ಆಕ್ಸಿಜನ್ ಕೊರತೆ | ದೆಹಲಿಯ ಜೈಪುರ್ ಗೋಲ್ಡನ್ ಆಸ್ಪತ್ರೆಯಲ್ಲಿದ್ದ 20 ಮಂದಿ ಕೊರೋನಾ ಸೋಂಕಿತರು ಸಾವು

Prasthutha|

ಹೊಸದಿಲ್ಲಿ : ಆಕ್ಸಿಜನ್ ಕೊರತೆಯಿಂದ ದೆಹಲಿಯ ಜೈಪುರ್ ಗೋಲ್ಡನ್ ಆಸ್ಪತ್ರೆಯಲ್ಲಿ 20 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿರುವ ದಾರುಣ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಶೀಘ್ರವೇ ಆಕ್ಸಿಜನ್ ಪೂರೈಸುವಂತೆ ಆಸ್ಪತ್ರೆಯವರು ದೆಹಲಿಯ ಪ್ರಾಧಿಕಾರಕ್ಕೆ ಮನವಿ ಮಾಡಿದ್ದಾರೆ.

- Advertisement -

“ನಿನ್ನೆ ಸಂಜೆ 5 ಗಂಟೆಯ ಹೊತ್ತಿಗೆ 3.5 ಮೆಟ್ರಿಕ್ ಟನ್ ಆಮ್ಲಜನಕದ ಪೂರೈಕೆಯಾಗಬೇಕಿತ್ತು. ಆದರೆ ಅದು ಮಧ್ಯರಾತ್ರಿಯ ಹೊತ್ತಿಗೆ ತಲುಪಿತು. ಆ ಹೊತ್ತಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದ 20 ರೋಗಿಗಳು ಸಾವನ್ನಪ್ಪಿದ್ದರು ಎಂದು ಆಸ್ಪತ್ರೆಯವರು ತಿಳಿಸಿದ್ದಾರೆ.

  “ಜೈಪುರ ಗೋಲ್ಡನ್ ಆಸ್ಪತ್ರೆ ಆಮ್ಲಜನಕಕ್ಕಾಗಿ ಕಾಯುತ್ತಿದೆ. 215 ಕೋವಿಡ್ ರೋಗಿಗಳು ಆಸ್ಪತ್ರೆಯಲ್ಲಿ ಇದ್ದಾರೆ. ಆದಷ್ಟು ಶೀಘ್ರ ಆಕ್ಸಿಜನ್ ಸರಬರಾಜು ಮಾಡಿ. ದಯವಿಟ್ಟು ಸಹಾಯ ಮಾಡಿ, ನಾವು ಹತಾಶರಾಗಿದ್ದೇವೆ” ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಬಲೂಜಾ ಶನಿವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ.

- Advertisement -

ಇದಕ್ಕೂ ಮೊದಲು ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ (ಎಸ್ ಜಿ ಆರ್ ಹೆಚ್ ) ಸುಮಾರು 24 ಕೋವಿಡ್ -19 ರೋಗಿಗಳು 24 ಗಂಟೆಗಳ ಅವಧಿಯಲ್ಲಿ ಸಾವನ್ನಪ್ಪಿದ್ದರು. 

ಜೈಪುರ ಗೋಲ್ಡನ್ ಆಸ್ಪತ್ರೆಯ ಜೊತೆಗೆ, ಮೂಲ್ ಚಂದ್ ಆಸ್ಪತ್ರೆ, ಎಸ್ ಜಿ ಆರ್ ಹೆಚ್, ಬಾತ್ರಾ ಆಸ್ಪತ್ರೆ, ಶನಿವಾರ ಆಮ್ಲಜನಕದ ಕೊರತೆ ಇರುವುದಾಗಿ ಮಾಹಿತಿ ನೀಡಿವೆ. ಆಸ್ಪತ್ರೆಗಳಿಗೆ ಶೀಘ್ರದಲ್ಲಿಯೇ ವ್ಯವಸ್ಥೆ ಮಾಡುವಂತೆ ಪ್ರಾಧಿಕಾರಕ್ಕೆ ಈ ಆಸ್ಪತ್ರೆಗಳು ಮನವಿ ಮಾಡಿವೆ.

Join Whatsapp