ಪಿಎಫ್ ಐ ನಿಷೇಧ ಹಿನ್ನೆಲೆ: ಕಚೇರಿಗಳ ಮೇಲೆ ದಾಳಿ, ಸ್ವತ್ತುಗಳು ವಶಕ್ಕೆ

Prasthutha|

ಮಂಗಳೂರು: ಕಾನೂನು ಬಾಹಿರ ಚಟುವಟಿಕೆ ತಡೆಗಟ್ಟುವಿಕೆ ಕಾಯ್ದೆ 1967(1967ರ 17) ಸೆಕ್ಷನ್ 3(1)ರ ಅಡಿಯಲ್ಲಿ ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಹಾಗೂ ಅದರ ಸಹ ಸಂಘಟನೆಗಳಾದ ರಿಹಬ್ ಇಂಡಿಯಾ ಫೌಂಡೇಶನ್, ಕ್ಯಾಂಪಸ್ ಪ್ರಂಟ್ ಆಫ್ ಇಂಡಿಯಾ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಹಾಗೂ ಕೇರಳದ ನ್ಯಾಷನಲ್ ಕಾನ್ಪೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಷನ್ಗಳನ್ನು ಕಾನೂನು ಬಾಹಿರ ಸಂಘಟನೆಗಳೆಂದು ನಿಷೇಧಿಸಿ ಆದೇಶಿಸಲಾಗಿದೆ ಹಾಗೂ ಈ ಸಂಘಟನೆಗಳಲ್ಲಿ ತೊಡಗಿಸಿಕೊಂಡವರ ಚಟುವಟಿಕೆಗಳನ್ನು ಮತ್ತು ಅವು ಕಾರ್ಯನಿರ್ವಹಿಸುತ್ತಿರುವ ಸ್ಥಳಗಳನ್ನು, ಸಂಘಟನೆಗಳಿಗೆ ಸಂಬಂಧಿಸಿದ ಲೆಕ್ಕ ಪುಸ್ತಕಗಳನ್ನು, ಹಣ ಸಂಗ್ರಹಣೆ ಮಾಹಿತಿಗಳ ಕುರಿತು ಶೋಧಿಸುವ ಮತ್ತು ಮುಟ್ಟುಗೋಲು ಹಾಕುವ ಅಧಿಕಾರವನ್ನು ಕಾಯ್ದೆಯನ್ವಯ ನೀಡಲಾಗಿದೆ.
ಅದರಂತೆ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ 9 ಸ್ಥಳಗಳನ್ನು ಗುರುತಿಸಿ ಅಧಿಕಾರಿಗಳನ್ನು ನಿಯೋಜಿಸಿ, ಅವುಗಳ ಚರಾಸ್ತಿಗಳನ್ನು, ಸಾಕ್ಷಿದಾರರ ಉಪಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

- Advertisement -

ಪುತ್ತೂರಿನಲ್ಲಿ ದಾಳಿ:

ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಜಂಕ್ಷನ್ ನಲ್ಲಿರುವ ಸುಲೈಮಾನ್ ಫ್ಯಾಮಿಲಿ ಕಂಪ್ಲೆಕ್ಸ್ ನ 1ನೇ ಮಹಡಿಯ ನಾಲ್ಕನೆ ಕೊಠಡಿಯಲ್ಲಿರುವ ಪಿಎಫ್.ಐ ಕಚೇರಿಯ ಮೇಲೆ ಸೆ.28ರ ರಾತ್ರಿ 10.10ಕ್ಕೆ ತಹಶೀಲ್ದಾರ್ ಹಾಗೂ ಅಧಿಕಾರಿಗಳ ತಂಡ ದಾಳಿ ನಡೆಸಿದರು.

- Advertisement -

ಆ ಸಂಧರ್ಭದಲ್ಲಿ ಎಸ್.ಡಿ.ಪಿ.ಐ ಬರಹದ 7 ಬಾವುಟ, ಎಸ್.ಡಿ.ಪಿ.ಐ ಸಂಘಟನೆಗೆ ನೋಂದಣಿ ನಮೂನೆಗಳನ್ನು ಒಳಗೊಂಡ 1 ಪುಸ್ತಕ, 4 ಖಾಲಿ ನೋಟ್ ಬುಕ್, 2 ಮಲಗುವ ಹುಲ್ಲಿನ ಚಾಪೆ, 8 ಪೈಲ್ ರಾಪರ್, 7 ಪೈಲ್ ಕವರ್ ಗಳು, 1 ಪ್ಲಾಸ್ಟಿಕ್ ಟರ್ಪಾಲ್, 1 ಗೋಡೆ ಗಡಿಯಾರ, 1 ಮೈಕ್, 1 ಎಸ್.ಡಿ.ಪಿ.ಐ ಪಕ್ಷದ ನಾಮಪಲಕ, 2 ಮೇಜು, 25 ಪ್ಲಾಸ್ಟಿಕ್ ಕುರ್ಚಿಗಳು, 1 ಬ್ಲಾಕ್ ಬೋರ್ಡ್, 1 ಚಾಕ್ ಪೀಸ್, 1 ಡಸ್ಟರ್ ಹಾಗೂ 1 ಗೋದ್ರೆಜ್ ಕಪಾಟುಗಳನ್ನು ವಶ ಪಡಿಸಿಕೊಂಡು ಅದೇ ಕೊಠಡಿಯಲ್ಲಿಟ್ಟು, ಬೀಗ ಹಾಕಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಸುಪರ್ದಿಗೆ ಒಪ್ಪಿಸಲಾಗಿದೆ.

ಬೆಳ್ಳಾರೆ:

ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿರುವ ಬೆಳ್ಳಾರೆ ಝಕರಿಯ ಮಸ್ಜಿದ್ ಎದುರುಗಡೆ ಇರುವ ಸಂಕೀರ್ಣದ ಮೊದಲ ಮಹಡಿಯಲ್ಲಿರುವ ಸಂಘಟನೆಯ ಮೇಲೆ ಸೆ.28ರ ರಾತ್ರಿ 10.49ಕ್ಕೆ ತಹಶೀಲ್ದಾರ್ ದಾಳಿ ನಡೆಸಿದರು.

ದಾಳಿ ನಡೆದ ಕೊಠಡಿಯೊಳಗೆ 2 ಕಬ್ಬಿಣದ ಮೇಜು, 38 ಪೈಬರ್ ಚಯರ್ , 5 ಮರದ ಚೆಯರ್, 3 ಬಹುಮಾನ ಟ್ರೋಪಿ, 1 ವಿದ್ಯುತ್ ಟೇಬಲ್ ಲ್ಯಾಂಪ್, 75 ಎಸ್.ಡಿ.ಪಿ.ಐ ಬಟ್ಟೆಶಾಲು, 1 ಪಿ.ಎಪ್.ಐ ದೊಡ್ಡ ಬ್ಯಾನರ್, 1 ಬಿ.ಜೆ.ಪಿ ವಿರುದ್ಧ ಬ್ಯಾನರ್, 1 ಪಿ.ಎಫ್.ಐ ಚಿಹ್ನೆ ಇರುವ ಗೋಡೆ ಗಡಿಯಾರ, 1 ಭಾರತೀಯ ರಾಷ್ಟ್ರ ದ್ವಜ, 1 ಕೊಡೆ, 1 ಟ್ವಿಟ್ಟರ್ ಕಲಿಸುವ ಚಿಹ್ನೆ ಇರುವ ಬ್ಲಾಕ್ ಬೋರ್ಡ್, 1 ಕೆಂಪು ಹಸಿರು ಬಣ್ಣದಿಂದ ಸುತ್ತಿದ ಕಬ್ಬಿಣದ ದ್ವಜ ಕಂಬ, 60 ಸರ್ಕಾರವನ್ನು ವಿರೋಧಿಸುವ ಬಿತ್ತಿ ಪತ್ರಗಳು, 1 ಫ್ಯಾನ್, 1 ಝಕಾರಿಯ ಮಸೀದಿಯ ಹೆಸರಿನಲ್ಲಿರುವ ವಿದ್ಯುತ್ ಬಿಲ್ ಗಳನ್ನು ವಶ ಪಡಿಸಿಕೊಂಡು ರಾತ್ರಿ 11.45ಕ್ಕೆ ಶೋಧನಾ ಕಾರ್ಯಾಚರಣೆ ಮುಗಿಸಿದ ಅಧಿಕಾರಿಗಳ ತಂಡವು ಸೊತ್ತುಗಳನ್ನು ಅದೇ ಕೊಠಡಿಯಲ್ಲಿರಿಸಿ, ಬೀಗ ಜಡಿದು, ಸೀಲು ಮಾಡಿ ಬೆಳ್ಳಾರೆ ಪೊಲೀಸ್ ಠಾಣೆ ಉಪನಿರೀಕ್ಷಕರಿಗೆ ಹಸ್ತಾಂತರಿಸಿದ್ದಾರೆ.

ಪುತ್ತೂರು ತಾಲೂಕಿನ ಕೆ.ಪಿ. ಕಾಂಪ್ಲೆಕ್ಸ್:

ಪುತ್ತೂರು ನಗರ ವ್ಯಾಪ್ತಿಯ ಪುತ್ತೂರು ಸ್ವಭಾನ್ ಸೊಸೈಟಿ ಹತ್ತಿರದ ಕೆ.ಪಿ. ಕಾಂಪ್ಲೆಕ್ಸ್ನ ಎರಡನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಘಟನೆ ಕಚೇರಿಯನ್ನು ಸೆ.29ರ ಮಧ್ಯಾಹ್ನ 1 ಗಂಟೆಗೆ ಅಧಿಕಾರಿಗಳು ದಾಳಿ ನಡೆಸಿ 1 ಡೆಲ್ ಕಂಪನಿಯ ಮಾನಿಟರ್, 1 ಪ್ರಂಟ್ ಎಕ್ಸ್ ಪೆಸ್ ಕಂಪನಿಯ ಸಿಪಿಯು, 1 ಎಸ್ಕಾನ್ ಕಂಪನಿಯ ಸ್ಕ್ಯಾನರ್, 1 ಕೆನಾನ್ ಕಂಪನಿಯ ಸ್ಕ್ಯಾನರ್, 1 ಹೆರ್ರಿ ಸ್ಪೀಕರ್ ಮತ್ತು ಮೈಕ್, 1 ಪ್ರಾಮಿಸ್ಸ್ ಕಂಪನಿಯ ಗೋಡೆ ಗಡಿಯಾರ, 3 ಪ್ರಸ್ತುತ ಪುಸ್ತಕ, 8 ನ್ಯಾಯ ಪಥ ಪತ್ರಿಕೆ, 2 ಲೆನವೋ ಕಂಪನಿಯ ಸ್ಪೀಕರ್, 1 ಪಿ.ಎಫ್.ಐ ಎಂದು ಬರೆದ ಕೆ.ಪಿ ಕಾಂಪ್ಲೆಕ್ಸ್ ರವರು ನೀಡಿದ ವಿದ್ಯುತ್ ಬಿಲ್, 1 ಬ್ಲಾಕ್ ಬೋರ್ಡ್, 2 ಪ್ಲಾಸ್ಟಿಕ್ ವಿಸಿಲ್, 1 ಗೋದ್ರೇಜ್ ಕಪಾಟು, 1 ಕಬ್ಬಿಟದ ಗೋದ್ರೇಜ್, 2 ಕಂಪ್ಯೂಟರ್ ಟೇಬಲ್, 1 ಪಿಎಫ್.ಐ ಎಂದು ನಮೂದು ಮಾಡಿದ ಡಸ್ಟರ್, 1 ಹೋಮ್ ಯು.ಪಿ.ಎಸ್ ಕಂಪನಿಯ ಇನ್ವರ್ಟರ್ ಹಾಗೂ 1 ಮೆಗ್ಗಿಮೊ ಕಂಪನಿಯ ಬ್ಯಾಟರಿಯನ್ನು ವಶಕ್ಕೆ ಪಡೆದು, ಅವುಗಳನ್ನು ಅದೇ ಕಚೇರಿಯ ಕೊಠಡಿಯಲ್ಲಿಟ್ಟು ಬೀಗ ಹಾಕಿ ಕೀ ಯನ್ನು ನಗರ ಸಭೆಯ ಪೌರಾಯುಕ್ತರ ಸುಪರ್ದಿಗೆ ಒಪ್ಪಿಸಲಾಗಿದೆ.

ಫರಂಗಿಪೇಟೆ ಎಸ್.ಡಿ.ಪಿ.ಐ ಕಚೇರಿ:

ಬಂಟ್ವಾಳ ತಾಲೂಕಿನ ಪುದು ಗ್ರಾಮದ ಫರಂಗಿಪೇಟೆಯಲ್ಲಿರುವ ಎಸ್.ಡಿ.ಪಿ.ಐ ಕಚೇರಿ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ನಿರೀಕ್ಷಕರು ಅಧಿಕಾರಿಗಳು ಸೆ.28 ರಂದು ದಾಳಿ ನಡೆಸಿ 60 ಚೇರು, 2 ಮರದ ಟೇಬಲ್, 1 ಪೈಬರ್ ಟೇಬಲ್, 2 ವೈಟ್ ಬೋರ್ಡ್, 1 ಗೋಡೆ ಗಡಿಯಾರ, 4 ಫ್ಯಾನ್, 6 ಚಿಕ್ಕ ಟ್ರೋಫಿ, ದೊಡ್ಡ ಶೀಲ್ಡ್, 1 ಪ್ರಸ್ತುತ ಪಾಕ್ಷಿಕ ಪತ್ರಿಕೆ, 1 ಎಸ್.ಡಿಪಿ.ಐ ಬಾವುಟ, 5 ಎಸ್.ಡಿ.ಪಿ.ಐ ಬ್ರಾಂಚ್ ರಿಜಿಸ್ಟರ್, 1 ಎಸ್.ಡಿ.ಪಿ.ಐ ಲೆಟರ್ ಪ್ಯಾಡ್, 2 ಕ್ಯಾಡರ್ ರಿನಿವಲ್ ಡಿಟೈಲ್ ಪುಸ್ತಕ, 1 ಎಸ್.ಡಿ.ಪಿ.ಐ ಸೆಕ್ರೆಟರಿ ಸೀಲ್, 1 ಕೊಡೆ, 1 ನ್ಯಾಷನಲ್ ವುಮೆನ್ಸ್ ಫ್ರಂಟ್ ಗೆ ಸಂಬಂಧಿಸಿದ ಬ್ಯಾನರ್ ಹಾಗೂ 4 ಲೈಟ್ ಬಲ್ಬ್ಗಳನ್ನು ವಶಪಡಿಸಿ ಅದೇ ಕೊಠಡಿಯಲ್ಲಿರಿಸಿ ಬೀಗ ಹಾಕಿ ಪೊಲೀಸ್ ಉಪನಿರೀಕ್ಷಕರ ಸುಪರ್ದಿಗೆ ನೀಡಲಾಗಿದೆ.

ಕುಕ್ಕಾಜೆ:

ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆ ಜಂಕ್ಷನ್ ನ ಬದ್ರಿಯ ಕಾಂಪ್ಲೆಕ್ಸ್ ನಲ್ಲಿರುವ ಎಸ್.ಡಿ.ಪಿ.ಐ ಕಚೇರಿಯ ಮೇಲೆ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳ ಮುಖ್ಯಸ್ಥಿಕೆಯಲ್ಲಿ ಸೆ.28ರಂದು ದಾಳಿ ನಡೆಸಿ 30 ಪ್ಲಾಸ್ಟಿಕ್ ಕುರ್ಚಿ, 2 ಮೀಟಿಂಗ್ ಟೇಬಲ್, 2 ಮರದ ಟೇಬಲ್, 2 ಎಸ್.ಡಿ.ಪಿ.ಐ ಬ್ಯಾನರ್ ಹಾಗೂ 2 ಫ್ಯಾನ್ ಗಳನ್ನು ವಶಪಡಿಸಿಕೊಂಡು ಅದೇ ಕೊಠಡಿಯಲ್ಲಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.

Join Whatsapp