ಆಭರಣ ಖರೀದಿಸುವ ಗ್ರಾಹಕರ ಜಾಡು ಪತ್ತೆ ಮಾಡುವ ಎಚ್.ಯು.ಐ.ಡಿ ನಿಯಮಾವಳಿ ಕೈಬಿಡುವಂತೆ ಒತ್ತಾಯಿಸಿ ಪ್ರತಿಭಟನೆ

Prasthutha|

ಬೆಂಗಳೂರು; ಆಭರಣ ಖರೀದಿಸುವ ಗ್ರಾಹಕರನ್ನು ಟ್ರ್ಯಾಕ್ ಮಾಡಿ ವ್ಯಾಪಾರ ವಹಿವಾಟಿಗೆ ಧಕ್ಕೆ ತರುವ, ಖಾಸಗಿ ತನಕ್ಕೆ ಅಡ್ಡಿಯುಂಟು ಮಾಡುವ ಎಚ್.ಯು.ಐ.ಡಿ [ಹಾಲ್ ಮಾರ್ಕ್ ಯುನಿಕ್ ಐಡಿ] ವ್ಯವಸ್ಥೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಜುವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷ ಡಾ. ಟಿ.ಎ. ಸರವಣ ನೇತೃತ್ವದಲ್ಲಿಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು. ಆಭರಣ ಮಾರಾಟಗಾರರು ಸಾಂಕೇತಿಕವಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

- Advertisement -


ಬೆಂಗಳೂರು ಪ್ರೆಸ್ ಕ್ಲಬ್ ಬಳಿ ಪ್ರತಿಭಟನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಟಿ.ಎ. ಸರವಣ, ಆಭರಣ ಖರೀದಿದಾರರ ಜಾಡು ಪತ್ತೆ ಮಾಡುವ ತಂತ್ರಜ್ಞಾನದಿಂದ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಗ್ರಾಹಕರು ಮತ್ತು ಆಭರಣ ಖರೀದಿದಾರರ ನಡುವಣ ಬಾಂಧವ್ಯಕ್ಕೆ ಇದರಿಂದ ಧಕ್ಕೆಯಾಗುತ್ತಿದೆ. ನಮಗೆ ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜತೆಗೆ ಎಚ್.ಯು.ಐ.ಡಿ ಜಾರಿ ಮಾಡಿ ಪರೋಕ್ಷವಾಗಿ ಮಾನಸಿಕ ಒತ್ತಡ ಹೇರುವ ಜತೆಗೆ ಅಧಿಕಾರಿಗಳು ದುಡ್ಡು ಮಾಡಲು ಸರ್ಕಾರವೇ ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಆಭರಣಗಳಿಗೆ ಹಾಲ್ ಮಾರ್ಕ್ ಅಳವಡಿಸುವ ಸರ್ಕಾರದ ತೀರ್ಮಾನಕ್ಕೆ ನಮ್ಮ ತಕರಾರಿಲ್ಲ. ಈಗಾಗಲೇ ಇದನ್ನು ಸ್ವಾಗತಿಸಿ ಅನುಷ್ಠಾನಕ್ಕೆ ತಂದಿದ್ದೇವೆ. ಆದರೆ ಕೆಲವೊಂದು ತುರ್ತು ಸಂದರ್ಭಗಳಲ್ಲಿ ಮದುವೆ ಮತ್ತಿತರ ಸಮಾರಂಭಗಳಿಗೆ ಮಾಂಗಲ್ಯ, ಬಳೆ, ಉಂಗುರ ಮತ್ತಿತರ ಆಭರಣಗಳನ್ನು ಖರೀದಿಸಲು ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಚಿನ್ನ ತಯಾರಿಸಿದ ನಂತರ ಹಾಲ್ ಮಾರ್ಕ್ ಹಾಕಲು ವಿಳಂಬವಾಗುತ್ತಿದೆ. ಇದರಿಂದ ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಡಾ. ಟಿ.ಎ. ಸರವಣ ಹೇಳಿದರು.

- Advertisement -


ದೇಶಾದ್ಯಂತ ಎಚ್.ಯು.ಐ.ಡಿ ಜಾರಿಮಾಡಿರುವ ಕೇಂದ್ರದ ತೀರ್ಮಾನದ ವಿರುದ್ಧ ಕಾನೂನು ಹೋರಾಟಕ್ಕೆ ಅಣಿಯಾಗಿದ್ದೇವೆ. ದೇಶದ ಎಲ್ಲಾ ಕಡೆಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ. ಆಭರಣ ಕೈಗಾರಿಕೆಯಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಆದಾಯ ದೊರೆಯುತ್ತಿದೆ. ಗ್ರಾಹಕರು ಮತ್ತು ಆಭರಣ ಮಾರಾಟಗಾರರ ವಿರುದ್ಧವಾಗಿರುವ ಈ ನಿಯಮವನ್ನು ಕೈಬಿಡದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.


ಆರಂಭಿಕ ಹಂತದಲ್ಲಿ ಇಂದು ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ. ಎರಡು ಲಕ್ಷ ರೂಪಾಯಿಗಿಂತ ಹೆಚ್ಚು ಮೊತ್ತದ ಖರೀದಿ ಮಾಡುವವರಿಂದ ಸೂಕ್ತ ದಾಖಲೆ ಪಡೆದು ಆಭರಣ ಮಾರಾಟ ಮಾಡುತ್ತಿದ್ದೇವೆ. ಚಿನ್ನದ ಚೈನ್ ಗೆ ಬೇರೆ, ಡಾಲರ್ ಗೆ ಬೇರೆ ಹಾಲ್ ಮಾರ್ಕ್ ಹಾಕಿಸುವಂತೆ ಒತ್ತಡ ಹೇರಲಾಗುತ್ತಿದೆ. ದುರಂತವೆಂದರೆ ಹಾಲ್ ಮಾರ್ಕ್ ಕೇಂದ್ರಗಳಲ್ಲಿ ಸೂಕ್ತ ಮೂಲ ಸೌಕರ್ಯ ಇಲ್ಲ. ಸಿಬ್ಬಂದಿ ಸಂಖ್ಯೆ ಹೆಚ್ಚಿಲ್ಲ. ಇದರಿಂದ ಹಬ್ಬದ ಸಂದರ್ಭಗಳಲ್ಲಿ ಗ್ರಾಹಕರು ಹಾಗೂ ಮಾಲಿಕರಿಗೆ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ನಮ್ಮ ಸಂಘಟನೆಯಿಂದ ದೆಹಲಿಗೆ ತೆರಳಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಕೇಂದ್ರ ಸರ್ಕಾರಕ್ಕೆ ನಮ್ಮ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.


ದೇಶದಲ್ಲಿ ಇನ್ನೂ 6 ರಿಂದ 7 ಕೋಟಿ ಆಭರಣಗಳಿಗೆ ಹಾಲ್ ಮಾರ್ಕ್ ಹಾಕುವುದು ಬಾಕಿ ಉಳಿದಿದೆ. ದಿನಕ್ಕೆ ಕೇವಲ 2 ಲಕ್ಷ ಆಭರಣಗಳಿಗೆ ಮಾತ್ರ ಹಾಲ್ ಮಾರ್ಕ್ ಹಾಕುವ ಸಾಮರ್ಥ್ಯವನ್ನು ಈ ಸಂಸ್ಥೆ ಹೊಂದಿದೆ. ಇದರಿಂದ ವ್ಯಾಪಾರ ವಹಿವಾಟಿನಲ್ಲಿ ಭಾರೀ ನಷ್ಟ ಉಂಟಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದು ಆಪಾದಿಸಿದರು.
ಸುದ್ದಿಗೋ಼ಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ರವಿ ಕುಮಾರ್, ಪ್ರಕಾಶ್, ನೇಮಿಚಂದ್, ಚೇತನ್ ಉಪಸ್ಥಿತರಿದ್ದರು.

Join Whatsapp