Home ಕರಾವಳಿ ಅನೈತಿಕ ಪೋಲಿಸ್ ಗಿರಿ ಆರೋಪಿಗಳಿಗೆ ಠಾಣೆಯಲ್ಲೇ ಜಾಮೀನು ಖಂಡಿಸಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ

ಅನೈತಿಕ ಪೋಲಿಸ್ ಗಿರಿ ಆರೋಪಿಗಳಿಗೆ ಠಾಣೆಯಲ್ಲೇ ಜಾಮೀನು ಖಂಡಿಸಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ

ಮಂಗಳೂರು: ಸುರತ್ಕಲ್ ನಲ್ಲಿ ಜೀಪಿನಲ್ಲಿ ತೆರಳುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳನ್ನು ತಡೆದು ನಿಲ್ಲಿಸಿ ಹಲ್ಲೆಗೈದು, ಅವಾಚ್ಯ ಶಬ್ದಗಳಿಂದ ನಿಂದಿಸಿ ದಾಂಧಲೆ ನಡೆಸಿದ ಸಂಘಪರಿವಾರದ ಗೂಂಡಾ ವರ್ತನೆಯನ್ನು ಖಂಡಿಸಿ ಹಾಗೂ ಬಂಧಿತ ಆರೋಪಿಗಳಿಗೆ ಠಾಣೆಯಲ್ಲೇ ಜಾಮೀನು ನೀಡಿದ ಪೊಲೀಸರ ನಡೆಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲಾ ಸಮಿತಿ ವತಿಯಿಂದ ಕ್ಲಾಕ್ ಟವರ್ ಬಳಿ ಮಂಗಳವಾರ ಪ್ರತಿಭಟನೆ ನಡೆಯಿತು.

ಜಿಲ್ಲೆಯ ಪೊಲೀಸರು ಸಂಘಪರಿವಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ, ಸುರತ್ಕಲ್ ನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಸಂಘಪರಿವಾರದ ಗೂಂಡಾಗಳ ಪರವಾಗಿ ಜಿಲ್ಲೆಯ ಪೊಲೀಸರು ನಿಂತಿರುವುದು ಖಂಡನೀಯ ,ಜಿಲ್ಲೆಯ ವಿದ್ಯಾರ್ಥಿ ಸಮೂಹವನ್ನು ಸೇರಿಸಿ ಇದಕ್ಕೆ ತಕ್ಕ ಉತ್ತರವನ್ನು ಮುಂದಿನ ದಿನಗಳಲ್ಲಿ ನೀಡಲಿದ್ದೇವೆ ಎಂದು ಜಿಲ್ಲಾ ಮುಖಂಡ ಅಶ್ಫಾಕ್ ಬಂಟ್ವಾಳ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

ಜಿಲ್ಲಾ ನಾಯಕಿ ಗೌಸಿಯಾ ಮಾತನಾಡಿ, ಪದೇ ಪದೇ ಸಂಘಪರಿವಾರ ಜಿಲ್ಲೆಯ ಶಾಂತಿಯನ್ನು ಕದಡುತ್ತಿದೆ, ಇದಕ್ಕೆ ಜಿಲ್ಲೆಯ ಪೊಲೀಸರ ಮೌನವೇ ಕಾರಣ , ಇಂದು ಜಿಲ್ಲೆಯ ವಿದ್ಯಾರ್ಥಿಗಳು ಭಯದಿಂದ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಜಿಲ್ಲಾ ಮುಖಂಡ ಉಸಾಮ ಮಾತನಾಡಿದರು. ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಮಂಗಳೂರು ಜಿಲ್ಲಾಧ್ಯಕ್ಷ ಸರಫುದ್ದೀನ್, ಕಾರ್ಯದರ್ಶಿ ಮುನೀರ್ ಬಜಾಲ್ , ಅಶ್ರಫ್ ಪೊರ್ಕೊಡಿ , ಮುಖಂಡರಾದ ರಿಯಾಝ್ ಅಂಕತ್ತಡ್ಕ, ಫಯಾಝ್ ವಿಟ್ಲ, ಐಮಾನ್ ಬಂಟ್ವಾಳ , ಅಫ್ರಾ ಮತ್ತಿತರರು ಉಪಸ್ಥಿತರಿದ್ದರು.

Join Whatsapp
Exit mobile version