Home ರಾಜ್ಯ ಕಾನೂನು ಉಲ್ಲಂಘಿಸಿ ಪಲ್ಲಕ್ಕಿ ಉತ್ಸವ | ಲಾಠಿಚಾರ್ಜ್ | ಕಲ್ಲೆಸೆತ, ಪೊಲೀಸ್ ಜೀಪ್ ಜಖಂ

ಕಾನೂನು ಉಲ್ಲಂಘಿಸಿ ಪಲ್ಲಕ್ಕಿ ಉತ್ಸವ | ಲಾಠಿಚಾರ್ಜ್ | ಕಲ್ಲೆಸೆತ, ಪೊಲೀಸ್ ಜೀಪ್ ಜಖಂ

ಕುಷ್ಟಗಿ : ಕೊರೋನ ಸಂಕಷ್ಟದ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಷರತ್ತುಗಳನ್ನು ಉಲ್ಲಂಘಿಸಿ ಪಲ್ಲಕ್ಕಿ ಉತ್ಸವ ನಡೆಸಿದ ಗುಂಪನ್ನು ತಡೆಯಲು ಯತ್ನಿಸಿದ ಪೊಲೀಸರ ಮೇಲೆ ದಾಳಿ ನಡೆಸಲಾಗಿದೆ. ಉತ್ಸವ ತಡೆಯಲು ಬಂದ ಪೊಲೀಸರ ಮೇಲೆ ಕಲ್ಲು ತೂರಲಾಗಿದೆ ಮತ್ತು ಜೀಪ್ ಜಖಂ ಮಾಡಲಾಗಿದೆ. ಈ ಸಂಬಂಧ ಸುಮಾರು 50 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಕುಷ್ಟಗಿ ತಾಲೂಕಿನ ದೋಟಿಹಾಳದಲ್ಲಿ ಅವಧೂತ ಶುಕಮುನಿ ಆರಾಧನಾ ಮಹೋತ್ಸವದ ಸಂದರ್ಭ ಈ ಘಟನೆ ನಡೆದಿದೆ.

ಕೋವಿಡ್ 19 ಕಾರಣದಿಂದ ಆರಾಧನಾ ಮಹೋತ್ಸವವನ್ನು ಸಾರ್ವಜನಿಕವಾಗಿ ನಡೆಸಲು ಅನುಮತಿಯಿರಲಿಲ್ಲ. ದೇವಸ್ಥಾನದ ಒಳಗೆ ಸರಳವಾಗಿ ನಡೆಸುವಂತೆ ತಹಶೀಲ್ದಾರ್ ಸೂಚಿಸಿದ್ದರು ಎನ್ನಲಾಗಿದೆ. ಆದರೆ, ಪೂಜೆ ನಂತರ ಪಲ್ಲಕ್ಕಿಯನ್ನು ಹೊತ್ತುಕೊಂಡು ಗುಂಪೊಂದು ಮಠದ ಹೊರಗಡೆ ಬಂದಿತ್ತು. ನಿಷೇಧದ ನಡುವೆಯೂ ದೋಟಿಹಾಳ-ಕೇಸೂರು ಗ್ರಾಮಗಳಲ್ಲಿ ಪಲ್ಲಕ್ಕಿ ಹೊತ್ತುಕೊಂಡು ಹೋಗಲಾಗಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳ ಮಾತಿಗೆ ಮನ್ನಣೆ ದೊರೆಯಲಿಲ್ಲ. ಹೀಗಾಗಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಮುಂದಾದರು. ಈ ಸಂದರ್ಭ ಗುಂಪು ಪಲ್ಲಕ್ಕಿಯನ್ನು ಪೊಲೀಸ್ ಜೀಪಿಗೆ ಡಿಕ್ಕಿ ಹೊಡೆಸಿ, ಜಖಂ ಮಾಡಿದ್ದಾರೆ. ಪೊಲೀಸರು ಲಾಠಿಚಾರ್ಜ್ ಆರಂಭಿಸುತ್ತಿದ್ದಂತೆ ಪಲ್ಲಕ್ಕಿ ಬಿಟ್ಟು ಪರಾರಿಯಾದರೆಂದು ವರದಿಯೊಂದು ತಿಳಿಸಿದೆ.

ಕರ್ತವ್ಯಕ್ಕೆ ಅಡ್ಡಿ, ಅವಾಚ್ಯ ಪದಗಳಿಂದ ನಿಂದನೆ, ಜೀವಬೆದರಿಕೆ ಪ್ರಕರಣ ದಾಖಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Join Whatsapp
Exit mobile version