ಧಾರವಾಡದಲ್ಲಿ ಭೀಕರ ಅಪಘಾತ; 11 ಮಂದಿ ಸಾವು, 9 ಮಂದಿಗೆ ಗಂಭೀರ ಗಾಯ

Prasthutha|

ಟೆಂಪೋ ಹಾಗೂ ಲಾರಿಯ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 11 ಮಂದಿ ಮೃತಪಟ್ಟು, 9 ಮಂದಿ ಗಾಯಗೊಂಡಿರುವ ದುರ್ಘಟನೆ ಧಾರವಾಡ ತಾಲ್ಲೂಕಿನ ಇಟಿಗಟ್ಟಿ ಬಳಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.
ಅಪಘಾತಗೊಂಡ ವಾಹನಗಳಲ್ಲಿ ಮೃತದೇಹಗಳು ಸಿಲುಕಿಕೊಂಡಿದ್ದು ಅವುಗಳನ್ನು ಹೊರತೆಗೆಯಲಾಗಿದೆ. ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.
ಮೃತರು ದಾವಣಗೆರೆ ಮೂಲದವರು ಎನ್ನಲಾಗಿದ್ದು, ವೀಣಾ, ರಾಜೇಶ್ವರಿ, ಮಂಜುಳಾ ಸೇರಿ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ.
ಕ್ರೇನ್ ಸಹಾಯದಿಂದ ಅಪಘಾತದಿಂದ ಮಗುಚಿದ ವಾಹನವನ್ನು ಮೇಲಕ್ಕೆ ಎತ್ತಲಾಗಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ದಾವಣಗೆರೆಯಿಂದ ಹೊರಟಿದ್ದ ಟೆಂಪೋಗೆ ಧಾರವಾಡದ ಸಮೀಪ ಮುಂಜಾನೆ 3ರ ವೇಳೆಗೆ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ. ಮೃತಪಟ್ಟವರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.
ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಹಾರ ಕಾರ್ಯ ಕೈಗೊಂಡು ಪ್ರಕರಣ ದಾಖಲಿಸಿದ್ದಾರೆ.
ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಎಸ್ಪಿ ಕೃಷ್ಣಕಾಂತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp