‘ಲವ್ ಜಿಹಾದ್’ ಚರ್ಚೆ : ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ವಿರುದ್ಧ ಬುಗಿಲೆದ್ದಿತು ಆಕ್ರೋಶ

Prasthutha|

ಮುಂಬೈ : ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಟಿಯಾಗಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ‘ಲವ್ ಜಿಹಾದ್’ ಕುರಿತು ಚರ್ಚೆ ನಡೆಸಿದ್ದಾರೆನ್ನಲಾದ ವಿಷಯ ಭಾರೀ ವಿವಾದಕ್ಕೆ ಕಾರಣವಾಗಿದೆ. ಮಹಿಳಾ ಆಯೋಗದ ಟ್ವಿಟರ್ ಖಾತೆಯಿಂದ, ರೇಖಾ ಶರ್ಮಾ ಅವರು ರಾಜ್ಯಪಾಲರನ್ನು ಭೇಟಿಯಾಗಿ ‘ಲವ್ ಜಿಹಾದ್’ ಪ್ರಕರಣಗಳ ಹೆಚ್ಚಳದ ಬಗ್ಗೆ ಚರ್ಚಿಸಿದ್ದಾರೆ ಎನ್ನುವ ಪೋಸ್ಟ್ ಬಹಿರಂಗವಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅದು ಭಾರೀ ಟೀಕೆಗೆ ಗುರಿಯಾಗಿದೆ

- Advertisement -

ಮುಸ್ಲಿಂ ಪುರುಷರು ಇತರ ಧರ್ಮದ ಮಹಿಳೆಯರನ್ನು ಮತಾಂತರ ಮಾಡುವ ಉದ್ದೇಶದಿಂದಲೇ ವಿವಾಹವಾಗುವ ಸಂಚು ‘ಲವ್ ಜಿಹಾದ್’ ಎಂದು ಬಿಜೆಪಿ ಬೆಂಬಲಿತ ಸಂಘಟನೆಗಳು ಕಳೆದ ಕೆಲವು ವರ್ಷಗಳಿಂದ ಅಪಪ್ರಚಾರ ಮಾಡುತ್ತಲೇ ಬಂದಿವೆ. ಆದರೆ, ಕಳೆದ ಫೆಬ್ರವರಿಯಲ್ಲಿ ಅಂತಹ ಯಾವುದೇ ಪ್ರಕರಣಗಳಿಲ್ಲ ಎಂದು ಸ್ವತಃ ಬಿಜೆಪಿ ನೇತೃತ್ವದ ಸರಕಾರ ಸಂಸತ್ತಿನಲ್ಲಿ ಸ್ಪಷ್ಟಪಡಿಸಿತ್ತು. ಆದರೂ, ಬಿಜೆಪಿ ಬೆಂಬಲಿಗರು ಈ ಕುರಿತು ವಿವಾದಗಳನ್ನು ಸೃಷ್ಟಿಸುತ್ತಲೇ ಇರುವುದು ದೇಶದ ನಾಗರಿಕರಲ್ಲಿ ಆಕ್ರೋಶವನ್ನುಂಟು ಮಾಡಿದೆ.

ವಿಷಯಕ್ಕೆ ಸಂಬಂಧಿಸಿ ವಿವಿಧ ಮಹಿಳಾ ಮತ್ತು ಇತರ ಪ್ರಗತಿಪರ ಚಿಂತಕರು, ಮುಖಂಡರು ಮಹಿಳಾ ಆಯೋಗದ ಟ್ವೀಟ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೇಖಾ ಶರ್ಮಾರ ಹಳೆಯ ಟ್ವೀಟ್ ಗಳೂ ಈ ವೇಳೆ ಚರ್ಚೆಗೆ ಮುನ್ನೆಲೆಗೆ ಬಂದುದರಿಂದ ಮುಜುಗರಗೊಂಡ ಅವರು, ತಮ್ಮ ಟ್ವಿಟರ್ ಖಾತೆಯ ಲಭ್ಯತೆಯನ್ನು ನಿರ್ಬಂಧಿಸಿದ ಘಟನೆಯೂ ನಡೆದಿದೆ.

Join Whatsapp