ದೇವಸ್ಥಾನದ ವಾಟರ್‌ ಕೂಲರ್‌ ಫೌಂಡೇಶನ್‌ ನಲ್ಲಿ ಮುಸ್ಲಿಂ ದಾನಿಯ ಹೆಸರಿದ್ದುದಕ್ಕೆ ನಾಮಫಲಕವನ್ನೇ ಧ್ವಂಸಗೊಳಿಸಿದ ಬಜರಂಗ ದಳ ಕಾರ್ಯಕರ್ತರು!

Prasthutha|

ನವದೆಹಲಿ : ಉತ್ತರ ಪ್ರದೇಶದ ಅಲಿಘಡ್‌ ನಲ್ಲಿ ದೇವಸ್ಥಾನವೊಂದರ ಕುಡಿಯುವ ನೀರಿನ ವ್ಯವಸ್ಥೆಯಿರುವ ವಾಟರ್‌ ಕೂಲರ್‌ ಅಳವಡಿಸಲಾದ ಪೀಠದಲ್ಲಿನ ನಾಮಫಲಕದಲ್ಲಿ ಸ್ಥಳೀಯ ಮುಸ್ಲಿಂ ದಾನಿಯೊಬ್ಬರ ಹೆಸರು ಇದೆ ಎಂಬ ಕಾರಣಕ್ಕೆ, ಬಿಜೆಪಿ ಬೆಂಬಲಿತ ಸಂಘಟನೆ ಬಜರಂಗ ದಳದ ಕಾರ್ಯಕರ್ತರು ನಾಮಫಲಕವನ್ನೇ ಒಡೆದು ಹಾಕಿದ ಬಗ್ಗೆ ವರದಿಯಾಗಿದೆ.

- Advertisement -

ನಗರದ ಬಿಜೆಪಿ ಕಾರ್ಯಕರ್ತ ಕರಣ್‌ ಚೌಧರಿ ಎಂಬಾತ ಈ ಕೃತ್ಯ ಎಸಗಿದ್ದಾನೆ. ದೇವಸ್ಥಾನದೊಳಗೆ ಇನ್ನೊಬ್ಬರ ಹೆಸರು ಇರುವುದನ್ನು ಸಹಿಸಿಕೊಳ್ಳಳು ಸಾಧ್ಯವಿಲ್ಲ ಎಂದು ಚೌಧರಿ ಹೇಳಿದ್ದಾನೆ. ಮಾರ್ಬಲ್‌ ಕಲ್ಲಿನ ಪೀಠವನ್ನು ಆತ ಸುತ್ತಿಗೆಯಿಂದ ಒಡೆದು ಹಾಕಿದ್ದಾನೆ.

ಆಲಿಗಢದ ಲೋಧಾ ಪ್ರದೇಶದ ಖೇರೇಶ್ವರ ಮಹಾದೇವ ದೇವಸ್ಥಾನಕ್ಕೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ವಾಟರ್‌ ಕೂಲರ್‌ ವ್ಯವಸ್ಥೆಯನ್ನು ಸಲ್ಮಾನ್‌ ಶಹೀದ್‌ ಎಂಬ ದಾನಿ ಕಳೆದ ವಾರ ಕೊಡುಗೆಯಾಗಿ ನೀಡಿದ್ದರು. ಸಣ್ಣ ಸಮಾರಂಭವನ್ನು ನಡೆಸಿ ಶಹೀದ್‌ ಅವರ ಕೊಡುಗೆಗೆ ದೇವಸ್ಥಾನದ ಅರ್ಚಕರು ಕೃತಜ್ಞತೆಗಳನ್ನೂ ಸಲ್ಲಿಸಿದ್ದರು.

- Advertisement -

ಬಜರಂಗ ದಳ ಕಾರ್ಯಕರ್ತರ ಕೃತ್ಯದ ಬಗ್ಗೆ ದೇವಸ್ಥಾನ ಸಮಿತಿ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಸಂಬಂಧ ಪೊಲೀಸ್‌ ದೂರು ನೀಡಿದೆ. ವಿಷಯಕ್ಕೆ ಸಂಬಂಧಿಸಿ ತನಿಖೆ ನಡೆಸುವಂತೆ ದೇವಸ್ಥಾನ ಸಮಿತಿ ಮುಖ್ಯಸ್ಥ ಸತ್ಯಪಾಲ್‌ ಸಿಂಗ್‌ ಒತ್ತಾಯಿಸಿದ್ದಾರೆ.

ಬಜರಂಗ ದಳದ ಕೃತ್ಯಕ್ಕೆ ದಾನಿ ಶಹೀದ್‌ ಆಘಾತ ವ್ಯಕ್ತಪಡಿಸಿದ್ದು, ಇವರು ಸಮಾಜವನ್ನು ಧರ್ಮದ ಆಧಾರದಲ್ಲಿ ವಿಭಜಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಆಲಿಘಡ್‌ ನಾದ್ಯಂತ ವಿವಿಧ ದೇವಸ್ಥಾನಗಳು, ಮಸೀದಿಗಳು ಮತ್ತು ಆರೋಗ್ಯ ಕೇಂದ್ರಗಳಿಗೆ ಸುಮಾರು ೧೦೦ ವಾಟರ್‌ ಕೂಲರ್‌ ಗಳನ್ನು ನೀಡುತ್ತೇನೆ ಎಂದು ತಾನು ಘೋಷಿಸಿದ್ದೆ. ಆದರೆ, ಕೆಲವರಿಗೆ ಇದನ್ನು ಧನಾತ್ಮಕಾಗಿ ತೆಗೆದುಕೊಳ್ಳಲು ಸಾಧ್ಯವಾಗದೆ, ಪ್ರತಿಯೊಂದಕ್ಕೂ ಕೋಮು ಬಣ್ಣ ಹಚ್ಚುತ್ತಾರೆ ಎಂದು ಶಹೀದ್‌ ಹೇಳಿದ್ದಾರೆ.

ಬೇಸಿಗೆಯಲ್ಲಿ ತಂಪಾದ ಕುಡಿಯುವ ನೀರಿನ ಆವಶ್ಯಕತೆ ಇರುವುದರಿಂದ, ದೇವಸ್ಥಾನದ ಮುಖ್ಯ ಅರ್ಚಕರು, ಸಮಿತಿಯವರಲ್ಲಿ ಮಾತುಕತೆ ನಡೆಸಿಯೇ ವಾಟರ್‌ ಕೂಲರ್‌ ಅಳವಡಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.  

Join Whatsapp