ಧರ್ಮ ನಿಂದನೆ, ಪೊಲೀಸರ ನಿರ್ಲಕ್ಷ್ಯವೇ ಅಶಾಂತಿಯ ವಾತಾವರಣಕ್ಕೆ ಕಾರಣ: ಅಬ್ದುಲ್ ಹನ್ನಾನ್

Prasthutha|

ಇಸ್ಲಾಮ್ ಧರ್ಮದ ವಿರುದ್ಧ ಪ್ರಚೋದನಕಾರಿ ಪೋಸ್ಟ್ ಹಾಕಿದ ಆರೋಪಿಯ ಬಂಧನಕ್ಕೆ ತೋರಿದ ಪೊಲೀಸರ ವಿಳಂಬ ನೀತಿಯೇ ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದ ಪೊಲೀಸ್ ಗೋಲಿಬಾರ್, ಸಂಘರ್ಷಮಯ ವಾತಾವರಣಕ್ಕೆ ಪ್ರಮುಖ ಕಾರಣ ಎಂದು ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹನ್ನಾನ್ ಆರೋಪಿಸಿದ್ದಾರೆ.

- Advertisement -

ಬೆಂಗಳೂರಿನಲ್ಲಿರುವ ಪಕ್ಷದ ರಾಜ್ಯ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜನಾಕ್ರೋಶವು ಅಶಾಂತಿಗೆ ತಿರುಗಿದ್ದು ಖೇದಕರ ಎಂದು ಹೇಳಿದರು.

ಸ್ಥಳೀಯ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಸೋದರಳಿಯ ನವೀನ ಎಂಬಾತನು ಕೆಲ ಸಮಯಗಳಿಂದ ಮುಸ್ಲಿಮರನ್ನು ಅವಮಾನಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾದಿ ನಿಂದನೆಯ ಚಿತ್ರ ಹಾಗೂ ಬರಹಗಳ ಪೋಸ್ಟ್ ಹಾಕುತ್ತಿದ್ದ. ಈ ವಿಚಾರದ ಬಗ್ಗೆ ಡಿಜೆ ಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿ ನವೀನನನ್ನು ಬಂಧಿಸಬೇಕು ಎಂದು ಒತ್ತಾಯಿಸಿದಾಗ, ಠಾಣಾಧಿಕಾರಿ ಹಾಗೂ ಎಸಿಪಿ ಯವರು 2 ಗಂಟೆಗಳ ವರೆಗೆ ಕಾಯಿರಿ ಎಂದು ಹಾರಿಕೆಯ ಉತ್ತರ ನೀಡಿದ್ದರು. ಇದರಿಂದ ಮೊದಲೇ ಆಕ್ರೋಶಗೊಂಡಿದ್ದ ಜನಸಮೂಹ ಠಾಣೆಯ ಬಳಿ ಜಮಾಯಿಸಿತ್ತು ಹಾಗೂ ಅಶಾಂತಿಯ ವಾತಾವರಣ ನಿರ್ಮಾಣಗೊಂಡಿತ್ತು. ಪೊಲೀಸ್ ಅಧಿಕಾರಿಗಳು ಜವಾಬ್ದಾರಿಯುತವಾಗಿ ವರ್ತಿಸಿದ್ದರೆ ಈ ಘಟನೆಯನ್ನು ಖಂಡಿತ ತಪ್ಪಿಸಬಹುದಾಗಿತ್ತು ಎಂದು ಅವರು ಹೇಳಿದರು.

- Advertisement -

ಈ ಹಿಂದೆ ಆಸಿಫ್ ಎಂಬವರು ಶಾಸಕ ಅಖಂಡ ಶ್ರೀನಿವಾಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಹಾಕಿದಾಗ ಪೊಲೀಸ್ ದೂರು ದಾಖಲಾಗಿತ್ತು. ಈ ಸಂದರ್ಭ ಪೊಲೀಸರು ಆಸಿಫ್ ರನ್ನು ಕೇವಲ ಹತ್ತೇ ನಿಮಿಷದಲ್ಲಿ ಬಂಧಿಸಿದ್ದರು. ಆದರೆ ಇಲ್ಲಿ ಒಂದು ಸಮುದಾಯವು ಆಕ್ರೋಶಗೊಂಡಿದ್ದರೂ ಪೊಲೀಸರು ತೋರಿದ ತಾರತಮ್ಯ ಹಾಗೂ ನಿರ್ಲಕ್ಷ್ಯ ಧೋರಣೆಯೇ ಪರಿಸ್ಥಿತಿ ಕೈಮೀರಲು ಕಾರಣವಾಗಿದೆ. ಪೊಲೀಸರು ಪ್ರತಿಭಟನಾಕಾರರ ಎದೆ ಭಾಗಕ್ಕೆ ಗುಂಡು ಹಾರಿಸಿ 3 ಅಮೂಲ್ಯ ಜೀವಗಳನ್ನು ಬಲಿ ಪಡೆದುಕೊಂಡಿರುವುದು ಅತ್ಯಂತ ಖಂಡನೀಯವಾಗಿದೆ. ಜನತೆಯ ಭಾವನೆಯ ಮೇಲೆ ಸವಾರಿ ಮಾಡುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವ ಕೆಲ‌ ಪೋಲೀಸ್ ಅಧಿಕಾರಿಗಳು, ಇಂತಹ ಅಹಿತಕರ ಸನ್ನಿವೇಶ ಸೃಷ್ಟಿಯಾಗಲು ಕಾರಣಕರ್ತರಾಗಿದ್ದಾರೆ ಎಂದು ಅಬ್ದುಲ್ ಹನ್ನಾನ್ ಹೇಳಿದರು.

ಸ್ಥಳೀಯ ಪೊಲೀಸರು ಮತ್ತು ಸ್ಥಳೀಯ ಉಲಮಾಗಳ ಜೊತೆಗೆ ಸಹಕರಿಸುತ್ತಾ ಪರಿಸ್ಥಿತಿ ನಿಯಂತ್ರಣಕ್ಕೆ ಅವಿರತವಾಗಿ ಶ್ರಮಿಸಿದ  ಸ್ಥಳೀಯ ಎಸ್.ಡಿ.ಪಿ.ಐ ನಾಯಕರನ್ನು ಬಂಧಿಸಿದ ಹಾಗೂ ಘಟನೆಯನ್ನು ಅವರ ಮೇಲೆ ಹೊರಿಸುತ್ತಿರುವ ಪೊಲೀಸರ ಕ್ರಮವೂ ಅತ್ಯಂತ ಖಂಡನೀಯ. ಇದು ಅವರ ದಕ್ಷತೆ, ಪ್ರಾಮಾಣಿಕತೆ ಹಾಗೂ ನೈತಿಕತೆಯನ್ನೇ ಪ್ರಶ್ನಿಸುತ್ತಿದೆ. ಸಮಾಜದಲ್ಲಿ ನ್ಯಾಯ, ನೀತಿ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿರುವ ಎಸ್.ಡಿ.ಪಿ.ಐ ನಾಯಕರ ಹಾಗೂ ಕಾರ್ಯಕರ್ತರ ಸ್ಥೈರ್ಯ ಹಾಗೂ ದೃಢತೆಯನ್ನು ಕುಂದಿಸಲು ಇದರಿಂದ ಸಾಧ್ಯವಾಗದು ಎಂದು ಅವರು ಹೇಳಿದರು.

ದುಷ್ಕರ್ಮಿ ನವೀನ ಹಾಗೂ ಆತನಿಗೆ ಬೆಂಬಲ ನೀಡಿದ ವ್ಯಕ್ತಿಗಳ ಮೇಲೆ ಧರ್ಮನಿಂದನೆ, ಸಮಾಜದಲ್ಲಿ ದ್ವೇಷ ಹುಟ್ಟಿಸುವ ಕೃತ್ಯ, ಗಲಭೆ ಸೃಷ್ಟಿಗೆ ಪ್ರೇರಣೆ, ಇತ್ಯಾದಿ ಸೆಕ್ಷನ್ ಗಳನ್ನು ಹಾಕಬೇಕು, ನಿರ್ಲಕ್ಷ್ಯ ವಹಿಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ತನಿಖೆಗೆ ಒಳಪಡಿಸಬೇಕು, ಬಂಧನಕ್ಕೊಳಗಾದ ಅಮಾಯಕರನ್ನು  ತಕ್ಷಣವೇ ಬಿಡುಗಡೆಗೊಳಿಸಿ  ನೈಜ  ಆರೋಪಿಗಳನ್ನು ಬಂಧಿಸಬೇಕು, ಗೋಲೀಬಾರಿನಲ್ಲಿ ಸಾವನ್ನಪ್ಪಿದ ಸಂತ್ರಸ್ತ ಕುಟುಂಬಗಳಿಗೆ ತಕ್ಷಣವೇ ಪರಿಹಾರ ಒದಗಿಸಬೇಕೆಂದು ಅಬ್ದುಲ್ ಹನ್ನಾನ್ ಆಗ್ರಹಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಎಸ್.ಡಿ.ಪಿ.ಐ ಬೆಂಗಳೂರು ಜಿಲ್ಲಾಧ್ಯಕ್ಷ ಶರೀಫ್, ಸಮಿತಿ ಸದಸ್ಯರು ಹಾಗೂ ಬಿಬಿಎಂಪಿ ಕಾರ್ಪೋರೇಟರ್ ಮುಜಾಹೀದ್ ಪಾಷ, ಜಿಲ್ಲಾ ನಾಯಕ ವಸೀಮ್ ಉಪಸ್ಥಿತರಿದ್ದರು.

Join Whatsapp