ಬೆಂಗಳೂರು: ಗಾಂಜಾ ಮಾರಾಟಕ್ಕೆ ಯತ್ನಿಸಿದ ಪೊಲೀಸ್ ಅಧಿಕಾರಿಗಳ ಅಮಾನತು

Prasthutha|

ಬೆಂಗಳೂರು: ಗಾಂಜಾ ಮಾರಾಟಕ್ಕೆ ಯತ್ನಿಸಿದ ಪೋಲಿಸರನ್ನು ಅಮಾನತು ಮಾಡಲಾಗಿದೆ. ಪ್ರಕರಣವನ್ನು ಸರಿಯಾದ ರೀತಿಯಲ್ಲಿ ತನಿಖೆ ನಡೆಸದ ಕಾರಣ ಆರ್.​​ಟಿ ನಗರ ಇನ್ಸ್ಪೆಕ್ಟರ್ ಅಶ್ವಥ್ ಗೌಡ ಮತ್ತು ಪಿಎಸ್​​ಐ ವೀರಭದ್ರರನ್ನು ನಗರ ಪೊಲೀಸ್ ಆಯುಕ್ತ ಕಮಲ್​ ಪಂತ್​ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

- Advertisement -

ಇಂತಹ ಸಿಬ್ಬಂದಿಗಳ ಪೂರ್ವ ಪರ ಪರಿಶೀಲನೆ ನಡೆಸದೆ ಸಿಎಂ ನಿವಾಸಕ್ಕೆ ನಿಯೋಜನೆ ಮಾಡಿದ್ದ ಕಾರಣ ಡಿಸಿಪಿ ಸೌತ್ ಈಸ್ಟ್ ಶ್ರೀನಾಥ್ ಜೋಶಿ ಅವರಿಗೆ ಕಮಿಷನರ್ ಮೆಮೊ ನೀಡಿದ್ದಾರೆ. ಸಿಎಂ ನಿವಾಸ ಭದ್ರತೆಯಯಲ್ಲಿ ಹಾಗೂ ನಿಯೋಜಿತ ಸಿಬ್ಬಂದಿ ಮೇಲೆ ನಿಗಾ ಇರಿಸುವುದು ಹಾಗೂ ಸರಿಯಾದ ರೀತಿಯಲ್ಲಿ ಭದ್ರತೆ ನೀಡದಿರುವ ಕಾರಣ ವಿಐಪಿ ಡಿಸಿಪಿ ಮಂಜುನಾಥ್ ಬಾಬು ಅವರಿಗೂ ಕೂಡ ಕಮಿಷನರ್ ಮೆಮೊ ನೀಡಿದ್ದು, ಉತ್ತರ ನೀಡುವಂತೆ ಸೂಚನೆ ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ..!

- Advertisement -

ಮೋಸ್ಟ್ ವಾಂಟೆಡ್ ಪೆಡ್ಲರ್​ಗಳಿಂದ ಗಾಂಜಾ ಖರೀದಿಸಿ ಮಾರಾಟ ಮಾಡುತ್ತಿದ್ದ ಕೊರಮಂಗಲ ಠಾಣೆಯ ಸಿಬ್ಬಂದಿಯಾದ ಶಿವಕುಮಾರ್ ಹಾಗೂ ಸಂತೋಷ್ ಸಿಕ್ಕಿಬಿದ್ದಿದ್ದಾರೆ. ಸಿಎಂ ಬೊಮ್ಮಾಯಿ ಮನೆಯ ಭದ್ರತೆಗೆ ನಿಯೋಜನೆಗೊಂಡಿದ್ದ ಇವರಿಬ್ಬರು, ಯಾರಿಗೂ ಅನುಮಾನ ಬಾರದಿರಲೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆಯಂಗಳದಲ್ಲೇ ಗಾಂಜಾ ಡೀಲ್​ ಮಾಡುತ್ತಿದ್ದರು. ಸಿಎಂ ಮನೆಗೆ ಪೊಲೀಸರಿಗೆ ಮಾತ್ರ ಅವಕಾಶವಿರುತ್ತದೆ. ಹಾಗಾಗಿ, ಮುಖ್ಯಮಂತ್ರಿ ಮನೆಯ ಬಳಿಯೇ ಪೆಡ್ಲರ್​ಗಳಿಂದ ಗಾಂಜಾ ತರಿಸಿಕೊಂಡು ಮಾರಾಟ ಮಾಡುತ್ತಿದ್ದರು.

ಅದೇ ರೀತಿ ಇಂದು ಅಖಿಲ್ ರಾಜ್ ಹಾಗೂ ಅಮ್ಜದ್ ಖಾನ್​ ಎಂಬ ಪೆಡ್ಲರ್​ಗಳ ಜೊತೆ ಆರ್.ಟಿ.ನಗರದ 80 ಅಡಿ ರಸ್ತೆ ಬಳಿ ಗಾಂಜಾ ಡೀಲ್​ ಮಾಡುತ್ತಿದ್ದರು. ಪೆಡ್ಲರ್​ಗಳಿಂದ ಗಾಂಜಾ ಪಡೆದು ಹಣ ಕೊಡದೇ ಹಲ್ಲೆಗೆ ಮುಂದಾಗಿದ್ದರು. ಇದೇ ಸಂದರ್ಭದಲ್ಲಿ ಸಿಎಂ ಮನೆ ಮುಂದೆ ಗಸ್ತು ತಿರುಗುತ್ತಿದ್ದ ಹೊಯ್ಸಳ ಸಿಬ್ಬಂದಿಗೆ ಅನುಮಾನ ಬಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿಯೇ ಗಾಂಜಾ ದಂಧೆಗಿಳಿದಿರುವುದನ್ನು ಕಂಡು ದಂಗಾಗಿದ್ದರು.

Join Whatsapp