Home ಟಾಪ್ ಸುದ್ದಿಗಳು ಆಮ್ ಆದ್ಮಿ ಪಾರ್ಟಿಯಿಂದ ʻಜನರಿಂದ ಜನರಿಗಾಗಿʼ ಪ್ರಣಾಳಿಕೆ: ರಾಜ್ಯಾದ್ಯಂತ ಜನಾಭಿಪ್ರಾಯ ಸಂಗ್ರಹಿಸಲು ನಿರ್ಧಾರ

ಆಮ್ ಆದ್ಮಿ ಪಾರ್ಟಿಯಿಂದ ʻಜನರಿಂದ ಜನರಿಗಾಗಿʼ ಪ್ರಣಾಳಿಕೆ: ರಾಜ್ಯಾದ್ಯಂತ ಜನಾಭಿಪ್ರಾಯ ಸಂಗ್ರಹಿಸಲು ನಿರ್ಧಾರ

ಬೆಂಗಳೂರು: ರಾಜ್ಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಮಾಹಿತಿ ಸಂಗ್ರಹಿಸಿ, ಜನರ ನಿಜವಾದ ಸಮಸ್ಯೆಗಳಿಗೆ ಪರಿಹಾರಗಳನ್ನು ಒಳಗೊಂಡ ʻಜನರಿಂದ ಜನರಿಗಾಗಿʼ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೃಥ್ವಿ ರೆಡ್ಡಿ, “ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಜನರ ಅಭಿಪ್ರಾಯವನ್ನು ಸಂಗ್ರಹಿಸಿ, ಅವರಿಗೆ ಯಾವುದರ ಅಗತ್ಯವಿದೆ ಎಂಬ ಮಾಹಿತಿ ಆಧರಿಸಿ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದೆ. ಹಲವು ಪಕ್ಷಗಳು ಕಾಟಾಚಾರಕ್ಕೆ ಎಂಬಂತೆ ಒಂದು ಸಂವಾದ ನಡೆಸಿ ಮಾಹಿತಿ ಸಂಗ್ರಹಿಸಿದ್ದೇವೆಂದು ಬಿಂಬಿಸಿಕೊಳ್ಳುತ್ತವೆ. ಕೆಲವು ಪಕ್ಷಗಳು ಫೈವ್ ಸ್ಟಾರ್ ಹೋಟಲ್‌ನಲ್ಲಿ ಚರ್ಚೆ ನಡೆಸುತ್ತವೆ. ಆದರೆ ನಿಜವಾಗಿಯೂ ಚರ್ಚೆ ನಡೆಸಬೇಕಿರುವುದು ಜನಸಾಮಾನ್ಯರ ಜೊತೆ ಹಾಗೂ ಹಳ್ಳಿಕಟ್ಟೆಗಳಲ್ಲಿ. ಇದಕ್ಕಾಗಿ ಒಂದು ವ್ಯವಸ್ಥೆ ಮಾಡಿಕೊಡಲು ಆಮ್ ಆದ್ಮಿ ಪಾರ್ಟಿಯು ಈ ಯೋಜನೆ ರೂಪಿಸಿದೆ. ಎಲ್ಲ ವರ್ಗಗಳ ಜನರೂ ಇದರಲ್ಲಿ ಭಾಗವಹಿಸಬೇಕೆಂಬ ಅಪೇಕ್ಷೆಯಿದೆ. ಬೇರೆಲ್ಲ ರಾಜ್ಯಗಳಲ್ಲಿ ಚುನಾವಣೆ ನಡೆದಾಗಲೂ ಪಕ್ಷವು ಗ್ಯಾರೆಂಟಿ ಕಾರ್ಡ್ ರೂಪದಲ್ಲಿ ಮತದಾರರಿಗೆ ಆಶ್ವಾಸನೆಗಳನ್ನು ನೀಡಿದೆ. ಹಾಗೂ ನಾವು ಜಯಗಳಿಸಿದ ಕಡೆಯೆಲ್ಲ ನಮ್ಮ ಸಾಧನೆಗಳ ಬಗ್ಗೆ ಮತದಾರರಿಗೆ ರಿಪೋರ್ಟ್ ಕಾರ್ಡ್ ನೀಡಲಾಗಿದ್ದು, ಅವರು ಅದನ್ನು ಗ್ಯಾರೆಂಟಿ ಕಾರ್ಡ್ ಜೊತೆ ಹೋಲಿಕೆ ಮಾಡಿ ನೋಡಬಹುದಾಗಿದೆ” ಎಂದು ಹೇಳಿದರು.


“ಮಾರ್ಚ್ 4ರಂದು ದಾವಣಗೆರೆಯಲ್ಲಿ, ಪಕ್ಷದ ರಾಷ್ಟ್ರೀಯ ಸಂಚಾಲಕರಾದ ಅರವಿಂದ್ ಕೇಜ್ರಿವಾಲ್’ರವರು ಕರ್ನಾಟಕದ ಜನತೆಗೆ ಗ್ಯಾರೆಂಟಿಗಳ ಮೊದಲ ಪಟ್ಟಿಯನ್ನು ಘೋಷಿಸಿದರು. “ ಇದೇ ತಿಂಗಳ 18 ಮತ್ತು 19 ಶನಿವಾರ ಹಾಗೂ ಭಾನುವಾರದಂದು ಪಕ್ಷದ ಕಾರ್ಯಾಧ್ಯಕ್ಷ, ಉಪ ಕಾರ್ಯಾಧ್ಯಕ್ಷರು, ಸ್ಪರ್ಧಾಕಾಂಕ್ಷಿಗಳು ಹಾಗೂ ಕಾರ್ಯಕರ್ತರು ಅವರವರ ಕ್ಷೇತ್ರಗಳಲ್ಲಿ ಪ್ರಣಾಳಿಕೆಗೆ ಮಾಹಿತಿ ಸಂಗ್ರಹಿಸಲಿದ್ದಾರೆ. ಇದಕ್ಕಾಗಿ ಹಿಂದಿನ ಅಭಿಯಾನದಲ್ಲಿ ದೊರೆತ ಮಾಹಿತಿಯನ್ನು ಆಧರಿಸಿ 15 ಪ್ರಮುಖ ವಿಷಯಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಇವುಗಳ ಆಧಾರದಲ್ಲಿ ಜನರಿಂದ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಈ ಮಾಹಿತಿಯನ್ನು ಆಧರಿಸಿ ನಾವು ಪ್ರಣಾಳಿಕೆ ಸಿದ್ಧಪಡಿಸುತ್ತೇವೆ. ನಾವು ಮಾಹಿತಿಗಳನ್ನು ಸಂಗ್ರಹಿಸಲು ಸರಳ ಡಿಜಿಟಲ್ ಪ್ರಕ್ರಿಯೆಯನ್ನು ಕೂಡ ನಾವು ರಚಿಸಿದ್ದೇವೆ. http://bit.ly/JanaraPranalike ಲಿಂಕ್ ಓಪನ್ ಮಾಡಿ ಪ್ರಣಾಳಿಕೆಗೆ ಮಾಹಿತಿಗಳನ್ನು ನೀಡಬಹುದಾಗಿದೆ. 9353116032 ಸಂಖ್ಯೆಗೆ ವಾಟ್ಸಪ್ “ಜನರ ಪ್ರಣಾಳಿಕೆ” ಎಂದು ವಾಟ್ಸಪ್ ಮೆಸೇಜ್ ಕಳುಹಿಸಿ ಕೂಡ ಈ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಈ ಸಂಖ್ಯೆಗೆ ಯಾರು ಮೆಸೇಜ್ ಕಳುಹಿಸಿದರೂ, ಅವರಿಗೆ ತಮ್ಮ ಸ್ವಂತ ಕ್ಷೇತ್ರದ ಪ್ರಣಾಳಿಕೆಗೆ ಹೇಗೆ ಮಾಹಿತಿ ನೀಡಬಹುದು ಎಂದು ತಿಳಿಸಲಾಗುತ್ತದೆ” ಎಂದು ಡಾ. ಅಶ್ವಿನ್ ಮಹೇಶ್ ಹೇಳಿದರು.


ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ ಮಾತನಾಡಿ, “ಸ್ವಾತಂತ್ರ್ಯ ಬಂದಾಗಿನಿಂದಲೂ ರಾಜಕೀಯ ಪಕ್ಷಗಳು ಪ್ರತಿ ಐದು ವರ್ಷಗಳಿಗೊಮ್ಮೆ ಪ್ರತಿ ರಾಜ್ಯದಲ್ಲೂ ಪ್ರಣಾಳಿಕೆಯನ್ನು ಘೋಷಿಸುತ್ತಲೇ ಇವೆ. ಆದರೆ 65 ವರ್ಷಗಳ ನಂತರ ಕೂಡ, ಭಾರತೀಯರು ಬೇರೆ ಎಲ್ಲದಕ್ಕಿಂತ ಹೆಚ್ಚಾಗಿ ಮಕ್ಕಳಿಗೆ ಶಿಕ್ಷಣ ಹಾಗೂ ಕುಟುಂಬಕ್ಕೆ ಆರೋಗ್ಯ ಸೇವೆಯನ್ನು ಬಯಸುತ್ತಿದ್ದಾರೆ ಎಂಬುದನ್ನು ಅವು ಅರ್ಥ ಮಾಡಿಕೊಂಡಿಲ್ಲ. ಇಂತಹ ದೊಡ್ಡ ವಿಚಾರವನ್ನು ಅವು ಹೇಗೆ ಬಿಟ್ಟವು? ಏಕೆಂದರೆ ಅವು ಎಂದೂ ಕೂಡ ಸಾರ್ವಜನಿಕರ ಅಭಿಪ್ರಾಯವನ್ನು ಕೇಳಿಲ್ಲ. ಎಎಪಿಯು ಅವೆಲ್ಲವನ್ನೂ ಬದಲಾಯಿಸಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿ ಮುಖಂಡರು ಹಾಗೂ ಮಾಜಿ ಸಂಸದರಾದ ಡಾ. ವೆಂಕಟೇಶ್ ಹಾಗೂ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಭಾಗವಹಿಸಿದ್ದರು.

Join Whatsapp
Exit mobile version