯಕ್ಕೂ ಕಾಯದೆ, ತಕ್ಷಣ ಕಾರ್ಯಪ್ರವೃತ್ತಳಾಗಿ ಆಟೋವನ್ನು ಎತ್ತಿ ಮಹಿಳೆಯ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಬಾಲಕಿಯ ಸಮಯಪ್ರಜ್ಞೆ, ಧೈರ್ಯ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -

ಇತ್ತೀಚಿನ ದಿನಗಳಲ್ಲಿ ಅಪಘಾತ ಸಂಭವಿಸಿದ ಸ್ಥಳಗಳಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಬೇಕಿದ್ದ ಜನರು ಸುತ್ತಲೂ ನಿಂತು ಮೊಬೈಲ್ ಮೂಲಕ ವೀಡಿಯೊ ಮಾಡುವುದನ್ನು ಹಲವು ಬಾರಿ ಮಾಧ್ಯಮಗಳಲ್ಲಿ ಕಂಡಿದ್ದೆ, ಇದು ಭವಿಷ್ಯದ ದಿನಗಳ ಬಗ್ಗೆ ನನ್ನಲ್ಲಿ ಆತಂಕವನ್ನೂ ಮೂಡಿಸಿತ್ತು. ಈ ಪುಟ್ಟ ಬಾಲಕಿಯ ಕಾರ್ಯ ಇಡೀ ಸಮಾಜಕ್ಕೊಂದು ಸಂದೇಶ ರವಾನಿಸಿದಂತಿದೆ. ಅಪಘಾತ, ಬೆಂಕಿ ಅನಾಹುತ, ಹೃದಯಾಘಾತ ಇಂತಹ ತುರ್ತು ಸಂದರ್ಭದಲ್ಲಿ ಸಂತ್ರಸ್ತರ ಪಾಲಿಗೆ ಪ್ರತೀ ಸೆಕೆಂಡ್ ಕೂಡ ಅಮೂಲ್ಯ. ಈ ವೇಳೆ ಮಾನವೀಯತೆ ಮರೆಯದಿರಿ’ ಎಂದು ಮುಖ್ಯಮಂತ್ರಿ ಸಲಹೆ ನೀಡಿದ್ದಾರೆ.

ಪಿಗ್ಮಿ ಕಲೆಕ್ಷನ್‌ ಮಾಡುತ್ತಿದ್ದ ರಾಜರತ್ನಪುರ ನಿವಾಸಿ ಚೇತನಾ (35) ಗಾಯಗೊಂಡವರು. ಇವರ ಪುತ್ರಿ 7ನೇ ತರಗತಿ ವಿದ್ಯಾರ್ಥಿನಿ ವೈಭವಿ ಸಮೀಪದ ಟ್ಯೂಷನ್‌ ಸೆಂಟರ್‌ಗೆ ಹೋಗುತ್ತಿದ್ದಳು. ಅಲ್ಲಿಂದ ಆಕೆಯನ್ನು ಕರೆತರಲು ಹೋಗುತ್ತಿದ್ದ ಮಹಿಳೆ ರಸ್ತೆ ದಾಟುತ್ತಿದ್ದಾಗ ಕಟೀಲಿನಿಂದ ಕಿನ್ನಿಗೋಳಿ ಕಡೆಗೆ ಬರುತ್ತಿದ್ದ ರಿಕ್ಷಾವೊಂದು ಇವರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಎದುರಿನಿಂದ ಬರುತ್ತಿದ್ದ ಪುತ್ರಿಯ ಎದುರಿನಲ್ಲೇ ಅಪಘಾತ ಸಂಭವಿಸಿದೆ.ಮಹಿಳೆ ರಿಕ್ಷಾದಡಿಯಲ್ಲಿ ಸಿಲುಕಿದ್ದು, ತಕ್ಷಣವೇ ಓಡಿಬಂದ ಆಕೆಯ ಪುತ್ರಿ ಹಾಗೂ ಸ್ಥಳದಲ್ಲಿದ್ದ ಯುವಕರು ರಿಕ್ಷಾವನ್ನು ಎತ್ತಿ ಮಹಿಳೆಯನ್ನು ರಕ್ಷಿಸಿದ್ದಾರೆ.



Join Whatsapp
Exit mobile version