ಮುಸ್ಲಿಮರಲ್ಲಿ ಫಲವತ್ತತೆ ಪ್ರಮಾಣ ಹೆಚ್ಚು; ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ

Prasthutha|

ಪಾಟ್ನಾ : “ಹಿಂದೂಗಳಿಗಿಂತ ಮುಸ್ಲಿಮರಲ್ಲಿ ಫಲವತ್ತತೆ ಪ್ರಮಾಣ ಹೆಚ್ಚು” ಎಂದು ಬಿಹಾರ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಹೇಳಿಕೆ ನೀಡಿರುವುದು ಬಾರಿ ವಿವಾದ ಹುಟ್ಟುಹಾಕಿದೆ. “ಹಿಂದೂಗಳಿಗಿಂತ ಮುಸ್ಲಿಮರಲ್ಲಿ ಫಲವತ್ತತೆ ಪ್ರಮಾಣ ಹೆಚ್ಚು. ಅವರು ಭಾರತವನ್ನು ಇಸ್ಲಾಮ್ ಆಗಿ ಬದಲಾಯಿಸಲು ಬಯಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

- Advertisement -

ಬಿಹಾರ ಸಿಎಂ ನಿತೀಶ್ ಕುಮಾರ್ ಇತ್ತೀಚೆಗೆ ವಿಧಾನಸಭೆಯಲ್ಲಿ ರಾಜ್ಯದಲ್ಲಿ ಜನಸಂಖ್ಯೆ ಕುರಿತು ಮಾತನಾಡುವಾಗ ಫಲವತ್ತತೆ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ ಎಂದು ಹೇಳಿಕೆ ನೀಡಿದ್ದು ಇದಕ್ಕೆ ಹರಿಭೂಷಣ್ ಠಾಕೂರ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಬಿಹಾರದ ಹಿಂದೂಗಳಲ್ಲಿ ಫಲವತ್ತತೆ ಪ್ರಮಾಣ ಕಡಿಮೆಯಾಗಿದೆ, ಮುಸ್ಲಿಮರಲ್ಲಿ ಅಲ್ಲ ಎಂದು ಹೇಳಿರುವ ಅವರು, ಈ ಜನಸಂಖ್ಯೆ ಹೆಚ್ಚಳವನ್ನು ತಡೆಯಲು ಕಾನೂನು ತರಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ತರಬೇಕು. ಇಲ್ಲಿನ ಸಂಪನ್ಮೂಲಗಳು ಕಡಿಮೆಯಾಗಿವೆ. ಆದರೆ ಕೆಲವರು ಜನಸಂಖ್ಯೆ ಬೆಳೆಸುತ್ತಲೇ ಇದ್ದಾರೆ. ಅವರು ಇಡೀ ದೇಶವನ್ನು ಇಸ್ಲಾಮಿಕ್ ರಾಜ್ಯ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ. ಜೆಡಿಯು ಮುಸ್ಲಿಂ ಮುಖಂಡರ ಬಗ್ಗೆ ಮಾತನಾಡಿರುವ ಹರಿಭೂಷಣ್ ಠಾಕೂರ್, “ರಾಷ್ಟ್ರ ಮೊದಲು, ನಂತರ ಧರ್ಮ. ಆದರೆ ಕೆಲವರಿಗೆ ಧರ್ಮ ಮೊದಲಾಗಿದೆ, ರಾಷ್ಟ್ರ ನಂತರದ ವಿಷಯವಾಗಿದೆ. ಅವರಲ್ಲಿ ದೇಶಾಭಿಮಾನದ ಭಾವನೆಯೇ ಇಲ್ಲವಾಗಿದೆ” ಎಂದು ಹೇಳಿದ್ದಾರೆ.

- Advertisement -

ಬಿಜೆಪಿ ಮುಖಂಡನ ಹೇಳಿಕೆ ಕುರಿತು ಎಐಎಂಐಎಂ ಶಾಸಕ ಅಖ್ತರ್ ಉಲ್ ಇಮಾನ್ ಪ್ರತಿಕ್ರಿಯಿಸಿದ್ದು, ಬಿಜೆಪಿ ಶಾಸಕರ ಈ ಹೇಳಿಕೆ ಅಸಾಂವಿಧಾನಿಕವಾಗಿದೆ ಹಾಗೂ ಸಮಾಜವನ್ನು ಒಡೆಯುವಂಥಹ ಹೇಳಿಕೆಯಾಗಿದೆ. ಫಲವತ್ತತೆಗೂ ಧರ್ಮಕ್ಕೂ ಸಂಬಂಧವಿಲ್ಲ. ಇದು ಬಡತನ ಹಾಗೂ ಅನಕ್ಷರತೆಗೆ ಸಂಬಂಧಿಸಿದ್ದು ಎಂದು ದೂರಿದ್ದಾರೆ.

Join Whatsapp