ಪ್ರಭುತ್ವ ನಿರ್ಮಿತ ವಿಪತ್ತು; ಸೋಂಕು ತಗ್ಗಿಸಲು ಭೌತಿಕವಾಗಿ ಸರ್ಕಾರವೇ ಇಲ್ಲ; ಪಾಪ್ಯುಲರ್ ಫ್ರಂಟ್

Prasthutha|

ಹೊಸದಿಲ್ಲಿ : ಕೋವಿಡ್ -19 ಸಾಂಕ್ರಾಮಿಕ, ಭಾರತವನ್ನು ಸಂಪೂರ್ಣವಾಗಿ ನಾಶಗೊಳಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಸಂಪೂರ್ಣವಾಗಿ ನಿಷ್ಕ್ರಿಯವಾಗಿರುವ ಬಗ್ಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಧ್ಯಕ್ಷ ಒ ಎಂ ಎ ಸಲಾಮ್ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಹೊಣೆಗಾರಿಕೆಯನ್ನು ಯಾರೂ ವಹಿಸಿಕೊಳ್ಳದೆ ಸಂಪೂರ್ಣವಾಗಿ ನಿಷ್ಕ್ರಿಯ ಸ್ಥಿತಿ ನಿರ್ಮಾಣವಾಗಿದೆ. ಸೋಂಕು ನಿಯಂತ್ರಣ ಕೇಂದ್ರಗಳನ್ನು ತೆರೆಯಲು ಕೂಡ ಸರಿಯಾದ ಯೋಜನೆಯಿಲ್ಲದೆ ಕಾರ್ಯನಿರ್ವಹಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಅವರು ಆಪಾದಿಸಿದ್ದಾರೆ.

- Advertisement -

ಈ ದುರಂತದ ಪ್ರಮಾಣ ಮತ್ತು ಸ್ವರೂಪವು ದೊಡ್ಡ ಮಟ್ಟದಲ್ಲಿದೆ. ನಾಗರಿಕರು ಅಥವಾ ನಾಗರಿಕ ಸಮಾಜದ ಸದಸ್ಯರಿಂದ ಅದನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಸರ್ಕಾರೇತರ ಸಂಘಸಂಸ್ಥೆಗಳು, ಸ್ವಯಂಸೇವಕರು ತಮ್ಮ ಮಾನವೀಯತೆ ಮತ್ತು ಸಹ ಜೀವಿಗಳ ಮೇಲಿನ ಪ್ರೀತಿಯಿಂದ ಆಹಾರ, ಔಷಧಿಗಳು ಅಥವಾ ಆಮ್ಲಜನಕ ಸಿಲಿಂಡರ್ಗಳನ್ನು ವ್ಯವಸ್ಥೆಗೊಳಿಸಬಹುದು. ಆದರೆ ಸರ್ಕಾರಕ್ಕಿಂತ ಭಿನ್ನವಾಗಿ, ಉತ್ಪಾದನೆ, ಆಮದು, ವಿತರಣೆ ಅಥವಾ ಅಂತಾರಾಷ್ಟ್ರೀಯ ಸಹಕಾರಕ್ಕೆ ಸಂಬಂಧಿಸಿದಂತೆ ಅವರ ಸಾಮರ್ಥ್ಯಗಳು ಬಹಳ ಸೀಮಿತವಾಗಿವೆ.

ಅಗತ್ಯವಿರುವಷ್ಟು ಲಸಿಕೆಗಳನ್ನು ತಯಾರಿಸಲು ಮುಂಚಿತವಾಗಿ ಆದೇಶಿಸುವಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಮತ್ತು ದೇಶದ ಬಹುಪಾಲು ಜನಸಂಖ್ಯೆಗೆ ಕೈಗೆಟುಕದ ಬೆಲೆಯನ್ನು ನಿಗದಿಪಡಿಸುವ ಬದಲು ಸರ್ಕಾರ, ಫಾರ್ಮಾ ಕಂಪನಿಗಳಿಗೆ ಬೆಲೆ ನಿಗದಿಗೆ ನೀಡಿದ ಸ್ವಾತಂತ್ರ್ಯ, ಲಸಿಕಾ ಅಭಿಯಾನವನ್ನು ಬಹುತೇಕ ಸ್ಥಗಿತಗೊಳಿಸುವಂತೆ ಮಾಡಿದೆ. ಇತ್ತೀಚಿನ ಚುನಾವಣೆಗಳಲ್ಲಿ ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸುವಂತೆ ಮಾಡುವಲ್ಲಿ ಚುನಾವಣಾ ಆಯೋಗದ ಕರ್ತವ್ಯಲೋಪ ಮತ್ತು ಪ್ರಧಾನಿ, ಗೃಹ ಸಚಿವರು, ವಿವಿಧ ರಾಜ್ಯಗಳ ಆಡಳಿತ ಪಕ್ಷಗಳು ಮತ್ತು ರಾಜಕೀಯ ಪಕ್ಷಗಳ ಬೇಜವಾಬ್ದಾರಿ ಚುನಾವಣಾ ಪ್ರಚಾರ ಸಭೆಗಳು ಕೊರೊನಾ ಪ್ರಕರಣಗಳ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿವೆ.

- Advertisement -

ಕೇಂದ್ರದ ಬಿಜೆಪಿ ಸರ್ಕಾರ ಈಗ ಲಸಿಕೆ ಖರೀದಿ ಮತ್ತು ನಿರ್ವಹಣೆಯ ಹೊಣೆಗಳನ್ನು ರಾಜ್ಯ ಸರ್ಕಾರಗಳಿಗೆ ವಹಿಸಿ ಎಲ್ಲಾ ವೈಫಲ್ಯಗಳ ಆಪಾದನೆಗಳನ್ನು ರಾಜ್ಯಗಳ ಮೇಲೆ ವರ್ಗಾಯಿಸುವ ಉದ್ದೇಶವನ್ನು ಹೊಂದಿದೆ. ಅದೇ ವೇಳೆ ಬಿಜೆಪಿಗೆ ಮತ ಹಾಕಿದರೆ ಬಂಗಾಳದಲ್ಲಿ ಉಚಿತ ಲಸಿಕೆಗಳನ್ನು ನೀಡುವ ಘೋಷಣೆಯನ್ನು ಕಂಡಾಗ ಆ ಪಕ್ಷದ ಬೂಟಾಟಿಕೆ ಗೊತ್ತಾಗುತ್ತದೆ. ಸಾಂಕ್ರಾಮಿಕ ರೋಗಗಳು ಪ್ರಾರಂಭವಾದಾಗಿನಿಂದ ಆಕ್ಸಿಜನ್ ಸ್ಥಾವರಗಳನ್ನು ಸ್ಥಾಪಿಸಲು ಮತ್ತು ವ್ಯಾಕ್ಸಿನೇಷನ್ ಅಭಿಯಾನ ನಡೆಸಲು ಕೇಂದ್ರಕ್ಕೆ ಸಾಕಷ್ಟು ಸಮಯಾವಕಾಶ ದೊರೆತಿತ್ತು. ಆದರೆ ಒಟ್ಟು ಜನಸಂಖ್ಯೆಯ ಶೇಕಡಾ ಒಂದು ಭಾಗದಷ್ಟು ಜನರಿಗೂ ಲಸಿಕೆ ನೀಡದ ಸಮಯದಲ್ಲೇ ಮತ್ತು ಮಂಜೂರಾದ 162 ಆಮ್ಲಜನಕ ಉತ್ಪಾದನಾ ಕೇಂದ್ರಗಳ ಪೈಕಿ ಕೇವಲ 33 ಕೇಂದ್ರ ಸ್ಥಾಪನೆ ಮಾಡಿದ ಸಂದರ್ಭದಲ್ಲೇ ದೇಶವನ್ನು ಕೋವಿಡ್ ಮುಕ್ತವೆಂದು ಘೋಷಿಸುವಲ್ಲಿ ಅವರು ನಿರತರಾಗಿದ್ದರು.

ಈ ಅನಿಶ್ಚಿತ ಪರಿಸ್ಥಿತಿಯಲ್ಲಿ, ಆಮ್ಲಜನಕದ ಉತ್ಪಾದನೆ ಮತ್ತು ವಿತರಣೆಯಲ್ಲಿ ಸರ್ಕಾರದ ಕ್ರಿಮಿನಲ್ ವೈಫಲ್ಯದಿಂದ ಉಂಟಾಗುವ ಪ್ರತಿಯೊಂದು ಸಾವಿಗೂ ನಾವು ಬಿಜೆಪಿ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ. ಈಗ ನಡೆಯುತ್ತಿರುವ ಭಾರಿ ಸಾವು ನೋವುಗಳನ್ನು ಬಿಜೆಪಿ ಕಡೆಯಿಂದ ನಡೆದ ಕ್ರಿಮಿನಲ್ ನರಹತ್ಯೆ ಎಂದು ಪಾಪ್ಯುಲರ್ ಫ್ರಂಟ್ ಕರೆದಿದೆ.

ಸ್ವಯಂಸೇವಕರು, ನಾಗರಿಕ ಸಮಾಜ ಗುಂಪುಗಳು ಮತ್ತು ಇತರ ಸರಕಾರೇತರ ಸಂಘ ಸಂಸ್ಥೆಗಳು ಮಾಡುತ್ತಿರುವ ಉತ್ತಮ ಸೇವಾ ಕಾರ್ಯವನ್ನು ನಾವು ಪ್ರಶಂಸಿಸುತ್ತೇವೆ ಮತ್ತು ಜೀವ ಉಳಿಸುವ ಪ್ರಯತ್ನದಲ್ಲಿ ಅವರು ನಿರಂತರವಾಗಿ ತೊಡಗಿರುವುದನ್ನು ನೋಡಲು ನಾವು ಬಯಸುತ್ತೇವೆ. ಈ ಕೊನೆಯ ಕ್ಷಣದಲ್ಲಾದರೂ ಕೇಂದ್ರ ಸರ್ಕಾರವು ತನ್ನ ನಿದ್ರೆಯಿಂದ ಎಚ್ಚೆತ್ತುಕೊಂಡು ರಾಜ್ಯ ಸರ್ಕಾರಗಳು, ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಮಾಜ ಗುಂಪುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ನಾವು ಒತ್ತಾಯಿಸುತ್ತೇವೆ. ನೈಜ ಕರ್ತವ್ಯಲೋಪ, ನಾಚಿಕೆಗೇಡಿನ ವೈಫಲ್ಯವನ್ನು ಮರೆಮಾಚಲು ಭಿನ್ನಾಭಿಪ್ರಾಯದ ಧ್ವನಿಗಳನ್ನು ನಿಗ್ರಹಿಸುವುದನ್ನು ಮತ್ತು ಖಂಡಿಸುವುದನ್ನು ಸರ್ಕಾರ ತಕ್ಷಣ ನಿಲ್ಲಿಸಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಧ್ಯಕ್ಷ ಒ ಎಂ ಎ ಸಲಾಮ್ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Join Whatsapp