ಬೋಳಿಯಾರ್ ಘರ್ಷಣೆ ಪ್ರಕರಣ: ಪೊಲೀಸರಿಂದ ಅಕ್ರಮ ಬಂಧನ ?

Prasthutha|

ಮಂಗಳೂರು: ಜೂನ್ 9ರಂದು ಬೋಳಿಯಾರ್ ನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ವೇಳೆ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಆರೇಳು ಮಂದಿ ಮುಸ್ಲಿಂ ಯುವಕರನ್ನು ಕೊಣಾಜೆ ಠಾಣಾ ಪೊಲೀಸರು ಠಾಣೆಯಲ್ಲಿ ಅಕ್ರಮ ಬಂಧನಲ್ಲಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

- Advertisement -

ಪ್ರಕರಣದ ಕೆಲ ಆರೋಪಿಗಳು ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಮತ್ತು ದೂರದ ಸಂಬಂಧಿಗಳನ್ನು ಕೋಣಾಜೆ ಪೊಲೀಸರು ವಶಕ್ಕೆ ಪಡೆದು ಠಾಣೆಯಲ್ಲಿ ಅಕ್ರಮವಾಗಿ ಕೂಡಿಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಬೋಳಿಯಾರ್ ಘಟನೆಗೆ ಸಂಬಂಧವೇ ಇಲ್ಲದ ಆಲಂಪಾಡಿ ಪ್ರದೇಶದ  ಅಮಾಯಕ ಯುವಕನೊಬ್ಬನನ್ನು ಕೋಣಾಜೆ ಪೊಲೀಸರು ಕಳೆದ ಎರಡು ರಾತ್ರಿ ಠಾಣೆಯಲ್ಲೇ ಕೂಡಿಹಾಕಿರುವುದಾಗಿ ಆರೋಪ ಕೇಳಿಬಂದಿದೆ. ಪ್ರಕರಣದಲ್ಲಿ ಯಾವುದೇ ಪಾತ್ರ ಇಲ್ಲದಿದ್ದರೂ ಬೋಳಿಯಾರ್, ನಂದರು, ಅಮ್ಮೆಂಬಳ ಪ್ರದೇಶದ ಐದಾರು ಮಂದಿ ಅಮಾಯಕರನ್ನು ಠಾಣೆಯಲ್ಲಿ ಅಕ್ರಮವಾಗಿ ಬಂಧನದಲ್ಲಿಡಲಾಗಿದೆಎಂದು ಸ್ಥಳೀಯರು ಆರೋಪಿಸಿದ್ದಾರೆ.

- Advertisement -

ತಲೆಮರೆಸಿಕೊಂಡಿರುವ ಪ್ರಕರಣದ ಆರೋಪಿಗಳು ಸಿಗುವ ತನಕ ಅಮಾಯಕರನ್ನು ಪೊಲೀಸರು ಅಕ್ರಮವಾಗಿ ಬಂಧನದಲ್ಲಿಟ್ಟುಕೊಳ್ಳುವ ಸಾಧ್ಯತೆ ಇದೆ, ಇದರಿಂದ ಅಮಾಯಕರಿಗೆ ಅನ್ಯಾಯ ಆಗಿದೆ ಎಂದು ಅವರ ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ.

ಎಫ್ ಐಆರ್ ನಲ್ಲಿ ಹೆಸರಿಲ್ಲದಿದ್ದರೂ, ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯದೇ ಅಮಾಯಕರನ್ನು ಮನೆಯಿಂದ ಎಳೆದುಕೊಂಡು ಹೋಗಿ ಠಾಣೆಯಲ್ಲಿ ಇರಿಸಿದ್ದಾರೆ, ವಿಚಾರಣೆಗೆ ಕರೆದುಕೊಂಡು ಹೋದರೂ ಸಂಜೆ 6 ಗಂಟೆ ನಂತರ ಠಾಣೆಯಲ್ಲಿ ಕೂಡಿಹಾಕುವುದು ಕಾನೂನುಬಾಹಿರ, ಹೀಗಾಗಿ ಅನ್ಯಾಯಕ್ಕೆ ಒಳಗಾಗಿರುವ ಅಮಾಯಕರಿಗೆ ನ್ಯಾಯ ಒದಗಿಸಿಕೊಡಬೇಕು’ ಎಂದು ಅವರ ಸಂಬಂಧಿಕರು ಆಗ್ರಹಿಸಿದ್ದಾರೆ.

Join Whatsapp
Exit mobile version