ಸಾಂವಿಧಾನಿಕ ಕ್ಲಬ್ ನಿರ್ಧಾರ ಹಿಂಪಡೆಯಲು ಬ್ರಿಜೇಶ್ ಕಾಳಪ್ಪ ಆಗ್ರಹ

Prasthutha|

ಬೆಂಗಳೂರು: ಪಾರಂಪರಿಕ ಕಟ್ಟಡವಾದ ಬಾಲಬ್ರೂಯಿ ಅತಿಥಿ ಗೃಹವನ್ನು ಶಾಸಕರ ಮೋಜುಮಸ್ತಿಗಾಗಿ ದುರ್ಬಳಕೆ ಮಾಡುವ ನಿರ್ಧಾರದಿಂದ ರಾಜ್ಯ ಸರ್ಕಾರ ತಕ್ಷಣ ಹಿಂದೆ ಸರಿಯಬೇಕು ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಬ್ರಿಜೇಶ್ ಕಾಳಪ್ಪ ಆಗ್ರಹಿಸಿದ್ದಾರೆ.

- Advertisement -

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬ್ರಿಜೇಶ್ ಕಾಳಪ್ಪ, “ಬಾಲಬ್ರೂಯಿ ಅತಿಥಿ ಗೃಹವನ್ನು ಸಾಂವಿಧಾನಿಕ ಕ್ಲಬ್ ಆಗಿ ಮಾರ್ಪಾಡು ಮಾಡುವ ಪ್ರಸ್ತಾವನೆಗೆ ಸಿಎಂ ಬಸವರಾಜ ಬೊಮ್ಮಾಯಿ ಇತ್ತೀಚೆಗಷ್ಟೇ ಅನುಮೋದನೆ ನೀಡಿದ್ದಾರೆ. ಇದರಿಂದಾಗಿ ಬರೋಬ್ಬರಿ 172 ವರ್ಷಗಳ ಇತಿಹಾಸವಿರುವ ಕಟ್ಟಡದ ಸ್ಥಳದಲ್ಲಿ ಶಾಸಕರಿಗೆ ಅಲ್ಲಿ ಮೋಜುಮಸ್ತಿ ಮಾಡಲು ಕ್ಲಬ್ ನಿರ್ಮಿಸುವುದರಿಂದ ಆ ಸ್ಥಳದ ಪಾವಿತ್ರ್ಯತೆಗೆ ಧಕ್ಕೆಯಾಗಲಿದೆ. ಅಲ್ಲಿರುವ ನೂರಾರು ವರ್ಷ ಹಳೆಯದಾದ ಮರಗಳಿಗೂ ಕೊಡಲಿ ಏಟು ಬೀಳಲಿದೆ” ಎಂದು ಹೇಳಿದರು.

“ಶಾಸಕರಿಗೆ ವೇತನದ ಜೊತೆಗೆ ತಿಂಗಳಿಗೆ 60,000 ರೂಪಾಯಿ ಕ್ಷೇತ್ರ ಭತ್ಯೆ, 50,000 ರೂಪಾಯಿ ಪ್ರಯಾಣ ಭತ್ಯೆ ಸಿಗುತ್ತಿದೆ. ಆಪ್ತ ಸಹಾಯಕನ ವೇತನಕ್ಕೆಂದು 20,000 ರೂಪಾಯಿಯನ್ನು ಕೂಡ ಸರ್ಕಾರ ಶಾಸಕರಿಗೆ ನೀಡುತ್ತಿದೆ. ಅಂಚೆ ವೆಚ್ಚಕ್ಕೆಂದು 5,000 ರೂಪಾಯಿಯನ್ನೂ ಪ್ರತಿ ತಿಂಗಳು ಶಾಸಕರ ಪಡೆಯುತ್ತಿದ್ದಾರೆ. ತಿಂಗಳಿಗೆ ಕೇವಲ 500 ರೂಪಾಯಿಗೆ ಅನ್ಲಿಮಿಟೆಡ್ ಕರೆ ಸೌಲಭ್ಯವನ್ನು ನೆಟ್ವರ್ಕ್ ಕಂಪನಿಗಳು ಒದಗಿಸುತ್ತಿದ್ದರೂ ಬರೋಬ್ಬರಿ 20,000 ರೂಪಾಯಿಯನ್ನು ದೂರವಾಣಿ ವೆಚ್ಚವೆಂದು ಶಾಸಕರಿಗೆ ನೀಡಲಾಗುತ್ತಿದೆ. ಇದಲ್ಲದೇ ಶಾಸಕರ ಕುಟುಂಬಗಳಿಗೆ ವಿದ್ಯುತ್, ನೀರು, ವೈದ್ಯಕೀಯ ಮುಂತಾದ ಸೌಲಭ್ಯಗಳು ಕೂಡ ಸರ್ಕಾರದಿಂದ ಉಚಿತವಾಗಿ ಸಿಗುತ್ತಿವೆ. ಇಷ್ಟೆಲ್ಲ ಸೌಲಭ್ಯಗಳು ಲಭ್ಯವಿದ್ದರೂ ಸಾಂವಿಧಾನಿಕ ಕ್ಲಬ್ ಹೆಸರಿನಲ್ಲಿ ಇನ್ನಷ್ಟು ಐಶಾರಾಮಿ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಮುಂದಾಗಿರುವುದು ಖಂಡನೀಯ” ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.

- Advertisement -

“ನಾಡು ಅಭಿವೃದ್ಧಿಯಾಗಬೇಕಾದರೆ ನಾಡಿನ ಜನರಿಗೆ ಗುಣಮಟ್ಟದ ಸೌಲಭ್ಯಗಳು ಸಿಗಬೇಕು. ಶಾಸಕರುಗಳಿಗೆ ಇನ್ನಷ್ಟು ಸೌಲಭ್ಯ ನೀಡುವ ಬದಲು ಜನರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಸರ್ಕಾರ ಯೋಚಿಸಲಿ. ದೆಹಲಿಯ ಆಮ್ ಆದ್ಮಿ ಪಾರ್ಟಿ ಸರ್ಕಾರವು ಸಾಮಾನ್ಯರಿಗೆ ತಿಂಗಳಿಗೆ 20,000 ಲೀಟರ್ ಕುಡಿಯುವ ನೀರು ಹಾಗೂ 200 ಯೂನಿಟ್ ತನಕ ವಿದ್ಯುತನ್ನು ಉಚಿತವಾಗಿ ನೀಡುತ್ತಿದೆ. ಮಹಿಳೆಯರಿಗೆ ಸಾರಿಗೆ ಸೇವೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೂಡ ಅಲ್ಲಿ ಉಚಿತವಾಗಿ ದೊರೆಯುತ್ತಿದೆ. ಸಿಎಂ ಬೊಮ್ಮಾಯಿಯವರು ಜನರ ತೆರಿಗೆ ಹಣವನ್ನು ಶಾಸಕರ ಮೋಜುಮಸ್ತಿಗೆ ಬಳಸುವ ಬದಲು ದೆಹಲಿ ಮಾದರಿಯಲ್ಲಿ ಅದನ್ನು ಜನರಿಗೇ ತಲುಪಿಸುವ ಕೆಲಸ ಮಾಡಲಿ” ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.

Join Whatsapp