Home ಟಾಪ್ ಸುದ್ದಿಗಳು ರಾಜ್ಯದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದ ಸ್ಥಾಪನೆ ಮೂಲಕ ಸಂಸ್ಕೃತ ಹೇರಲು ಯತ್ನ; ಕ್ಯಾಂಪಸ್ ಫ್ರಂಟ್ ಖಂಡನೆ

ರಾಜ್ಯದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯದ ಸ್ಥಾಪನೆ ಮೂಲಕ ಸಂಸ್ಕೃತ ಹೇರಲು ಯತ್ನ; ಕ್ಯಾಂಪಸ್ ಫ್ರಂಟ್ ಖಂಡನೆ

ಬೆಂಗಳೂರು: ರಾಜ್ಯ ಸರಕಾರವು ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪಿಸಲು ಮುಂದಾಗಿದ್ದು ಇದು ರಾಜ್ಯದ ಕನ್ನಡ ಭಾಷೆಯನ್ನು ಮೂಲೆಗುಂಪಾಗಿಸಿ ಸಂಸ್ಕೃತವನ್ನು ಹೇರಲು ಯತ್ನಿಸುತ್ತಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ಆರೋಪಿಸಿದೆ.


ಸಂಸ್ಕೃತ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಲು 359 ಕೋಟಿ ರೂಪಾಯಿಗಳನ್ನು ಮೀಸಲಿರಿಸಿದ್ದು, ಆದರೆ ಕನ್ನಡಿಗರ ಮಾತೃಭಾಷೆಯಾಗಿರುವ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ದಿಯ ಬಗ್ಗೆ ಮುತುವರ್ಜಿವಹಿಸುತ್ತಿಲ್ಲ, 6 ಕೋಟಿ ಜನಸಂಖ್ಯೆ ಇರುವ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ನೀಡಬೇಕಾದ ಪ್ರಾಮುಖ್ಯತೆ ಬೇರೆ ಭಾಷೆಗೆ ಏಕೆ ಎಂಬುದು ರಾಜ್ಯ ಸರಕಾರ ಇಲ್ಲಿ ಸ್ಪಷ್ಟ ಪಡಿಸಬೇಕಿದೆ, ಸರಕಾರವು ಮಾತೃ ಭಾಷೆಗೆ ತನ್ನ ಒಲವನ್ನು ತೋರದೆ ಒಕ್ಕೂಟ ಸರಕಾರವನ್ನು ಸಂತೋಷ ಪಡಿಸಲು ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪಿಸಲು ಹೊರಟಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ದಿಯ ಬಗ್ಗೆ ಸರ್ಕಾರವು ಗಮನಹರಿಸದೆ ವರ್ಷಗಳು ಕಳೆದಂತೆ ಅನುದಾನವು ಕಡಿತಗೊಳ್ಳುತ್ತಿದೆ, ಪ್ರಾರಂಭದಲ್ಲಿ ವರ್ಷಕ್ಕೆ 25 ಕೋಟಿ ಅನುದಾನ ಬರುತ್ತಿದ್ದು ಆದರೆ ಇದೀಗ ಕೇವಲ 50 ಲಕ್ಷಕ್ಕೆ ಬಂದು ನಿಂತಿದೆ, ಅದರಲ್ಲೂ ಈ ಬಾರಿ 25 ಲಕ್ಷ ಮಾತ್ರ ಅನುದಾನ ಮಂಜೂರು ಮಾಡಿದ್ದು ಇನ್ನೂ 25 ಲಕ್ಷ ಅನುದಾನ ಬರಲು ಬಾಕಿಯಿದೆ. ಕನ್ನಡ ವಿಶ್ವವಿದ್ಯಾನಿಲಯದ ಬಗ್ಗೆ ಸರ್ಕಾರವು ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದು ಕಾಣಬಹುದಾಗಿದೆ ಎಂದು ಅವರು ಟೀಕಿಸಿದ್ದಾರೆ.


ರಾಜ್ಯ ಸರಕಾರವು ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಹೊಂದಿರುವ ಆಸಕ್ತಿಯನ್ನು ಬಿಟ್ಟು ಕನ್ನಡ ವಿಶ್ವವಿದ್ಯಾಲಯಕ್ಕೆ ತನ್ನ ಪ್ರಾಮುಖ್ಯತೆಯನ್ನು ತೋರಿಸಬೇಕು ಹಾಗೂ ಈ ಸಂಸ್ಕೃತ ವಿಶ್ವವಿದ್ಯಾನಿಲಯ ಸ್ಥಾಪನೆಯ ಪ್ರಯತ್ನವನ್ನು ಕೈ ಬಿಡಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕುಂಬ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version