‘ಸರ್ಕಾರಕ್ಕೆ ಧಮ್ಮು- ತಾಕತ್ತು ಇದ್ದರೆ ಬಂದ್ ಗೆ ಕರೆ ಕೊಟ್ಟವರನ್ನು ಬಂಧಿಸಲಿ’
ಮಂಗಳೂರು: ರೌಡಿಗಳ ಶವಗಳನ್ನು ಬಿಜೆಪಿ ಹಿಂದುತ್ವದ ಹೆಸರಲ್ಲಿ ಮೆರವಣಿಗೆ ಮಾಡಿಸಿ ದಾಂಧಲೆ ನಡೆಸುತ್ತಿದೆ ಎಂದು ಎಸ್ ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಲ್ಲು ಹೊಡೆದು, ಬಹಿರಂಗವಾಗಿ ತಲ್ವಾರು ಹಿಡಿಯೋದು, ಬಂದ್ ಮಾಡಿಸಿ ಬಳಿಕ ಪ್ರೆಸ್ ಮೀಟ್ ನಲ್ಲಿ ಗನ್ ಕೊಡಿ , ತಲ್ವಾರು ಹಿಡಿಯಲು ಅನುಮತಿ ನೀಡಿ ಎಂದು ಕೇಳುವುದು ಎಷ್ಟು ಸರಿ?. ಪೊಲೀಸರು ವಾಹನದಿಂದ ತಲ್ವಾರು ತೆಗೆಸಿದ್ದು ತಪ್ಪೆಂದು ಬಜರಂಗದಳ ಆರೋಪಿಸುತ್ತಿದೆ. ಹಾಗಾದರೆ ಇವರಿಗೆ ಶಸ್ತ್ರಾಸ್ತ್ರ ಬಳಸಲು ಅವಕಾಶ ನೀಡಬೇಕೇ ಎಂದು ಕಿಡಿಕಾರಿದರು.
ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರು ಗನ್ ಕೇಳುತ್ತಿದ್ದಾರೆ, ಇವರಿಗೆ ಅದನ್ನು ಒದಗಿಸಿದರೆ ಸಮಾಜದ ಸ್ವಾಸ್ಥ್ಯ ಏನಾದೀತು? ಕೇವಲ ಕೋಮು ನಿಗ್ರಹ ದಳ ಘೋಷಣೆ ಸಾಲದು. ಅದು ಶೀಘ್ರದಲ್ಲೇ ಜಾರಿಗೆ ತರಬೇಕು ಒತ್ತಾಯಿಸಿದರು.
ಹರಕಲು ನಾಲಗೆಗೆ ಪ್ರಸಿದ್ಧವಾದ ಶಾಸಕ ಹರೀಶ್ ಪೂಂಜಗೆ ಮಾನಸಿಕ ಸ್ಥಿಮಿತವಿಲ್ಲ. ನಾಲಗೆಯಲ್ಲಿ ಹಿಡಿತವಿಲ್ಲ. ಆದ್ದರಿಂದ ತೆಕ್ಕಾರಿನಲ್ಲಿ ಧರ್ಮದ ವಿಚಾರದಲ್ಲಿ ಉರಿಯುವ ಬೆಂಕಿಗೆ ತುಪ್ಪು ಸುರಿಯುತ್ತಿದ್ದಾರೆ. ಅವರ ಮೇಲೆ ಎಫ್ ಐ ಆರ್ ಆದರೂ ಬಂಧನ ಯಾಕಾಗುತ್ತಿಲ್ಲ. ಉಸ್ತುವಾರಿ ಸಚಿವರ ಬಗ್ಗೆ ಅತೀ ಕೀಳುಮಟ್ಟದ ಭಾಷೆ ಪ್ರಯೋಗಿಸಿಯೂ ಯಾಕೆ ಕ್ರಮವಾಗಿಲ್ಲ. ಈ ಸರ್ಕಾರಕ್ಕೆ ಧಮ್ಮು ತಾಕತ್ತು ಇದ್ದರೆ ಬಜರಂಗದಳ ನಾಯಕರು, ಬಂದ್’ಗೆ ಕರೆಕೊಟ್ಟವರು, ಕೋಮು ದ್ವೇಷ ಹರಡುವವರು, ಭಯದ ವಾತಾವರಣ ಸೃಷ್ಟಿವವರನ್ನು ಶೀಘ್ರ ಬಂಧಿಸಲಿ ಎಂದು ಸಾವಾಲು ಹಾಕಿದರು.
ಫಾಝಿಲ್ ಕೊಲೆಯನ್ನು ನಾವೇ ಮಾಡಿದ್ದು ಎಂದು ಬಹಿರಂಗವಾಗಿ ಹೇಳಿದಾಗಲೇ ಶರಣ್ ಪಂಪ್ವೆಲ್ ನನ್ನು ಬಂಧಿಸಿದ್ದರೆ, ಇಂದು ಈ ಜಿಲ್ಲೆಯಲ್ಲಿ ಈ ಸ್ಥಿತಿ ಬರುತ್ತಿರಲಿಲ್ಲ. ಬೀದಿಯಲ್ಲಿ ಬಡಿದಾಡುವುದು ಬಂಟರು ಮತ್ತು ಬಿಲ್ಲವರಂತಹ ಕೆಳ ವರ್ಗದವರು.ರಾಜಕಾರಣಿಗಳ ಮಕ್ಕಳು ಉನ್ನತ ಮಟ್ಟದ ಜೀವನ ನಡೆಸುತ್ತಿದ್ದಾರೆ ಎಂದರು.
ಎಸ್ ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮಾತನಾಡಿ, ಶರಣ್ ಪಂಪ್ವೆಲ್ ಮತ್ತು ಕೋಮುವಾದಿ ಶಾಸಕ ಪೂಂಜಾರ ಮೇಲೆ ಪೊಲೀಸರಿಗೆ ಮೃದುಧೋರಣೆ ಯಾಕೆ ಎಂದು ಪ್ರಶ್ನಿಸಿದರು.
ಅಶ್ರಫ್ ಕೊಲೆಗಡುಕರ ಮುಖ ಪರಿಚಯ ಸಾಕ್ಷಿಗಳು ನೀಡಿದ್ರೂ ಪೊಲೀಸರು ರಕ್ಷಿಸಲು ಯಾಕೆ ಹೆಣಗಾಡುತ್ತಿದ್ದಾರೆ?. ಈ ಪೊಲೀಸರಿಗೆ ಯುಪಿಯ ಸಂಘಪರಿವಾರದ ಶಾಖೆಯಿಂದ ತರಬೇತಿ ನೀಡಿದ್ದಾ? ದ.ಕ ಜಿಲ್ಲೆಯ ಜನ ಶಾಂತಿ ಬಯಸುವವರು ಆದ್ದರಿಂದ ಪೊಲೀಸರು ಶರಣ್ ಪಂಪ್ವೆಲಿನ ನಡೆಯಿಂದ ವಿಚಲಿತರಾಗಬೇಡಿ ಗೃಹಮಂತ್ರಿ ಮಂಗಳೂರಿಗೆ ಬಂದು ಕೋಮು ನಿಗ್ರಹ ದಳ ರೂಪಿಸುತ್ತೇನೆ ಎಂದು ಹೇಳಿದ್ದರು. ಅದು ಯಾವಾಗ, ಇನ್ನೊಂದು ಕೊಲೆಯಾದ ನಂತರವೇ? ಎಂದು ಪ್ರಶ್ನಿಸಿದರು.