ತೊಕ್ಕೊಟ್ಟು ಬೀಫ್ ಸ್ಟಾಲ್ ಗೆ ಬೆಂಕಿ ಹಚ್ಚಿದ ಘಟನೆ | ಆರೋಪಿ ನಾಗರಾಜ ಬಂಧನ

Prasthutha|

ಮಂಗಳೂರು : ಕಳೆದ ವಾರ ತೊಕ್ಕೊಟ್ಟುವಿನಲ್ಲಿ ಬೀಫ್ ಸ್ಟಾಲ್ ಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

- Advertisement -

ತೊಕ್ಕೊಟ್ಟು ಒಳಪೇಟೆ ನಿವಾಸಿ ನಾಗರಾಜ ಎಂಬಾನನ್ನು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದಾರೆ. ಬಾಡಿಗೆ ಮನೆಯಲ್ಲಿ ಈತ ತನ್ನ ತಾಯಿಯೊಂದಿಗೆ ವಾಸವಿದ್ದ ಎಂದು ಅವರು ತಿಳಿಸಿದ್ದಾರೆ.

ಆರೋಪಿ ನಾಗರಾಜ ತೊಕ್ಕೊಟ್ಟಿನ ಬೀಫ್ ಸ್ಟಾಲ್ ನಿಂದ ಹಲವು ಬಾರಿ ಮಾಂಸ ಖರೀದಿಸಿ ತನ್ನ ಸ್ನೇಹಿತನ ಮನೆಯಲ್ಲಿ ಅಡುಗೆ ಮಾಡಿ ಸೇವಿಸಿದ್ದ. ಈ ಹಿಂದೆ ಮಾಂಸದಂಗಡಿ ಮಾಲಕರಲ್ಲಿ ನಿಗದಿತ ಬೆಲೆಗಿಂತ ಅಧಿಕ ಮಾಂಸ ನೀಡುವಂತೆ ಒತ್ತಾಯಿಸಿದ್ದನು. ಈ ವೇಳೆ ಹಣ ಕೊಟ್ಟಷ್ಟೇ ಮಾಂಸ ನೀಡುವುದು, ಹೆಚ್ಚುವರಿ ನೀಡಲಾಗದು ಎಂದು ಅಂಗಡಿಯಾತ ಹೇಳಿದ್ದಾನೆ. ಇದರಿಂದ ಕೋಪಗೊಂಡು ಆರೋಪಿ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.

- Advertisement -

ಜ.9ರಂದು ನಸುಕಿನ ಜಾವ 2 ಗಂಟೆ ಸುಮಾರಿಗೆ ಮಾಂಸದಂಗಡಿಗೆ ತೆರಳಿ, ಅದಕ್ಕೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ಘಟನೆಯ ಬಗ್ಗೆ ತಾಯಿಯ ಬಳಿ ಹೇಳಿಕೊಂಡಿದ್ದಾನೆ. ಆದರೆ, ಕುಡಿತದ ಮತ್ತಿನಲ್ಲಿ ಏನೋ ಹೇಳುತ್ತಿದ್ದಾನೆ ಎಂದು ಅವರು ಅಂದುಕೊಂಡಿದ್ದರು. ಮರುದಿನ ಘಟನೆ ಬೆಳಕಿಗೆ ಬಂದಾಗ ಅವರಿಗೆ ನಿಜ ಗೊತ್ತಾಗಿತ್ತು.

ಆರೋಪಿಯನ್ನು ಬಂಧಿಸಲು ಪೊಲೀಸರು ವಿಶೇಷ ತಂಡ ರಚಿಸಿದ್ದರು. ಅಂಗಡಿ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ಫೂಟೇಜ್ ಗಳನ್ನು ವಶಕ್ಕೆ ಪಡೆದು, ಪರಿಶೀಲಿಸಿದಾಗ ಆರೋಪಿಯ ಸುಳಿವು ಸಿಕ್ಕಿತ್ತು. ಪೂರಕ ದಾಖಲೆಗಳ ಸಂಗ್ರಹದ ಬಳಿಕವೇ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ತಪ್ಪು ಮಾಡಿರುವುದನ್ನು ಆತ ಒಪ್ಪಿಕೊಂಡಿದ್ದಾನೆ. ತನಿಖೆ ಮುಂದುವರಿದಿದೆ. ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಹರಿರಾಮ್ ಶಂಕರ್ ಉಪಸ್ಥಿತರಿದ್ದರು.

Join Whatsapp