Home ಟಾಪ್ ಸುದ್ದಿಗಳು ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಕೊಲೆಗೆ ಸಂಚು ?

ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಕೊಲೆಗೆ ಸಂಚು ?

ಬೆಂಗಳೂರು: ರಾಜ್ಯದಲ್ಲಿ ಹಲವು ವರ್ಷಗಳಿಂದ ತಣ್ಣಗಾಗಿದ್ದ ಭೂಗತ ಲೋಕದಲ್ಲಿ ಮತ್ತೆ ಸದ್ದು ಕೇಳಿಬಂದಿದ್ದು ಬಹುಭಾಷಾ ನಟಿಯೊಬ್ಬರ ಸಹೋದರನ ಹತ್ಯೆಗೆ ಸಂಚು ರೂಪಿಸಲಾಗಿದೆ ಎನ್ನುವ ವದಂತಿ ‌ಹರಿದಾಡುತ್ತಿದೆ. ದಿ.ಮುತ್ತಪ್ಪ ರೈ ಆಪ್ತರ ಬಳಗದಲ್ಲಿ ಗುರುತಿಸಿಕೊಂಡಿದ್ದ ಮನ್ಮಿತ್ ರೈ ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ ತನ್ನ ವಿರುದ್ಧದ ಆರೋಪ ನಿರಾಕರಿಸಿರುವ ಮುನ್ಮಿತ್ ರೈ, ತಾನು ವಿದೇಶದಲ್ಲಿರುವುದಾಗಿ ತಿಳಿಸಿದ್ದಾರೆ.


ಇನ್ನೊಂದೆಡೆ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಗುಣರಂಜನ್ ಶೆಟ್ಟಿಗೆ ಮನ್ಮಿತ್ ರೈನಿಂದ ಜೀವ ಬೆದರಿಕೆಯಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ. ಒಂದು ಕಾಲದಲ್ಲಿ ಗುಣರಂಜನ್ ಶೆಟ್ಟಿ ಹಾಗೂ ಮುನ್ಮಿತ್ ರೈ ಇಬ್ಬರೂ ಮುತ್ತಪ್ಪ ರೈ ಆಪ್ತವಲಯದಲ್ಲಿಯೇ ಗುರುತಿಸಿಕೊಂಡಿದ್ದು ಇಬ್ಬರ ನಡುವೆ ಗಲಾಟೆಯಾಗಿದೆ ಎನ್ನಲಾಗುತ್ತಿದೆ.


ಈ‌ ನಡುವೆ ಮುತ್ತಪ್ಪ ರೈ ಸಂಬಂಧಿ ಮನ್ಮಿತ್ ರೈನಿಂದ ಕೊಲೆಗೆ ಸಂಚು ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಮನ್ವಿತ್ ರೈ ವಿದೇಶದಲ್ಲಿರುವ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ವದಂತಿ ಹಿನ್ನೆಲೆಯಲ್ಲಿ ಬಂಟ್ವಾಳದ ಮುತ್ತಪ್ಪ ರೈ ಆಪ್ತ ರಾಕೇಶ್ ಮಲ್ಲಿಯನ್ನು ಮಂಗಳೂರು ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದಾರೆ. ರಾಕೇಶ್ ಮಲ್ಲಿ ಹಾಗೂ ಮನ್ವಿತ್ ಆಪ್ತರಾಗಿದ್ದು, ಇದೇ ವಿಚಾರಕ್ಕೆ ಪೊಲೀಸರು ‌ಕರೆಸಿ ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.


ಮುತ್ತಪ್ಪ ರೈ ಬದುಕಿದ್ದಾಗ ಒಟ್ಟಿಗಿದ್ದ ರಾಕೇಶ್ ಮಲ್ಲಿ, ಮನ್ವಿತ್ ಹಾಗೂ ಗುಣರಂಜನ್ ಶೆಟ್ಟಿ ರೈ ಸಾವಿನ‌ ನಂತರ ದೂರವಾಗಿದ್ದರು. ಗುಣರಂಜನ್ ಶೆಟ್ಟಿ ಜಯಕರ್ನಾಟಕ ಸಂಘಟನೆಯಿಂದ ಹೊರಬಂದು ಜಯಕರ್ನಾಟಕ ಜನಪರ ವೇದಿಕೆ ಸ್ಥಾಪಿಸಿದ್ದರು. ಅಷ್ಟೇ ಅಲ್ಲದೇ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರನಾಗಿರುವ ಗುಣರಂಜನ ಶೆಟ್ಟಿ ಮಂಗಳೂರು ಮತ್ತು ಬೆಂಗಳೂರು ಭಾಗದಲ್ಲಿ ಹೆಸರು ಮಾಡಿದ್ದಾರೆ. ಜೊತೆಗೆ ರೈ ಆಪ್ತವಲಯದಲ್ಲಿ ಗುರುಸಿಕೊಂಡಿದ್ದರು. ಈ ಕಾರಣಕ್ಕೆ ಗುಣರಂಜನ್ ಶೆಟ್ಟಿ ಕೊಲೆ ಮಾಡಿದರೆ ದೊಡ್ಡ ಮಟ್ಟದ ಹೆಸರು ಮಾಡಬಹುದೆಂದು ಈ ಕೊಲೆಗೆ ಸ್ಕೆಚ್ ಹಾಕಲಾಗಿದೆ ಎನ್ನಲಾಗ್ತಿದೆ.


ತಮ್ಮ ಮೇಲಿನ ಬಂದಿರುವ ಆರೋಪ ಬಗ್ಗೆ ಸ್ಪಷ್ಟನೆ ನೀಡಿರುವ ಮನ್ವೀತ್ ರೈ, ಈ ಆರೋಪ‌ ಯಾಕೆ ಬಂತು ಎಂಬುದೇ ಗೊತ್ತಾಗುತ್ತಿಲ್ಲ.‌ ಕೆಲಸ ನಿಮಿತ್ತ ವಿದೇಶದಲ್ಲಿದ್ದೇನೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ನನ್ನ ಹೆಸರಿದೆ ಎಂದು ಸುದ್ದಿಯಾಗಿದೆ.ನಾನು ಯಾರಿಗೂ ಬೆದರಿಕೆ ಹಾಕಿಲ್ಲ. ಅಲ್ಲದೇ ಈ ಬಗ್ಗೆ ಯಾರೂ ಸಹ ದೂರು ನೀಡಿಲ್ಲ. ನನ್ನ ಮೇಲೆ ಇದುವರೆಗೂ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ಯಾವ ಠಾಣೆಯಲ್ಲಿಯೂ ಎಫ್​​ಐಆರ್ ದಾಖಲಾಗಿಲ್ಲ. ಏನೂ ಇಲ್ಲದೇ, ಮನ್ಮಿತ್ ರೈಯಿಂದ ಸಂಚು ನಡೆಯುತ್ತಿದೆ ಎಂದು ಹೇಗೆ ಹೇಳುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

Join Whatsapp
Exit mobile version