ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನೇ ಕೊಂದ ಪತ್ನಿ, ಪ್ರಿಯಕರ

Prasthutha|

ಬೆಂಗಳೂರು: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ತಾಳಿ ಕಟ್ಟಿದ ಪತಿಯನ್ನೇ ಕೊಲೆ ಮಾಡಿದ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಯಲಹಂಕ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಲಹಂಕದ ಕೊಂಡಪ್ಪಲೇಔಟ್ ನ ನೇಯ್ಗೆ ಕೆಲಸ ಮಾಡುತ್ತಿದ್ದ ಚಂದ್ರಶೇಖರ(34) ಎಂಬವರನ್ನು ಕೊಲೆಗೈದ ಆತನ ಪತ್ನಿ ಶ್ವೇತಾ(21) ಹಾಗೂ ಆಕೆಯ ಪ್ರಿಯಕರ ಸುರೇಶ್ ಅಲಿಯಾಸ್ ಮೂಲಿಸೂರಿ (25) ಎಂಬವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಡಾ.ಅನೂಪ್ ಶೆಟ್ಟಿ ತಿಳಿಸಿದ್ದಾರೆ.

- Advertisement -


ಕೊಂಡಪ್ಪ ಲೇಔಟ್ ನ ತಾನು ವಾಸಿಸುತ್ತಿದ್ದ ಮೂರನೇ ಮಹಡಿಯ ಮನೆಯ ಟೆರೇಸ್ ಮೇಲೆ ಚಂದ್ರಶೇಖರ್ ನನ್ನು ಕೊಲೆ ಮಾಡಲಾಗಿತ್ತು. ಈ ಸಂಬಂಧ ಅವರ ಮಾವ ಶಿವಪ್ಪ ಎಂಬವರು ಯಲಹಂಕ ಪೊಲೀಸ್ ಠಾಣೆಯಲ್ಲಿ ಅ.21ರಂದು ದೂರು ದಾಖಲಿಸಿದ್ದರು.
ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಈ ಕೃತ್ಯ ಕೊಲೆಯಾದ ಚಂದ್ರಶೇಖರ್ ಪತ್ನಿ ಶ್ವೇತಾಳಿಂದಲೇ ನಡೆರುವ ಶಂಕೆ ವ್ಯಕ್ತವಾಗಿತ್ತು.
ಶ್ವೇತಾ ಮತ್ತು ಮತ್ತೊಬ್ಬ ಆರೋಪಿ ಸುರೇಶ್ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಸೋದರ ಮಾವನಾದ ಚಂದ್ರಶೇಖರ್ ಜೊತೆ ಶ್ವೇತಾಳ ಮದುವೆ ನಡೆಯುವುದಕ್ಕೂ ಮುಂಚಿನಿಂದಲೂ ಇಬ್ಬರ ನಡುವೆ ಪ್ರೀತಿಯಿತ್ತು.


ಇಷ್ಟವಿಲ್ಲದಿದ್ದರೂ ತಾಯಿಯ ತಮ್ಮನ ಜೊತೆ ಶ್ವೇತಾ ಬಲವಂತವಾಗಿ ಮದುವೆ ಆಗಿದ್ದಳು. ಮದುವೆ ನಂತರವೂ ಶ್ವೇತಾ ಮತ್ತು ಸುರೇಶ್ ನಡುವೆ ಪ್ರೀತಿ ಮುಂದುವರಿದು, ಅನೈತಿಕ ಸಂಬಂಧವನ್ನು ಹೊಂದಿದ್ದರು.
ಇಬ್ಬರ ಸಂಬಂಧಕ್ಕೆ ಚಂದ್ರಶೇಖರ್ ಅಡ್ಡಿಯಾಗಿದ್ದರಿಂದ ಆತನನ್ನು ಸಾಯಿಸಲು ಪ್ರಿಯಕರನ ಜೊತೆ ಸೇರಿ, ಶ್ವೇತಾ ಸಂಚು ರೂಪಿಸಿದ್ದಳು. ಬಳಿಕ ತಮ್ಮ ಪ್ಲಾನ್ ನಂತೆ ಕೊಲೆ ಮಾಡಿ, ಯಾರಿಗೂ ಗೊತ್ತಿಲ್ಲದಂತೆ ಶ್ವೇತಾ ಮತ್ತು ಸುರೇಶ್ ನಾಟಕವಾಡಿದ್ದರು. ಕಾರ್ಯಾಚರಣೆ ಕೈಗೊಂಡು ಇಬ್ಬರನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದರು.



Join Whatsapp