October 17, 2020
ಅಧಿಕಾರಕ್ಕೆ ಬಂದರೆ ಮೂರು ರೈತ ವಿರೋಧಿ ಕಾನೂನುಗಳು ರದ್ದು : ಸುರ್ಜೇವಾಲ

ಪಟನಾ : ಬಿಹಾರದಲ್ಲಿ ತೇಜಸ್ವಿ ಯಾದವ್ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದರೆ, ತಮ್ಮ ಸರಕಾರವು ಮೂರು ರೈತ ವಿರೋಧಿ ಕಾನೂನುಗಳನ್ನು ರದ್ದು ಪಡಿಸುವುದಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ.
“ತೇಜಸ್ವಿಯಾದವ್ ನೇತೃತ್ವದಲ್ಲಿ ನಾವು ಸರಕಾರ ರಚಿಸಿದರೆ, ಮೊದಲ ವಿಧಾನಸಭಾ ಅಧಿವೇಶನದಲ್ಲೇ ಮೂರು ರೈತ ವಿರೋಧಿ ಕಾನೂನುಗಳನ್ನು ರದ್ದುಪಡಿಸುತ್ತೇವೆ. ಎಲ್ಲ ಮಂಡಿಗಳನ್ನು ನಾಶಪಡಿಸಿದ ಮೇಲೆ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಹೇಗೆ ಸಿಗುತ್ತದೆ ಎಂಬುದನ್ನು ಪ್ರಧಾನಿ ಮೋದಿ ಮತ್ತು ನಿತೀಶ್ ತಿಳಿಸಬೇಕು’’ ಎಂದು ಸುರ್ಜೇವಾಲ ಹೇಳಿದರು. ಬಿಹಾರ ವಿಧಾನಸಭಾ ಚುನಾವಣೆಗೆ ಮಹಾಮೈತ್ರಿಯ ಪ್ರಣಾಳಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ 2020, ರೈತರ ಬೆಲೆ ಭರವಸೆ ಮತ್ತು ಕೃಷಿ ಸೇವಾ ಒಪ್ಪಂದ (ಸಬಲೀಕರಣ ಮತ್ತು ರಕ್ಷಣಾ) ಕಾಯ್ದೆ 2020, ಅಗತ್ಯ ಸಾಮಗ್ರಿಗಳ (ತಿದ್ದುಪಡಿ) ಕಾಯ್ದೆ 2020 ಅನ್ನು ಇತ್ತಿಚೆಗೆ ಕೇಂದ್ರ ಸರಕಾರ ಮಂಜೂರು ಮಾಡಿದೆ.