Home ಟಾಪ್ ಸುದ್ದಿಗಳು ಕಾರು ಅಪಘಾತ: ಸಚಿವ ಹೆಬ್ಬಾರ್ ಸಭೆಗೆ ತೆರಳುತ್ತಿದ್ದ ಎಂಜಿನಿಯರ್ ಸಾವು

ಕಾರು ಅಪಘಾತ: ಸಚಿವ ಹೆಬ್ಬಾರ್ ಸಭೆಗೆ ತೆರಳುತ್ತಿದ್ದ ಎಂಜಿನಿಯರ್ ಸಾವು

ಕಾರವಾರ: ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರು ಕರೆದಿದ್ದ ಸಭೆಯಲ್ಲಿ ಭಾಗವಹಿಸಲು ಕಾರವಾರಕ್ಕೆ ತೆರಳುತ್ತಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಕಾರೊಂದು ರಾಷ್ಟ್ರೀಯ ಹೆದ್ದಾರಿ 66ರ ಬಾಳೇಗುಳಿ ಕ್ರಾಸ್ ಬಳಿ ಅಪಘಾತಕ್ಕೀಡಾಗಿ ಇಂಜಿನಿಯರ್ ಒಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ.


ಲೋಕೋಪಯೋಗಿ ಇಲಾಖೆಯ ಸಿದ್ದಾಪುರ ಕಚೇರಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮುದುಕಣ್ಣನವರ ಮೃತಪಟ್ಟವರು. ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದು ಗಂಭೀರವಾಗಿ ಗಾಯಗೊಂಡಿದ್ದ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಕೃಷ್ಣಾರೆಡ್ಡಿ, ಟೆಕ್ನಿಷಿಯನ್ ರವಿ ಪಾಟೀಲ ಹಾಗೂ ಇಲಾಖೆ ಸಿಬ್ಬಂದಿ ಚೇತನ್ ಇವರಿಗೆ ಅಂಕೋಲಾ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ಕರೆದುಕೊಂಡು ಹೋಗಲಾಗಿದೆ.


ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಚಿವ ಶಿವರಾಮ ಹೆಬ್ಬಾರ ಅಂಕೋಲಾ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ, ಸಾಂತ್ವನ ಹೇಳಿದರು. ಗಂಭೀರ ಸ್ವರೂಪದ ಗಾಯಾಳುಗಳನ್ನು ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವ್ಯವಸ್ಥೆ ಕಲ್ಪಿಸಿದರು. ಅಪಘಾತದಲ್ಲಿ ಅಧಿಕಾರಿ ಮೃತಪಟ್ಟ ಕಾರಣ, ಸಚಿವ ಹೆಬ್ಬಾರ ಅವರು ಸಭೆಯನ್ನು ರದ್ದು ಪಡಿಸಿದ್ದಾರೆ. ಅಧಿಕಾರಿಗಳಿಂದ ಮಾಹಿತಿ ಪಡೆದು ಅಣಶಿಯ ಭೂ ಕುಸಿತದ ಪ್ರದೇಶ, ಕದ್ರಾ ಹಾಗೂ ಮಲ್ಲಾಪುರದಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Join Whatsapp
Exit mobile version