ಹಿಂದಿ ಬಾರದವರು ಹೊರನಡೆಯಿರಿ | ತರಬೇತಿಯಲ್ಲಿ ಆಯುಷ್ ಸಚಿವಾಲಯದ ಕಾರ್ಯದರ್ಶಿಯ ವಿವಾದಾತ್ಮಕ ಹೇಳಿಕೆ | ಎಲ್ಲೆಡೆ ಆಕ್ರೋಶ

Prasthutha|

ನವದೆಹಲಿ : “ನಾನು ಹಿಂದಿಯಲ್ಲಿ ಮಾತನಾಡುತ್ತಿದ್ದೇನೆ, ಹಿಂದಿ ಅರ್ಥ ಆಗದವರು ಹೊರ ನಡೆಯಿರಿ’’ ಎಂದು ವರ್ಚುವಲ್ ತರಬೇತಿಯೊಂದರಲ್ಲಿ ಹೇಳಿರುವ ಕೇಂದ್ರ ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚ ಅವರು ಈಗ ವಿವಾದಕ್ಕೆ ಸಿಲುಕಿದ್ದಾರೆ. ಆಯುಷ್ ಸಚಿವಾಲಯದ ತರಬೇತಿಯೊಂದರ ವೇಳೆ ರಾಜೇಶ್ ಈ ಮಾತುಗಳನ್ನಾಡಿದ್ದಾರೆ. ಇದು ಈಗ ದೇಶಾದ್ಯಂತ ಭಾಷಾ ಕುರಿತ ವಾದ-ವಿವಾದವನ್ನು ಮತ್ತೊಮ್ಮೆ ಹುಟ್ಟುಹಾಕಿದೆ. ರಾಜೇಶ್ ಅವರು ಮಾತನಾಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

“ಕಳೆದ ಎರಡು ದಿನಗಳಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವವರನ್ನು ನಾನು ಅಭಿನಂದಿಸುತ್ತಿದ್ದೇನೆ. ಕಳೆದ ಎರಡು ದಿನಗಳಿಂದ ನನಗೊಂದು ಮಾಹಿತಿ ಸಿಕ್ಕಿದೆ, ಆ ವಿಷಯಕ್ಕೆ ಸಂಬಂಧಿಸಿದ ಜನರಿದ್ದರೆ ಹೊರ ನಡೆಯಬಹುದು. ನಾನು ಚೆನ್ನಾಗಿ ಇಂಗ್ಲಿಷ್ ಮಾತನಾಡಲಾರೆ, ಹೀಗಾಗಿ ನಾನು ಹಿಂದಿ ಮಾತನಾಡುತ್ತಿದ್ದೇನೆ’’ ಎಂದು ರಾಜೇಶ್ ಹೇಳಿರುವ ವೀಡಿಯೊ ವೈರಲ್ ಆಗುತ್ತಿದೆ. ಆದರೆ, ತಾನು ಮಾತನಾಡಿರುವ ಅಂಶಗಳನ್ನು ತಿರುಚಲಾಗಿದೆ ಎಂದು ರಾಜೇಶ್ ಸ್ಪಷ್ಟಪಡಿಸಿದ್ದಾರೆ.

- Advertisement -

ಆದರೆ, ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ತಮಿಳುನಾಡಿನಲ್ಲಿ ಮತ್ತೊಮ್ಮೆ ಭಾಷಾ ಜಾಗೃತಿಯ ಅಭಿಯಾನ ಆರಂಭವಾಗಿದೆ. ತನ್ನ ಹೇಳಿಕೆಗಾಗಿ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಅವರನ್ನು ಅಮಾನತು ಮಾಡಬೇಕು ಎಂದು ಡಿಎಂಕೆ ಸಂಸದೆ ಕನಿಮೋಳಿ ಒತ್ತಾಯಿಸಿದ್ದಾರೆ. ರಾಜೇಶ್ ಅವರ ವರ್ತನೆಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.

- Advertisement -