Home ಕರಾವಳಿ ಆಟೋ ರಿಕ್ಷಾದಲ್ಲಿ ಸ್ಫೋಟ: ವಶಕ್ಕೆ ಪಡೆದವರನ್ನು ಅಪರಾಧಿಗಳಂತೆ ಬಿಂಬಿಸಬೇಡಿ- ಪ್ರವೀಣ್ ಸೂದ್

ಆಟೋ ರಿಕ್ಷಾದಲ್ಲಿ ಸ್ಫೋಟ: ವಶಕ್ಕೆ ಪಡೆದವರನ್ನು ಅಪರಾಧಿಗಳಂತೆ ಬಿಂಬಿಸಬೇಡಿ- ಪ್ರವೀಣ್ ಸೂದ್

ಮಂಗಳೂರು: ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು,  ಕೇರಳ ಸೇರಿ ಎಲ್ಲಾ ಕಡೆಗಳಲ್ಲೂ ತನಿಖೆ ಚುರುಕುಗೊಳಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಪ್ರವೀಣ್ ಸೂದ್  ಹೇಳಿದ್ದಾರೆ.

ಮಂಗಳೂರು ಪೊಲೀಸ್ ಆಯುಕ್ತರ  ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾರೀಕ್  ಕೃತ್ಯಕ್ಕೆ ಹಣದ ಮೂಲದ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಈಗಲೇ ಎಲ್ಲ ಮಾಹಿತಿಗಳನ್ನು ಬಹಿರಂಗಗೊಳಿಲು ಸಾಧ್ಯವಿಲ್ಲ. ಸದ್ಯ ಆರೋಪಿಯ ಪ್ರಾಣ ಉಳಿಸಬೇಕು, ಅದು ನಮಗೆ ಅತೀ ಅಗತ್ಯ. ಅವನ ವಿಚಾರಣೆ ಬಳಿಕ ಮತ್ತಷ್ಟು ಸತ್ಯ ಹೊರಗೆ ಬರಲಿದೆ. ಈಗಲೇ ಎಲ್ಲ ಮಾಹಿತಿಯನ್ನು ಬಹಿರಂಗಗೊಳಿಸಿದರೆ ಮುಂದಿನ ವಿಚಾರಣೆಗೆ ತೊಂದರೆಯಾಗುತ್ತದೆ ಎಂದು ತಿಳಿಸಿದರು.

ಎನ್’ಐಎ  ಮತ್ತು ಕೇಂದ್ರದ ತನಿಖಾ ಸಂಸ್ಥೆಗಳು ನಮ್ಮ ಜೊತೆ ಇವೆ. ಸದ್ಯದಲ್ಲೇ ಅಧಿಕೃತವಾಗಿ ಈ ಪ್ರಕರಣ ಎನ್ಐಎಗೆ ಹಸ್ತಾಂತರ ಆಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ತಮಿಳುನಾಡು, ಕೇರಳ ಎಲ್ಲಾ ಕಡೆಗಳಲ್ಲೂ ನಮ್ಮ ತನಿಖೆ ಆಗುತ್ತಿದೆ. ನಮ್ಮ ಪೊಲೀಸರು ಕೂಡ ಈ ಬಗ್ಗೆ ವಿಚಾರಣೆ ಮುಂದುವರಿಸುತ್ತಾರೆ. ಪ್ರತಿಯೊಬ್ಬರ ಸಹಕಾರಕ್ಕಾಗಿ ನಾವು ಹಲವು ಜನರನ್ನು ವಿಚಾರಣೆ ಮಾಡುತ್ತೇವೆ. ಅವರನ್ನು ನಾವು ಅರೆಸ್ಟ್ ಮಾಡುತ್ತಿಲ್ಲ. ವಿಚಾರಣೆಗೆ ಮಾತ್ರ ಕರೆಯುತ್ತಿದ್ದೇವೆ ಹೊರತು ಅವರು ಅಪರಾಧಿಗಳಾಗಿರುವುದಿಲ್ಲ. ಅವರನ್ನು ಅಪರಾಧಿಗಳಂತೆ ಬಿಂಬಿಸುವುದನ್ನು ಬಿಡಬೇಕು ಎಂದು ಮನವಿ ಮಾಡಿದ್ದಾರೆ.

ಈಗಾಗಲೇ ಬೆಂಗಳೂರು ಸೇರಿ 8 ಕಡೆ ದಾಳಿ ನಡೆಸಿ, 4 ಜನರನ್ನ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ. ಆದರೆ ಆರೋಪಿಗಳು ಅಂತ ಯಾರನ್ನೂ ಕರೆತಂದಿಲ್ಲ. ಕೃತ್ಯದ ಹಿಂದಿರುವವರೂ ನಮಗೆ ಬೇಕು. ಅದಕ್ಕಾಗಿ ನಾವು ಎಲ್ಲಾ ರೀತಿಯಿಂದಲೂ ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದರು.

Join Whatsapp
Exit mobile version