ಕೊರೊನಾದಿಂದ ಗುಣಮುಕ್ತನಾದರೂ, ಕೀಳಾಗಿ ಕಂಡರು | ಮನನೊಂದು ಆತ್ಮಹತ್ಯೆಗೈದ ಯುವಕ
Prasthutha: August 12, 2020

ಕಾರವಾರ : ಕೊರೊನಾ ಸೋಂಕಿಗೆ ತುತ್ತಾಗಿ ಗುಣಮುಖನಾಗಿದ್ದರೂ, ತಮ್ಮ ಅಕ್ಕಪಕ್ಕದವರು ತಮ್ಮನ್ನು ಕೀಳಾಗಿ ಕಾಣುತ್ತಾರೆ ಎಂದು ಭಾವಿಸಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೈದಿದ್ದಾರೆ. ಕೊರೊನಾ ಸೋಂಕಿಗೆ ಗುರಿಯಾದವರನ್ನು ಕೀಳಾಗಿ ಕಾಣುವುದು ತಪ್ಪು. ಆದರೂ, ಕೆಲವು ಜನರು ತಮ್ಮ ಅಲ್ಪಜ್ಞಾನದಿಂದ ಕೋವಿಡ್ 19ನಿಂದ ಗುಣಮುಖಿತರಾದವರನ್ನು ಕೀಳಾಗಿ ಕಾಣುತ್ತಿದ್ದಾರೆ.
ಕಾರವಾರದ ಶಿರವಾಡ ನಿವಾಸಿ ರತ್ನಾಕರ ನಾಯ್ಕ (42) ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ತಿಂಗಳ ಹಿಂದೆ ರತ್ನಾಕರ ನಾಯ್ಕ ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಸೂಕ್ತ ಚಿಕಿತ್ಸೆ ಪಡೆದು ಅವರು ಗುಣಮುಖರಾಗಿ ಮನೆಗೆ ಹಿಂದಿರುಗಿದ್ದರು. ಆದರೆ, ಮನೆಯವರೂ ಸೇರಿ, ಅಕ್ಕಪಕ್ಕದವರು ಇವರೊಂದಿಗೆ ಸರಿಯಾಗಿ ಮಾತನಾಡಿಸುತ್ತಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಮನನೊಂದ ಅವರು ಸೋಮವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರವಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
