125 ಕಾಂಗ್ರೆಸ್ ನಾಯಕರು ರಾಜ್ಯ ಪಾದಯಾತ್ರಿಗಳಾಗಿ 511 ಕಿ.ಮೀ ನಡೆಯಲಿದ್ದಾರೆ: ಬಿ.ಕೆ. ಹರಿಪ್ರಸಾದ್

Prasthutha|

ಬೆಂಗಳೂರು: ಸೆ.7ರಂದು ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯ ವಿವೇಕಾನಂದ ಪ್ರತಿಮೆ, ತಿರುವಳ್ಳುವರ್ ಪ್ರತಿಮೆ, ಮಹಾತ್ಮಾ ಗಾಂಧಿ ಮಂಟಪ, ಕಾಮರಾಜ್ ಅವರ ಪ್ರತಿಮೆಗೆ ಗೌರವ ಸಲ್ಲಿಸಿ ಮಧ್ಯಾಹ್ನ ಪಾದಯಾತ್ರೆ ಆರಂಭವಾಗಲಿದೆ. 19 ದಿನಗಳ ಕಾಲ ಕೇರಳ, 4 ದಿನಗಳ ಕಾಲ ತಮಿಳುನಾಡಿನಲ್ಲಿ ಪಾದಯಾತ್ರೆ ಮಾಡಲಾಗುವುದು. ಸೆ.29 ಅಥವಾ 30ರಂದು ಗುಂಡ್ಲುಪೇಟೆ ಮೂಲಕ ಕರ್ನಾಟಕ ಪ್ರವೇಶಿಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

- Advertisement -

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಜತೆ 125 ಮಂದಿ ಭಾರತ ಯಾತ್ರಿಗಳು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 12 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 3500 ಕಿ.ಮೀ ಹೆಜ್ಜೆ ಹಾಕಲಿದ್ದಾರೆ ಎಂದರು. 

ಕರ್ನಾಟಕ ರಾಜ್ಯದ 125 ಕಾಂಗ್ರೆಸ್ ನಾಯಕರು ರಾಜ್ಯ ಪಾದಯಾತ್ರಿಗಳಾಗಿ ರಾಜ್ಯದ 511 ಕಿ.ಮೀ ನಡೆಯಲಿದ್ದಾರೆ. ಇನ್ನು ನೆರೆ ರಾಜ್ಯದ 125 ನಾಯಕರಿಗೆ ಅತಿಥಿ ಯಾತ್ರಿಗಳಾಗಿ ಅವಕಾಶ ನೀಡಲಾಗುವುದು. ನಿತ್ಯ ಬೆಳಗ್ಗೆ 7 ಗಂಟೆಗೆ ಸ್ಥಳೀಯವಾಗಿ ಪಾದಯಾತ್ರೆ ಆರಂಭವಾಗಲಿದೆ. 11 ಗಂಟೆವರೆಗೂ ಹಳ್ಳಿ ಹಾಗೂ ಗ್ರಾಮಸ್ಥರ ಜತೆ ಪಾದಯಾತ್ರೆ. ನಂತರ 11ರಿಂದ ಮಧ್ಯಾಹ 2 ಗಂಟೆವರೆಗೂ ಸ್ಥಳೀಯ ಸಾಹಿತಿಗಳು, ಕಲಾವಿದರು, ವಕೀಲರು, ಶಿಕ್ಷಕರು, ವಿದ್ಯಾರ್ಥಿಗಳು, ಯುವಕರು ಹಾಗೂ ಮಹಿಳೆಯರ ಜತೆ ಸಂಭಾಷಣೆ ನಡೆಸುತ್ತಾರೆ. ನಂತರ ಸುಮಾರು 20 ಸಾವಿರ ಜನ ಸ್ಥಳೀಯರು ರಾಹುಲ್ ಗಾಂಧಿ ಅವರ ಜತೆ ಹೆಜ್ಜೆ ಹಾಕಲಿದ್ದಾರೆ ಎಂದು ತಿಳಿಸಿದರು.

- Advertisement -

ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರುವರೆಗೂ ಪಾದಯಾತ್ರೆ ಸಾಗಿ ತೆಲಂಗಾಣಕ್ಕೆ ಪ್ರವೇಶಿಸುವುದು ಎಂದರು.



Join Whatsapp