ಬೇಮಳಖೇಡ ಅಪಘಾತ ಪ್ರಕರಣ: ಪರಿಹಾರ ನೀಡುವಂತೆ ಸಿಎಂಗೆ ಪತ್ರ ಬರೆದ ಶಾಸಕ ಬಂಡೆಪ್ಪ ಖಾಶೆಂಪುರ್

Prasthutha|

ಬೀದರ್: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬೇಮಳಖೇಡದ ಸರ್ಕಾರಿ ಪ್ರೌಢ ಶಾಲೆ ಬಳಿ ಶುಕ್ರವಾರ ಸಂಜೆ ಸಂಭವಿಸಿದ ಆಟೋ ಮತ್ತು ಲಾರಿ ನಡುವಿನ ಅಪಘಾತದಲ್ಲಿ ಮೃತಪಟ್ಟ ಮಹಿಳೆಯರ ಕುಟುಂಬಗಳಿಗೆ ತಲಾ 10 ಲಕ್ಷ ರೂ., ಗಾಯಗೊಂಡ ಮಹಿಳೆಯರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಒದಗಿಸಿಕೊಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರನ್ನು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್   ಒತ್ತಾಯಿಸಿದ್ದಾರೆ.

- Advertisement -

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಶನಿವಾರ ಪತ್ರ ಬರೆದಿರುವ ಅವರು, ‘ನ. 04ರ ಸಂಜೆ ನನ್ನ ಮತಕ್ಷೇತ್ರದ ಬೇಮಳಖೇಡದ ಸರ್ಕಾರಿ ಪ್ರೌಢ ಶಾಲೆಯ ಬಳಿ ಆಟೋ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಉಡಮನಳ್ಳಿಯ ಹದಿನೇಳು ಜನ ಕೂಲಿ ಕಾರ್ಮಿಕರ ಪೈಕಿ ಏಳು ಜನರು ಮೃತಪಟ್ಟಿದ್ದಾರೆ ಹಾಗೂ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಮತ್ತು ಇನ್ನುಳಿದ ಎಂಟು ಜನರು ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

 ಅಪಘಾತಕ್ಕೆ ಒಳಗಾದ ನನ್ನ ಮತಕ್ಷೇತ್ರದ ಉಡಮನಳ್ಳಿಯ ಬಡ ಕುಟುಂಬದ ಕೂಲಿ ಕಾರ್ಮಿಕರು, ಕೂಲಿ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಇವರು ಕುಟುಂಬ ಆದಾರ ಸ್ತಂಭವಾಗಿದ್ದರು. ಅಪಘಾತದಲ್ಲಿ ಮೃತಪಟ್ಟ ಮತ್ತು ಗಾಯಗೊಂಡ ಕುಟುಂಬದ ನಿರ್ವಹಣೆ ತುಂಬಾ ತೊಂದರಿಯಾಗಿದೆ. ಆದುದರಿಂದ, ನ. 04ರ ಸಂಜೆ ಬೇಮಳಖೇಡದ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ ಏಳು ಜನರಿಗೆ ತಲಾ 10 ಲಕ್ಷ ರೂ. ಪರಿಹಾರವನ್ನು ಹಾಗೂ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿರುವ ಇಬ್ಬರು ಹಾಗೂ ಗಂಭೀರವಾಗಿ ಗಾಯಗೊಂಡ ಎಂಟು ಜನರಿಗೆ ಉತ್ತಮವಾದ ಉಚಿತ ಚಿಕಿತ್ಸೆ ನೀಡಿ ಅವರಿಗೆ ತಲಾ 05 ಲಕ್ಷ ರೂ. ಪರಿಹಾರವನ್ನು ನೀಡುವಂತೆ ತಮ್ಮಲ್ಲಿ ಕೋರುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಬರೆದಿರುವ ಪತ್ರದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್  ಮನವಿ ಮಾಡಿದ್ದಾರೆ.

Join Whatsapp
Exit mobile version