ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಏಳು ಮಂದಿಯನ್ನು ಬಂಧಿಸಿದ ಮಂಗಳೂರು ಪೊಲೀಸರು
Prasthutha: April 27, 2021

ಮಂಗಳೂರು : ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಅಹಮ್ಮದ್ ಇಕ್ಬಾಲ್, ಯಾಕೂಬ್ ಎಂ, ಉಮರ್ ನವಾಫ್, ಶಂಶೀರ್, ಸೈಯ್ಯದ್ ಮಹಮ್ಮದ್ ಕೌಸಾರ್, ನೌಶಾದ್, ಶೈಖ್ ಮಹಮ್ಮದ್ ರಿಯಾಝ್ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಮೂರು ಕಾರು, ಹತ್ತು ಮೊಬೈಲ್ ಫೋನ್, ಎರಡು ತಲಾವಾರು, ಒಂದು ಬೈಕ್, ಒಂದು ಡ್ಯಾಗರ್, 120 ಗ್ರಾಂ ತೂಕದ ನೆಕ್ಲೇಸ್ ವಶಪಡಿಸಲಾಗಿದೆ.
23ರಂದು ಉಳ್ಳಾಲ ನಿವಾಸಿ ಅಶ್ರಫ್ ಎಂಬಾತ ಕೆ.ಸಿ.ರೋಡಿನಿಂದ ಮತ್ತು ಅಶ್ರಫ್ ಸ್ನೇಹಿತ ಜವೀದ್ ಹೊಸಂಗಡಿಯಿಂದ ಅಪಹರಣಕ್ಕೊಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಮಂಗಳೂರು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಪ್ರಕರಣದ ಏಳು ಆರೋಪಿಗಳನ್ನು ಉಳ್ಳಾಲ ಪೊಲೀಸರ ವಶಕ್ಕೆ ನೀಡಲಾಗಿದೆ.
ಬಂಧಿತ ಆರೋಪಿ ಇಕ್ಬಾಲ್ ನಿಂದ ಅಪಹರಣಕ್ಕೊಳಗಾದ ಅಶ್ರಫ್ ಮತ್ತು ಜಾವೀದ್ 27 ಲಕ್ಷ ನಗದು ಪಡೆದು ಹೂಡಿಕೆ ಮಾಡುವಂತೆ ಸೂಚಿಸಿದ್ದು, ಆರೋಪಿ ಇಕ್ಬಾಲ್ ಮತ್ತೋರ್ವ ಆರೋಪಿ ಯಾಕೂಬ್ ನಿಂದ ಐದು ಲಕ್ಷ ಪಡೆದಿದ್ದ. ಆರೋಪಿಗಳಿಗೆ ಅಶ್ರಫ್ ಮತ್ತು ಜಾವೀದ್ ಒಂದುವರೆ ವರ್ಷದಲ್ಲಿ ಲಾಭಾಂಶ ಸೇರಿ 99 ಲಕ್ಷ ನೀಡಬೇಕಿತ್ತು. ಈ ಪೈಕಿ ಹತ್ತು ಲಕ್ಷ ರೂಪಾಯಿ ಆರೋಪಿ ಇಕ್ಬಾಲ್ ಗೆ ಅಶ್ರಫ್ ನೀಡಿದ್ದ. ಅಶ್ರಫ್ ಮತ್ತು ಜಾವಿದ್ ಉಳಿದ ಹಣ ನೀಡದ ಹಿನ್ನೆಲೆಯಲ್ಲಿ ಆರೋಪಿಗಳು ಇಬ್ಬರನ್ನೂ ಅಪಹರಿಸಿ ಬಳಿಕ ಇಬ್ಬರ ಕುಟುಂಬಸ್ಥರಿಂದ ನಗದು, ಆಸ್ತಿ ಪತ್ರ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್ ತಿಳಿಸಿದ್ದಾರೆ.
