ಬಿಜೆಪಿ ಸರ್ಕಾರದ ಪೆಟ್ರೋಲ್ ಪಿಕ್ ಪಾಕೆಟ್ ಖಂಡಿಸಿ ‘100 ನಾಟೌಟ್’ ಆಂದೋಲನ : ಡಿ.ಕೆ ಶಿವಕುಮಾರ್

Prasthutha|

ಬೆಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆ ಮೂಲಕ ಜನರ ಜೇಬು ಲೂಟಿ ಮಾಡುತ್ತಿದೆ. ಇದನ್ನು ಖಂಡಿಸಿ ರಾಜ್ಯದಲ್ಲಿ ಐದು ದಿನಗಳ ಕಾಲ 5 ಸಾವಿರ ಪೆಟ್ರೋಲ್ ಬಂಕ್ ಗಳಲ್ಲಿ ‘100 ನಾಟೌಟ್’ ಅಭಿಯಾನ ಆರಂಭಿಸುತ್ತಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

- Advertisement -

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದ ಇತಿಹಾಸ ಪುಟಕ್ಕೆ ನಾವೆಲ್ಲ ಸಾಕ್ಷಿಯಾಗುತ್ತಿದ್ದೇವೆ. ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ, ದಾಖಲೆಗಳನ್ನು ಮುರಿಯುತ್ತಿದೆ. ಪೆಟ್ರೋಲ್ ಬೆಲೆ ₹100 ಗಡಿ ದಾಟಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್  ರಾಜ್ಯಾದ್ಯಂತ ‘100 ನಾಟೌಟ್’ ಆಂದೋಲನ ಹಮ್ಮಿಕೊಂಡಿದೆ. ಈ ಪ್ರತಿಭಟನೆ ಇದೇ ತಿಂಗಳು 11ರಿಂದ 15 ರವರೆಗೂ ಐದು ದಿನಗಳ ಕಾಲ 5 ಸಾವಿರ ಪೆಟ್ರೋಲ್ ಬಂಕ್ ಗಳ ಮುಂದೆ ನಡೆಯಲಿದೆ ಎಂದರು.

ಜೂ. 11 ರಂದು ಎಲ್ಲ ಜಿಲ್ಲಾ ಕೇಂದ್ರ, 12 ರಂದು ತಾಲೂಕು ಕೇಂದ್ರಗಲ್ಲಿ, 13 ರಂದು ಎಲ್ಲ ಜಿಲ್ಲಾ ಪಂಚಾಯಿತಿ ಹಾಗೂ ಹೋಬಳಿ ಕೇಂದ್ರಗಳಲ್ಲಿ, 14 ರಂದು ಗ್ರಾಮ ಪಂಚಾಯ್ತಿ ವ್ಯಾಪ್ತಿ ಪೆಟ್ರೋಲ್ ಬಂಕ್ ಗಳಲ್ಲಿ, 15 ರಂದು ಪ್ರಮುಖ ಪೆಟ್ರೋಲ್ ಬಂಕ್ ಗಳಲ್ಲಿ ಪ್ರತಿಭಟನೆ ಮಾಡಲಾಗುವುದು. ನಮ್ಮ ಎಲ್ಲ ಘಟಕಗಳಾದ ಯೂತ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಎಂಎಸ್ ಯುಐ, ರೈತ ಘಟಕ, ಹಿಂದುಳಿದ, ಅಲ್ಪಸಂಖ್ಯಾತ ಘಟಕ, ಬ್ಲಾಕ್, ಜಿಲ್ಲಾ ಕಾಂಗ್ರೆಸ್ ಸದಸ್ಯರು ಈ ಐದು ಸಾವಿರ ಪೆಟ್ರೋಲ್ ಬಂಕ್ ಗಳಲ್ಲಿ ಬೆಳಗ್ಗೆ 11 ರಿಂದ 12 ರವರೆಗೂ ಒಂದು ಗಂಟೆಗಳ ಕಾಲ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

- Advertisement -

ಎಲ್ಲ ಜಿಲ್ಲೆಗಳ ಉಸ್ತುವಾರಿಗೆ ಒಬ್ಬೊಬ್ಬ ನಾಯಕರನ್ನು ನೇಮಿಸಲಾಗುತ್ತಿದೆ. ಕೊರೊನಾ ಭ್ರಷ್ಟಾಚಾರ ವಿಚಾರವಾಗಿ ನಮ್ಮ ನಾಯಕರು ಪ್ರತಿ ಜಿಲ್ಲೆಗೆ ಹೋಗಿ ಪತ್ರಿಕಾಗೋಷ್ಠಿ ಮಾಡಿದಂತೆ, ಈಗಲೂ ಪ್ರತಿಭಟನೆ ನೇತೃತ್ವಕ್ಕೆ ನಾಯಕರನ್ನು ನೇಮಕ ಮಾಡಲಾಗುವುದು. ಈ ಉಸ್ತುವಾರಿ ಹೊತ್ತಿರುವ ನಾಯಕರು ಝೂಮ್ ಮೂಲಕ ಪ್ರತಿಭಟನೆ ವೀಕ್ಷಿಸಬೇಕು.ಈ ಪ್ರತಿಭಟನೆಯ 1 ನಿಮಿಷ ವಿಡಿಯೋ ಮಾಡಿ, ಪಕ್ಷದ ಐಟಿ ಸೆಲ್ ಹಾಗೂ ಸಾಮಾಜಿಕ ಜಾಲತಾಣ ವಿಭಾಗಕ್ಕೆ ಕಳುಹಿಸಬೇಕು. ಅದನ್ನು ಎಐಸಿಸಿಗೂ ಕಳುಹಿಸಲಾಗುವುದು. ನಾನು, ನಮ್ಮ ಶಾಸಕರು, ಮಾಜಿ ಶಾಸಕರು, ಪಂಚಾಯ್ತಿ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ. ಕೋವಿಡ್ ನಿಯಮಾವಳಿ ಪಾಲಿಸಿ ಈ ಪ್ರತಿಭಟನೆ ಮಾಡಬೇಕು. ಪೆಟ್ರೋಲ್ ಮೂಲಕ ಸರ್ಕಾರ ಪಿಕ್ ಪಾಕೆಟ್ ಮಾಡುತ್ತಿರುವುದನ್ನು ಖಂಡಿಸಿ ಈ ಅಭಿಯಾನ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಜನವರಿಯಲ್ಲಿ 16 ಬಾರಿ, ಫೆಬ್ರವರಿಯಲ್ಲಿ 16, ಮೇ ನಲ್ಲಿ 16 ಬಾರಿ ಪೆಟ್ರೋಲ್ ಬೆಲೆ ಏರಿಕೆ ಮಾಡಲಾಗಿದೆ. ಚುನಾವಣೆ ನಡೆದ ಮಾರ್ಚ್, ಏಪ್ರಿಲ್ ನಲ್ಲಿ ಬೆಲೆ ಏರಿಕೆ ಮಾಡಲಿಲ್ಲ. ಕೇಂದ್ರ ಸರ್ಕಾರ ಈ ಬೆಲೆ ಏರಿಕೆಯಿಂದ ₹21.60 ಲಕ್ಷ ಕೋಟಿ ಹಣವನ್ನು ಸಂಪಾದಿಸಿದೆ. ಶ್ರೀಲಂಕಾ, ಬಾಂಗ್ಲಾ, ಪಾಕಿಸ್ತಾನದಲ್ಲಿನ ದರದ ಜತೆ ಲೆಕ್ಕ ಹಾಕಿ. ಜಿಡಿಪಿಯು ಅವರಿಗಿಂತ ಕೆಳಗೆ ಕುಸಿದಿದೆ. ಬಲಿಷ್ಠ ಭಾರತಕ್ಕೆ ಇಂತಹ ದುಸ್ಥಿತಿ ಬಂದಿದೆ. ಈ ಸಂದರ್ಭದಲ್ಲಿ ನಾವು ನಮ್ಮ ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್, ನರಸಿಂಹ ರಾವ್, ರಾಜೀವ್ ಗಾಂಧಿ, ಇಂದಿರಾಗಾಂಧಿ ಅವರ ಕಾಲವನ್ನು ಮೆಲಕು ಹಾಕಬೇಕು. ಆಗ ಯಾವ ರೀತಿ ಜನರ ಭಾವನೆ ಇತ್ತು. ಸರಕಾರ ತೆರಿಗೆ ನಿಯಂತ್ರಣ ಮಾಡಿದ್ದು ಗಮನಿಸಬೇಕು. ಈ ಸರ್ಕಾರ ಇದ್ಯಾವುದನ್ನು ಗಮನಿಸದೆ ನಿರ್ಧಾರ ಕೈಗೊಳ್ಳುತ್ತಿದೆ. ಈ ವರ್ಷ ಒಟ್ಟು 48 ಬಾರಿ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಆ ಮೂಲಕ ಜನರ ಜೇಬಿಗೆ ಕನ್ನ ಹಾಕಲಾಗಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಕೊರೊನಾ ಸಮಯದಲ್ಲಿ ಸರ್ಕಾರ ನಮ್ಮ ಹತ್ಯೆ ಮಾಡಲು ಪ್ರಯತ್ನಿಸುತ್ತಿದೆ. ತೈಲ ಬೆಲೆ ಅನುಗುಣವಾಗಿ ಇಂಧನ ಬೆಲೆ ಇಳಿಸಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಅವರು ಒತ್ತಾಯಿಸಿದ್ದಾರೆ.

ಉಚಿತ ಲಸಿಕೆ ನಮ್ಮ ಹೋರಾಟದ ಫಲ:

ನಾವು ಹೋರಾಟ ಮಾಡಿದ್ದರಿಂದ ಕೇಂದ್ರ ಸರ್ಕಾರ ದೇಶದಾದ್ಯಂತ ಇಂದು ಉಚಿತ ಲಸಿಕೆ ಘೋಷಿಸಿದೆ. ಎಲ್ಲ ರಾಜ್ಯಗಳಲ್ಲಿ ನಮ್ಮ ಪಕ್ಷ ರಾಜ್ಯಪಾಲರನ್ನು ಭೇಟಿ ಮಾಡಿ, ಉಚಿತ ಲಸಿಕೆಗೆ ಆಗ್ರಹಿಸಿದ್ದರು. ನಂತರ ನಾವು ನಮ್ಮ ಶಾಸಕರ ನಿಧಿಯಿಂದ ಲಸಿಕೆ ನೀಡಲು ಅನುಮತಿ ಕೋರಿದ್ದೆವು. ಆದರೆ ಸರ್ಕಾರ ಅದನ್ನು ನಿರಾಕರಿಸಿದ್ದು, ಜನರ ಜೀವ ರಕ್ಷಿಸಲು ನಿರಾಕರಿಸಿದೆ.ಈ ವಿಚಾರದಲ್ಲಿ ಕೇಂದ್ರ ಸರ್ಕಾರದಷ್ಟೇ ರಾಜ್ಯ ಸರ್ಕಾರ ಕೂಡ ವಿಫಲವಾಗಿದೆ. ಸುಪ್ರೀಂಕೋರ್ಟ್ ಚಾಟಿ ಬೀಸಿದ ನಂತರ ಸರ್ಕಾರ ಎಚ್ಚೆತ್ತುಕೊಂಡಿದೆ. ಮಾಧ್ಯಮಗಳು ಜನರ ಪರವಾಗಿ ನಿಂತಿದೆ ಎಂದ ಅವರು ನ್ಯಾಯಾಲಯದ ಜತೆ ಮಾಧ್ಯಮಗಳಿಗೂ ಅಭಿನಂದನೆ ಸಲ್ಲಿಸಿದ್ದಾರೆ.

Join Whatsapp