ಐ.ಎಫ್.ಎಫ್ ವತಿಯಿಂದ ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ್

Prasthutha|

ದಮ್ಮಾಮ್: ಇಂಡಿಯಾ ಫ್ರೆಟರ್ನಿಟಿ ಫೋರಂ ವತಿಯಿಂದ ‘ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ್ – 2021’ ವೆಬಿನಾರ್ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. 2021-22ನೆ ಸಾಲಿನಲ್ಲಿ ಪೂರ್ವಪ್ರಾಂತ್ಯದಾದ್ಯಂತ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಗೌರವಿಸುವುದಕ್ಕಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

- Advertisement -


ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು, ವಿವಿಧ ಶಾಲಾ ಪ್ರಾಂಶುಪಾಲರು, ವಾಣಿಜ್ಯ ಹಾಗೂ ಸೇವಾಕ್ಷೇತ್ರಗಳಲ್ಲಿರುವ ಪ್ರಮುಖ ಭಾರತೀಯರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಿಯಾದ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ದ್ವಿತೀಯ ಕಾರ್ಯದರ್ಶಿ (ಆರ್ಥಿಕ, ವಾಣಿಜ್ಯ ಮತ್ತು ಶಾಲಾ ವೀಕ್ಷಕರು) ಆಸಿಂ ಆನ್ವರ್ ವೆಬಿನಾರನ್ನು ಉದ್ಘಾಟಿಸಿದರು. ವೆಬಿನಾರ್ ನಲ್ಲಿ ಫೋರಂನ ಚಟುವಟಿಕೆ ಕುರಿತ ಚಿತ್ರ ಮತ್ತು ಈ ಸಮಾರಂಭದ ಭಾಗವಾಗಿ ಐ.ಎಫ್.ಎಫ್ ಕಾರ್ಯಕರ್ತರು ವಿವಿಧ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ, ಪ್ರಾಂಶುಪಾಲರು ಹಾಗೂ ರಾಂಕ್ ಪಡೆದ ವಿದ್ಯಾರ್ಥಿಗಳ ಹೇಳಿಕೆಗಳನ್ನು ಹೊಂದಿದ ವೀಡಿಯೊ ತುಣುಕುಗಳನ್ನು ಪ್ರಸಾರ ಮಾಡಲಾಯಿತು.
ಪ್ರಮುಖ ಸಮುದಾಯ ನಾಯಕರು ಮತ್ತು ಶಾಲಾ ಪ್ರಾಂಶುಪಾಲರು ಈ ಸಂದರ್ಭದಲ್ಲಿ ಮಾತನಾಡಿದರು. ಎಲ್ಲಾ ಭಾಷಣಕಾರರು ತಮ್ಮ ಭಾಷಣಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವ ಮಾತುಗಳನ್ನಾಡಿದರು. ಕೋವಿಡ್ 19 ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗಾಗಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಫೋರಮ್ ಗೆ ಶ್ಲಾಘನೆ ವ್ಯಕ್ತಪಡಿಸಿದರು.


ಐ.ಐ.ಎಸ್ ದಮ್ಮಾಮ್ ನ ಪ್ರಾಂಶುಪಾಲೆ ಮೆಹನಾಝ್ ಫರೀದ್, ಐ.ಐಎಸ್ ಜುಬೈಲ್ ಪ್ರಾಂಶುಪಾಲ ಡಾ.ನೌಶಾದ್ ಅಲಿ, ಅಲ್ ಮುನಾ ಐ.ಎಸ್ ಎಸ್ ದಮ್ಮಾಮ್ ಪ್ರಾಂಶುಪಾಲ ಮಮ್ಮೂ ಮಾಸ್ಟರ್ ಕೆಪಿ, ಡ್ಯೂನ್ಸ್ ಐಎಸ್ ಕೋಬರ್ ಇದರ ಪ್ರಾಂಶುಪಾಲೆ ಸುಮಯ್ಯಾ ಮುಹಮ್ಮದ್ ಆರಿಫ್, ಜುಬೈಲ್ ಅಲ್ ಮನಾ ಆಸ್ಪತ್ರೆಯ ಅನಸ್ತೇಶಿಯಾ ವಿಭಾಗದ ಮುಖ್ಯಸ್ಥ ಡಾ.ಇರ್ಫಾನ್ ಹಮೀದ್ ಖಾನ್ (ಐಐಎಸ್ ಜುಬೈಲ್ ಮ್ಯಾನೇಜಿಂಗ್ ಕಮಿಟಿ ಚೆಯರ್ ಮ್ಯಾನ್ ), ಅಲ್ ಕೋಬಾರ್ ಕಿಂಗ್ ಫಹದ್ ಆಸ್ಪತ್ರೆಯ ಕಾರ್ಡಿಯಾಕ್ ಸರ್ಜನ್ ಫಯಾಝ್ ಅಹ್ಮದ್ (ಕರ್ನಾಟಕ) ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

- Advertisement -


ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ರಾಯಭಾರಿ ಕಚೇರಿಯ ದ್ವಿತೀಯ ಕಾರ್ಯದರ್ಶಿ ಆಸಿಂ ಅನ್ವರ್, ಕೋವಿಡ್ 19 ನಿಮಿತ್ತ ಅಂತಿಮ ಬೋರ್ಡ್ ಪರೀಕ್ಷೆಗಳು ನಡೆಯದಿದ್ದರೂ ಧೈರ್ಯಗುಂದದಂತೆ ವಿದ್ಯಾರ್ಥಿಗಳಿಗೆ ಸಲಹೆಯಿತ್ತರು. ವರ್ಷಾದ್ಯಂತ ವಿದ್ಯಾರ್ಥಿಗಳ ಒಟ್ಟು ನಿರ್ವಹಣೆಯ ಆಧಾರದಲ್ಲಿ ಅಂಕವನ್ನು ನೀಡಲಾಗಿದೆ ಎಂದು ಅವರು ಹೇಳಿದರು. ಹೊಸ ಶೈಕ್ಷಣಿಕ ನೀತಿಯು ಭವಿಷ್ಯದಲ್ಲಿ ಇದೇ ರೀತಿಯಲ್ಲಿ ವಿದ್ಯಾರ್ಥಿಗಳ ನಿರ್ವಹಣೆಯ ಮೌಲ್ಯಮಾಪನ ಮಾಡಲಿದೆ. ಇದು ಅತ್ಯುತ್ತಮ ವಿಧಾನವಾಗಿದೆ ಎಂದು ಅವರು ತಿಳಿಸಿದರು.


ಇಂಡಿಯಾ ಫ್ರೆಟರ್ನಿಟಿ ಫೋರಂ ಪೂರ್ವ ಪ್ರಾಂತ್ಯ ಕಾರ್ಯದರ್ಶಿ ಅಬ್ದುಲ್ ಸಲಾಂ ಮಾತನಾಡಿ, ಭವಿಷ್ಯದಲ್ಲಿ ರಾಷ್ಟ್ರವನ್ನು ಕಟ್ಟಲಿರುವ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಫೋರಂ ನಡೆಸಿದ ಹಲವು ಚಟುವಟಿಕೆಗಳಿಗೆ ಸಮಾರೋಪವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಭವಿಷ್ಯದ ಪ್ರಯತ್ನಗಳಿಗಾಗಿ ಸಮುದಾಯ ನಾಯಕರು ಐ.ಎಫ್.ಎಫ್ ಗೆ ಸಲಹೆಗಳನ್ನು ನೀಡಬೇಕು ಎಂದು ಅವರು ತಿಳಿಸಿದರು.


ಫೋರಂನ ಕಾರ್ಯನಿರ್ವಹಣಾ ಸದಸ್ಯ ಮೀರಾಜ್ ಅಹ್ಮದ್ ರ್ಕಾರ್ಯಕ್ರಮಕ್ಕೆ ಉಪಾಂತ್ಯವನ್ನು ನೀಡಿದರು. ಸುಮಾರು 300 ಮಂದಿ ವೆಬಿನಾರ್ ನಲ್ಲಿ ಪಾಲ್ಗೊಂಡಿದ್ದರು. ಫ್ರೆಟರ್ನಿಟಿಯ ಕರ್ನಾಟಕ ಪ್ರತಿನಿಧಿ ಆಶಿಕ್ ಮಾಚಾರ್ ರ್ಕಾರ್ಯಕ್ರಮ ನಿರೂಪಿಸಿದರು. ಸೌದಿ ಅರೇಬಿಯಾದಲ್ಲಿ ರಾಯಭಾರಿ ಕಚೇರಿ ನೆರವಿನೊಂದಿಗೆ ಹಲವು ಚಟುವಟಿಕೆಗಳನ್ನು ನಡೆಸುತ್ತಿರುವ ಪ್ರಮುಖ ಭಾರತೀಯ ಸಾಮಜಿಕ ಸಂಘಟನೆ ಐ.ಎಫ್.ಎಫ್ ಆಗಿದೆ. ಹಲವು ಕಾರ್ಯಕ್ರಮಗಳು ಮತ್ತು ವೆಬಿನಾರ್ ಮೂಲಕ ಸೌದಿಅರೇಬಿಯಾದಲ್ಲಿ ನೆಲೆಸಿರುವ ಅನಿವಾಸಿಗಳ ಸಾಮಾಜಿಕ ಅಭಿವೃದ್ಧಿಗೆ ವೇದಿಕೆಯನ್ನು ಅದು ಒದಗಿಸುತ್ತಾ ಬಂದಿದೆ. ಅದರ ಸಾಮಾಜಿಕ ಸೇವೆಗಳು ವಿವಿಧ ಹಂತಗಳಲ್ಲಿ ಭಾರತೀಯ ಅನಿವಾಸಿಗಳನ್ನು ನೆರವಾಗುತ್ತಿದೆ.

Join Whatsapp