ಆರೆಸ್ಸೆಸ್ ಮುಂದಿನ ಗುರಿ ಮಥುರಾ

Prasthutha|

ಎ.ಜಿ.ನೂರಾನಿ

- Advertisement -

ಕುಟುಂಬ ಯೋಜನೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನಂಬಿಕೆಯಿಲ್ಲ. ಅದು ಹಲವು ಸಂಘಟನೆಗಳನ್ನು ಹುಟ್ಟುಹಾಕಿದೆ. ಆರೆಸ್ಸೆಸ್ ಮೇಲಿನ ನಿಷೇಧವನ್ನು ತಪ್ಪಿಸುವುದಕ್ಕಾಗಿ ಅದು 1949ರ ಜುಲೈ 9 ರಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎ.ಬಿ.ವಿ.ಪಿ) ಸ್ಥಾಪನೆ ಮಾಡಿತು. ತಾನೊಂದು ವಿದ್ಯಾರ್ಥಿ ಪರಿಷತ್ ಎಂದು ಪ್ರತಿಪಾದಿಸಲಾದರೂ ವಾಸ್ತವದಲ್ಲಿ ಅದು ಆಕ್ರಮಣಕಾರಿ ಪಡೆಯಾಗಿದೆ. ನರೇಂದ್ರ ಮೋದಿ ಅದರ ಪ್ರಮುಖ ನಾಯಕರಲ್ಲೊಬ್ಬರಾಗಿದ್ದರು. ಜಗತ್ಗುರುವಿನ (ವಿಶ್ವಗುರು) ಪ್ರತಿಪಾದನೆಯೊಂದಿಗೆ ಆರೆಸ್ಸೆಸ್ ವಿಶ್ವ ಹಿಂದೂ ಪರಿಷತ್ ಅನ್ನು ಸ್ಥಾಪಿಸಿದೆ. 1964ರ ಆಗಸ್ಟ್ 29-30ರಂದು ಆರೆಸ್ಸೆಸ್ ನಾಯಕ ಎಸ್.ಗೋಳ್ವಾಲ್ಕರ್ ಅದನ್ನು ಸ್ಥಾಪಿಸಿದ್ದರು. ಕೆ.ಎಂ.ಮುನ್ಶಿ ಕೂಡ ಅದರ ಸ್ಥಾಪಕರಲ್ಲೊಬ್ಬರಾಗಿದ್ದರು. ಅಯೋಧ್ಯೆಯಲ್ಲಿ ತನ್ನ ಅಭಿಯಾನವು ವೇಗ ಪಡೆದಂತೆ ವಿ.ಎಚ್.ಪಿ 1984ರಲ್ಲಿ ಬಜರಂಗ ದಳವನ್ನು ಸ್ಥಾಪಿಸಿತು. ಆರೆಸ್ಸೆಸ್ ಒಂದು ಅಜ್ಜನಂತಾಯಿತು ಮತ್ತು ತನ್ನೆಲ್ಲ ಸಂತತಿಗಳನ್ನು ಬಿಗಿಯಾದ ಬಾರುಗಳೊಂದಿಗೆ ಕಟ್ಟಿಹಾಕಿತು.  ಇವುಗಳಲ್ಲಿ ಜನಸಂಘ (1951) ಮತ್ತು ಭಾರತೀಯ ಜನತಾ ಪಾರ್ಟಿ (1980) ಅದರ ರಾಜಕೀಯ ಸೃಷ್ಟಿಯಾಗಿದೆ.

1984ರ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಾಣುವುದರೊಂದಿಗೆ ಪಕ್ಷ ಸಂಘಟನೆಗಾಗಿ ಉತ್ತಮ ಸಾಧನವಾಗಿ ಆರೆಸ್ಸೆಸ್ ಕಂಡುಕೊಂಡಿರುವುದು– ಧರ್ಮವನ್ನು. ಭಾರತದಲ್ಲಿರುವ ಸದಸ್ಯರು ವಿಶೇಷವಾಗಿ ಸಾಧುಗಳನ್ನು ಸೇವೆಯಲ್ಲಿ ತೊಡಗಿಸಿಕೊಳ್ಳಲಾಯಿತು ಮತ್ತು ಅವರು ಲೌಕಿಕ ಜೀವನದ ರುಚಿಯನ್ನು ಆಸ್ವಾದಿಸಿದರು. ಎಲ್ಲಾ ಸಂಘಟನೆಗಳು ಬಿಜೆಪಿಯನ್ನು ಬೆಂಬಲಿಸುವುದಕ್ಕಾಗಿ ಉತ್ಸಾಹದೊಂದಿಗೆ ಚುನಾವಣಾ ಅಖಾಡಕ್ಕೆ ಇಳಿದವು.

- Advertisement -

ಬಿಜೆಪಿಯ ಖಿನ್ನತೆಯನ್ನು ಹೋಗಲಾಡಿಸಿ ಭರವಸೆಯ ದಾರಿಯನ್ನು ತೋರಿಸುವುದಕ್ಕಾಗಿ ವಿ.ಎಚ್.ಪಿ (ದಿ ಆರೆಸ್ಸೆಸ್ ಅನ್ನು ಓದಿರಿ) 1984ರ ಮೊದಲ ಧರ್ಮ ಸಂಸದ್ ನಲ್ಲಿ ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ವಿಮೋಚನೆಯ ವಿಷಯವನ್ನು ನಿರ್ಣಯವಾಗಿ ತೆಗೆದುಕೊಂಡಿತು. ಅದು 18 ಅಂಶಗಳನ್ನೊಳಗೊಂಡ ಉದ್ದೇಶಗಳ ನೀತಿ ಸಂಹಿತೆ ಮತ್ತು ನೀತಿ ನಿಯಮಗಳನ್ನು ರಚಿಸಿಕೊಂಡಿತು. “ವ್ಯಕ್ತಿಗಳು, ಕುಟುಂಬಗಳು ಮತ್ತು ರಾಜಕೀಯ ನಾಯಕರುಗಳಿಗಾಗಿ ಆಚಾರ ಸಂಹಿತೆಯನ್ನು ಅದು ಒಳಗೊಂಡಿತ್ತು. “ಅಭಿವೃದ್ಧಿ ಹೊಂದುತ್ತಿರುವ ಹಿಂದೂ ಸಮಾಜ”ದ ಆಧುನಿಕ ಯುಗಕ್ಕೆ ಸೂಕ್ತವಾಗುವ ‘ಧರ್ಮ’ದ ರೂಪವನ್ನು ಅದು ಉಲ್ಲೇಖಿಸಿತ್ತು.

ಆರೆಸ್ಸೆಸ್ ಕಲ್ಪನೆಯ ಆಧುನೀಕರಣ ‘ಧರ್ಮದ ಆಚರಣೆ ಮತ್ತು ಸಮುದಾಯದ ಏಕೀಕರಣ’ವೆಂದು ಪ್ರಕಟಿಸಲಾಯಿತು. ಸರಳಾರ್ಥದಲ್ಲಿ ಹೇಳುವುದಾದರೆ ಧರ್ಮದ ಮೂಲಕ ರಾಜಕೀಯ ಸಂಘಟನೆಯನ್ನು ಕೈಗೊಳ್ಳುವುದು.

ನಿರ್ಣಯದ “ಉದ್ದೇಶ ಸಂಖ್ಯೆ 7” “ಮಠ ಮತ್ತು ಮಂದಿರಗಳನ್ನು ಅಭಿವೃದ್ಧಿಪಡಿಸಬೇಕೆಂದು” ಹೇಳುತ್ತದೆ. ಉದ್ದೇಶ 12 “ಹಿಂದೂ ಹಿತಾಸಕ್ತಿಯನ್ನು ರಕ್ಷಿಸಲು ರಾಜ್ಯವನ್ನು ಬಲವಂತಪಡಿಸುವುದು”, ಉದ್ದೇಶ ಸಂಖ್ಯೆ 18 “ ಸಿನೆಮಾ ಗಳು ಹಿಂದೂ ಧರ್ಮ, ಹಿಂದೂ ಸಂಸ್ಕೃತಿ, ಹಿಂದೂ ದೇವರು-ದೇವತೆಗಳನ್ನು ಅಪಹಾಸ್ಯಮಾಡಲು ಅವಕಾಶ ಕೊಡಬಾರದು” ಎನ್ನುತ್ತದೆ. ಮುಂದುವರಿದು ಉದ್ದೇಶ 11ರಲ್ಲಿ “ ಶ್ರೀರಾಮ ಮತ್ತು ಶ್ರೀಕೃಷ್ಣ ಜನ್ಮಸ್ಥಾನ, ಕಾಶಿ ವಿಶ್ವನಾಥ ಮಂದಿರ ಮತ್ತು ಇತರ ಎಲ್ಲಾ ಐತಿಹಾಸಿಕ ಮಂದಿರಗಳು ಹಿಂದೂಗಳಿಗೆ ಮರಳಿ ದೊರಕಬೇಕು” ಎಂದು ವಿವರಿಸುತ್ತದೆ.  

ಇಡೀ ದಾಖಲೆಯ ಸಮಯ, ಸಂದರ್ಭ ಮತ್ತು ಧ್ವನಿಯು ತಾನು ರಾಜಕೀಯ ಸಜ್ಜುಗೊಳಿಸುವಿಕೆಯ ಗುರಿಯನ್ನು ಹೊಂದಿರುವುದನ್ನು ಬಹಿರಂಗಪಡಿಸುತ್ತದೆ. ವಿ.ಎಚ್.ಪಿ ಯ ಪಾಕ್ಷಿಕ ಹಿಂದೂ ಚೇತನ ಅದನ್ನು ಸಾಬೀತುಪಡಿಸುತ್ತದೆ. ತನ್ನ ಪುಸ್ತಕ “ವಿಶ್ವ ಹಿಂದೂ ಪರಿಷತ್ ಮತ್ತು ಭಾರತೀಯ ರಾಜಕೀಯ” ದಲ್ಲಿ ಮಂಜು ಕಟ್ಜು ಹೀಗೆ ಬರೆಯುತ್ತಾರೆ: “ತನ್ನ ಸ್ಥಾಪನೆಯ 2 ದಶಕಗಳ ಬಳಿಕ ವಿಶ್ವ ಹಿಂದೂ ಪರಿಷತ್ ತನ್ನ ನಿಜವಾದ ಸನದನ್ನು ಅನುಸರಿಸಿತು. ಅದು ದೇಶ ಮತ್ತು ವಿದೇಶಗಳಲ್ಲಿ ಹಿಂದೂ ಏಕೀಕರಣದಲ್ಲಿ ತೊಡಗಿಕೊಂಡಿತು ಮತ್ತು ಭಾರತದಲ್ಲಿ ಕ್ರಿಶ್ಚಿಯನ್ ಮಿಶನರಿಗಳ ಕೆಲಸವನ್ನು ವಿರೋಧಿಸಿತು. ನಂತರ ಅದು ರಾಜಕೀಯ ಸಂಘಟನೆಯ ಮೂಲಕ ರಾಜ್ಯ ನೀತಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಾ ನೇರವಾಗಿ ರಾಜಕೀಯ ವಿಷಯಗಳಿಗೆ ಪ್ರವೇಶಿಸಿತು. ಅಯೋಧ್ಯೆಯಲ್ಲಿ ರಾಮಜನ್ಮಭೂಮಿ, ಮಥುರಾದಲ್ಲಿ ಕೃಷ್ಣ ಜನ್ಮಭೂಮಿ, ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ದೇವಸ್ಥಾನ ಸ್ಥಾಪನೆಗಾಗಿ ಅದರ ಕರೆಗಳು ಹಾಗೂ ಧರ್ಮ ಸಂಸದದ ಮೂಲಕ ‘ಹಿಂದೂ ಪಕ್ಕ್ಷಕ್ಕೆ ಮತ ನೀಡಬೇಕೆಂಬ ಅದು ನೀಡಿದ ಕರೆಗಳು ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಬಿಜೆಪಿಗೆ ಬೆಂಬಲವನ್ನು ಹೆಚ್ಚಿಸಿತು. ಅಲ್ಲದೆ ಗೋಹತ್ಯೆ ಮತ್ತು ಮತಾಂತರದಂತಹ ವಿಷಯಗಳು ಚುನಾವಣೆಗಳ ವೇಳೆ ಮತಗಳನ್ನು ಪಡೆಯಲು ಬಿಜೆಪಿಗೆ ಸುಲಭಗೊಳಿಸಿತು (Orient Longman, 2003; ಅವರ ಪುಸ್ತಕ Hinduising Democracy; New Text, New Delhi, 2017ಯನ್ನೂ ಓದಿರಿ).

2010ರ ಎಪ್ರಿಲ್ 14ರಂದು ಭೋಪಾಲ್ ನಲ್ಲಿ ಸುಶ್ಮಾ ಸ್ವರಾಜ್, “ಮಂದಿರ ಚಳುವಳಿಯು ಸ್ಪಷ್ಟವಾಗಿ ರಾಜಕೀಯ ಪ್ರಕೃತಿಯದ್ದಾಗಿತ್ತು ಮತ್ತು ಧರ್ಮದೊಂದಿಗೆ ಯಾವುದೇ ನಂಟನ್ನು ಹೊಂದಿರಲಿಲ್ಲ” ಎಂದಿದ್ದರು. ಅಮೆರಿಕಾದ ರಾಯಭಾರಿ ಜೊತೆ ಅರುಣ್ ಜೇಟ್ಲಿ ತಪ್ಪೊಪ್ಪಿಗೆ ಅತ್ಯಂತ ಬಿಚ್ಚುಮನಸ್ಸಿನ ಮತ್ತು ವಿಶಾಲವಾದುದಾಗಿತ್ತು. ಮಂಜಾರಿ ಕಟ್ಜು ಹೀಗೆ ಬರೆಯುತ್ತಾರೆ: “ರಾಮಜನ್ಮಭೂಮಿ ಅಥವಾ ಅಯೋಧ್ಯೆ ವಿಷಯವು ಹಲವು ಸಾಧು ಗಳನ್ನು ವಿ.ಎಚ್.ಪಿಯ ಹಿಂದೆ ಒಟ್ಟಾಗಿ ನಿಲ್ಲಿಸಿತು. ಇದರಿಂದಾಗಿ ಬಿಜೆಪಿಯ ಸಾಮಾಜಿಕ ನೆಲೆಯು ವಿಸ್ತಾರಗೊಂಡಿತು.  ಹಿಂದುತ್ವ (ರಾಮ ಮಂದಿರ ಅಭಿಯಾನಗಳ ಪ್ರಣಾಳಿಕೆಯಾಗಿ) ಮತ್ತು ಅಯೋಧ್ಯೆ ಅಸೆಂಬ್ಲಿ, ಫೈಝಾಬಾದ್ ಸಂಸದೀಯ (ಅಯೋಧ್ಯೆ ಒಳಗೊಂಡಿರುವ) ಕ್ಷೇತ್ರ, ಒಟ್ಟು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿಯ ಚುನಾವಣಾ ಅಭಿವೃದ್ಧಿಯಾಗಿರುವುದರ ಮಧ್ಯೆ ಪರಸ್ಪರ ಸಂಬಂಧವನ್ನು ಕಾಣಬಹುದಾಗಿದೆ.” ಹಿಂದುತ್ವ ಪ್ರವಾಹದ ಮೂಲಕ ಅಡ್ವಾಣಿ ಬಿಜೆಪಿಯನ್ನು ಬೆಳೆಸಿದರು.

1992ರ ಡಿಸೆಂಬರ್ 6ರಂದು ಬಾಬ್ರಿ ಮಸ್ಜಿದ್ ಧ್ವಂಸಗೊಳಿಸುವುದಕ್ಕೆ ಮುಂಚಿತವಾಗಿ 1990ರ ಆರಂಭದಲ್ಲಿ ಈ ಮೂರು ಮಂದಿರಗಳ ವಿಷಯದಲ್ಲಿ ಬಿಜೆಪಿ ಮತ್ತು ವಿ.ಎಚ್.ಪಿಯ ನಿಲುವು ಏನಾಗಿತ್ತು ಎಂಬುದನ್ನು ಅಧ್ಯಯನ ಮಾಡುವುದು ಅಗತ್ಯವಾಗಿದೆ. ಮುಸ್ಲಿಮರು ಬಾಬ್ರಿ ಮಸ್ಜಿದನ್ನು ಬಿಟ್ಟುಕೊಟ್ಟರೆ ಮಥುರಾ ಮತ್ತು ಕಾಶಿ ಮಂದಿರಗಳನ್ನು  ಕೈಬಿಡುತ್ತೇವೆಂದು ಅಡ್ವಾಣಿ ಭರವಸೆ ನೀಡಿದ್ದರು. ಇತರ ಸಂದರ್ಭಗಳಲ್ಲಿ ಅಡ್ವಾಣಿ ಮತ್ತು ಬಿಜೆಪಿ ನಾಯಕರು ಕಾಶಿ ಮತ್ತು ಮಥುರಾಗಳ ಮಂದಿರಗಳು ‘ಪ್ರಸ್ತುತ’ ತಮ್ಮ ಅಜೆಂಡಾದಲ್ಲಿಲ್ಲ ಎನ್ನುತ್ತಿದ್ದರು. ಇದು ಅಜೆಂಡಾವಾಗಲು ಇರುವ ಅರ್ಹತೆಯನ್ನು ಎತ್ತಿತೋರಿಸುತ್ತದೆ.

ಮುಸ್ಲಿಮರಿಗೆ ‘ಪಾಠ’ ಕಲಿಸುವುದು:

1997 ಡಿಸೆಂಬರ್ 29 ರಂದು ಅಶೋಕ್ ಸಿಂಘಲ್, “ಮುಸ್ಲಿಮರ ಕತ್ತು ಹಿಡಿದು ಅವರು ಇರಬೇಕಾಗಿರುವುದು ಎಲ್ಲಿ ಎಂದು ತೋರಿಸಲು ಇದು ಸಮಯವಾಗಿದೆ” ಎಂದಿದ್ದರು. “ಕಾಶಿ ಮತ್ತು ಮಥುರಾಗಳು ನಮ್ಮವು. ಇನ್ನೂ ಹೆಚ್ಚಿನ ಅವಮಾನವನ್ನು ಮುಸ್ಲಿಮರು ತಪ್ಪಿಸಿಕೊಳ್ಳಬೇಕಾದರೆ ಅವರು ಮೌನವಾಗಿ ಆ ಪವಿತ್ರ ಸ್ಥಳಗಳನ್ನು ಹಸ್ತಾಂತರಿಸಬೇಕು” ಎಂದು ಅವರು ಹೇಳಿದ್ದರು. ಎ.ಬಿ.ವಾಜಪೇಯಿ ಈ ಪ್ರತಿಕ್ರಿಯೆಗಳನ್ನು ನಿರಾಕರಿಸಲಿಲ್ಲ. ಕ್ರೌರ್ಯ ಪ್ರಕೃತಿಯ ಹೇಳಿಕೆಯ ಔಪಚಾರಿಕ ನಿರಾಕರಣೆಯ ಅಗತ್ಯವಿತ್ತು. ಸಿಂಘಲ್ ಲಕ್ನೊದಲ್ಲಿ ಪ್ರತಿಭಟನೆಯನ್ನು ನಡೆಸುತ್ತಿರುವಾಗ ಅಡ್ವಾಣಿ ತಿರುಪತಿ ಮಂದಿರ ನಗರದಲ್ಲಿ ಮಾತನಾಡಿದ್ದರು.

“ಸ್ಪಷ್ಟವಾಗಿ ಮತ್ತು ನಿಸ್ಸಂಗ್ಧಿಗ್ಧವಾಗಿ ಕಾಶಿ ಮತ್ತು ಮಥುರಾ ಬಿಜೆಪಿಯ ಅಜೆಂಡಾವಲ್ಲ. ಆದರೂ ಕಾಶಿ ಮತ್ತು ಮಥುರಾ ಬಿಜೆಪಿಯ ಪ್ರಣಾಳಿಕೆಯ ಭಾಗವಾಗಿದೆ. ಅದೇ ವೇಳೆ, ಚುನಾವಣೆಗಳಲ್ಲಿ ಪ್ರಮುಖ ವಿಷಯ ಸ್ಥಿರತೆ ಮತ್ತು ಆಡಳಿತ” ಎಂದು ಅವರು ಹೇಳಿರುವುದಾಗಿ ದಿ ಹಿಂದೂ ವರದಿ ಮಾಡಿತ್ತು. “ಎರಡು ಮಂದಿರ ವಿಷಯಗಳನ್ನು ಮುಂದೂಡಲಾಗಿದೆಯೆಂದು ಇಲ್ಲಿ ಅರ್ಥವಲ್ಲ. ಆದರೆ ಪ್ರತಿಯೊಂದು ಚುನಾವಣೆ ತನ್ನದೇ ‘ಪ್ರಮುಖ ವಿಷಯ’ಗಳನ್ನು ಒಳಗೊಂಡಿರುವಂತೆ ಈ ಬಾರಿ ‘ಸ್ಥಿರತೆ’ ಪ್ರಮುಖ ವಿಷಯವಾಗಿದೆ ಎಂದು ಅಡ್ವಾಣಿ ಹೇಳಿದ್ದರು.

“ಅದೇ ವರ್ಷದ ಆರಂಭದಲ್ಲಿ ಮಾರ್ಚ್ 16ರಂದು ಅಡ್ವಾಣಿ ತನ್ನ ಮಾತಿನ ಅರ್ಥವೇನೆಂದು ವಿವರಿಸಿದ್ದರು: ‘(ಕಾಶಿ ಮತ್ತು ಮಥುರಾ)’ ಅಜೆಂಡಾದಲ್ಲಿಲ್ಲ. ಮೊದಲು ಅಯೋಧ್ಯೆಯೂ ಅಜೆಂಡವಾಗಿರಲಿಲ್ಲ’ ಎಂದು ಅವರು ಹೇಳಿದ್ದರು. 1998ರ ಜನವರಿ 1ರಂದು ವಾಜಪೇಯಿಯ ನಿರಾಕರಣೆಯನ್ನು ಅಶೋಕ್ ಸಿಂಘಲ್ ಗೇಲಿ ಮಾಡಿದ್ದರು. ‘ಇಂತಹ ಹೇಳಿಕೆಗಳ ಅರ್ಥವನ್ನು ಅವರು ಚೆನ್ನಾಗಿ ತಿಳಿದಿದ್ದಾರೆ…ಸಂಘಪರಿವಾರದ ನಿರ್ಧಾರವು ಅಂತಿಮ ಮತ್ತು ನಿರ್ಬಂಧವಾಗಿದೆ’ ಎಂದು ಸಿಂಘಲ್ ಹೇಳಿದ್ದರು. ಒಂದು ದಿನ ಮೊದಲು ಅವರು ಅಯೋಧ್ಯೆಯಲ್ಲಿ , “ಮಂದಿರ ವಿಷಯದಲ್ಲಿ ಬಿಜೆಪಿ ಮತ್ತು ವಿ.ಎಚ್.ಪಿ ಮಧ್ಯೆ ಯಾವುದೇ ಭಿನ್ನತೆಯಿಲ್ಲ. ತಮ್ಮ ಭಾಷೆಗಳು ಬೇರೆ ಬೇರೆಯಾಗಿರಬಹುದು. ಆದರೆ ಸೈದ್ಧಾಂತಿಕವಾಗಿ ನಾವೆಲ್ಲರೂ ಒಂದೇ” ಎಂದಿದ್ದರು. ಜನವರಿ 9ರಂದು ಅವರು ಸಂಘಪರಿವಾರದ ಅಂಗಗಳ ಮಧ್ಯೆ ಈ ವಿಷಯದಲ್ಲಿ ಯಾವುದೇ ಬಿಕ್ಕಟ್ಟು ಉಂಟಾಗದು ಎಂದು ಪ್ರಮಾಣ ಮಾಡಿದ್ದರು.

ಜನವರಿ 10ರಂದು ಆರೆಸ್ಸೆಸ್ ಮುಖ್ಯಸ್ಥ ರಾಜೇಂದ್ರ ಸಿಂಗ್ ಮಾಡಿದ ಭಾಷಣವು ಅತ್ಯಂತ ಸ್ಪಷ್ಟವಾಗಿದೆ. ಅಯೋಧ್ಯೆ, 370ನೆ ವಿಧಿ ಮತ್ತು ಇತರ ವಿವಾದಾಸ್ಪದ ವಿಷಯಗಳಲ್ಲಿ ಬಿಜೆಪಿಯ ಮೇಲ್ನೋಟದ ಬದಲಾವಣೆಯನ್ನು ಅವರು ಸಮರ್ಥಿಸಿದ್ದರು. “ ನೀವು ಕಾಯಿಲೆ ಪೀಡಿತರಾದಗ ಸ್ನಾನವನ್ನು ಮಾಡುವುದಿಲ್ಲ. ಅದರರ್ಥ ಎಲ್ಲಾ ಸಂದರ್ಭಗಳಲ್ಲೂ ಅದೇ ರೀತಿ ಮುಂದುವರಿಯಬೇಕೆಂದಲ್ಲ” ಎಂದು ಅವರು ಹೇಳಿದ್ದರು.

2020ರ ಸೆಪ್ಟಂಬರ್ 9 ರಂದು ಸುಪ್ರೀಂ ಕೋರ್ಟ್ ನ ಏಕಮುಖ ತೀರ್ಪಿನ ಬಳಿಕ ‘ದಿ ಟೈಮ್ಸ್ ಆಫ್ ಇಂಡಿಯಾ’ ಈ ರೀತಿ ವರದಿ ಮಾಡಿತ್ತು; “ಅಯೋಧ್ಯೆ ರಾಮ ಮಂದಿರದ ಬಳಿಕ ಕಾಶಿ ಮತ್ತು ಮಥುರಾ ಪವಿತ್ರ ಸ್ಥಾನಗಳ ಪುನಸ್ಥಾಪನೆಯ ಬೇಡಿಕೆಯನ್ನು ಆರೆಸ್ಸೆಸ್ ಕೈಗೆತ್ತಿಕೊಳ್ಳುವುದಿಲ್ಲ ಮತ್ತು ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಮೊದಲು ಅದರ ಅನುಷ್ಠಾನದ ಕುರಿತು ಸಾರ್ವಜನಿಕ ಅಭಿಪ್ರಾಯವನ್ನು ಸಿದ್ಧಪಡಿಸಬೇಕೆಂದು ಅದು ಭಾವಿಸಿದೆ.”

“ರಾಮಮಂದಿರದ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕಾಶಿ ವಿಶ್ವನಾಥ ಮತ್ತು ಕೃಷ್ಣ ಜನ್ಮಭೂಮಿ ವಿಷಯದಲ್ಲಿ ಸಾರ್ವಜನಿಕ ಭಾವನೆಗಳೇನಾದರೂ ಏಳುತ್ತದೆಯೇ ಎಂಬುದನ್ನು ಆರೆಸ್ಸೆಸ್ ಕಾಯುತ್ತಿರುವಂತೆ ತೋರುತ್ತಿದೆ” ಎಂದು ವರದಿ ಉಲ್ಲೇಖಿಸಿತ್ತು.

ಕೆಲವೇ ದಿನಗಳ ನಂತರ, ಮಥುರಾ ಮಸೀದಿಯ ಒಡೆತನ ಹಕ್ಕು ಕೇಳಿ ನಾಗರಿಕ ಮೊಕದ್ದಮೆಯ ಕುರಿತು ಪತ್ರಿಕೆಗಳು ವ್ಯಾಪಕವಾಗಿ ಪ್ರಕಟಿಸಿದ್ದವು. ನ್ಯಾಯಲಯವು ಮೊಕದ್ದಮೆಯನ್ನು ನಿರಾಕರಿಸಿತು. ಆದರೆ ಅರೆಸ್ಸೆಸ್ ದಾಖಲೆಯು ಮೋಸವನ್ನು ತೋರಿಸುತ್ತದೆ ಮತ್ತು ಇಡೀ ಆಂದೋಲನದಲ್ಲಿ ಅದು ಎದ್ದು ಕಾಣುತ್ತದೆ. ಅದರ ಗುರಿ ಮಂದಿರವಲ್ಲ; ಅದು ಸಾಂಕೇತಿಕವಷ್ಟೆ. ರಾಜಕೀಯ ಮತ್ತು ಕಾನೂನು ಅಡೆತಡೆಗಳ (ಆರಾಧನಾ ಸ್ಥಳಗಳ ಕಾಯ್ದೆ) ಹೊರತಾಗಿಯೂ ಹಿಂದೂ ರಾಜ್ಯ ಅವರ ಗುರಿಯಾಗಿದೆ. ಪ್ರಭುತ್ವದ ನೆರವಿನೊಂದಿಗೆ ಹಿಂದುತ್ವವಾದಿಗಳು ಕಾನೂನನ್ನು ತಿರಸ್ಕರಿಸಬಹುದಾದರೆ, ಪ್ರಾಚೀನ ಸ್ಮಾರಕ ಮತ್ತು ಪುರಾತತ್ವ ತಾಣ ಮತ್ತು ಅವಶೇಷ ಕಾಯ್ದೆ 1958, ಪ್ರಕರಣದಲ್ಲಿ ಅವರಿಗೆ ಯಾವುದೇ ಭಯವುಂಟುಮಾಡದು.

1968ರಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಮಸೀದಿಯ ಕುರಿತ ಗಂಭೀರ ಒಪ್ಪಂದ ಏನಾಗಿತ್ತು? ಇಲ್ಲಿ ಅದರ ನಕಲನ್ನು ಮರುಪ್ರದರ್ಶಿಸಲಾಗಿದೆ. ಎರಡು ಪಕ್ಷಗಳ ‘ದೀರ್ಘ ಕಾಲೀನ ವಿವಾದ’ವನ್ನು ಪರಿಹರಿಸುವುದು ಒಪ್ಪಂದದ ಉದ್ದೇಶವಾಗಿತ್ತು. ಆರೆಸ್ಸೆಸ್ ಮತ್ತು ಜನಸಂಘ ಆಗ ತುಂಬಾ ಜೀವಂತವಾಗಿತ್ತು. ಎರಡೂ ಪಕ್ಷಗಳು ಒಪ್ಪಂದ ದಾಖಲೆಗಳು ಮತ್ತು ದೃಢೀಕರಣವನ್ನು ಸ್ವೀಕರಿಸಿದ್ದವು. ಅದು 50 ವರ್ಷಗಳ ಮುಂಚೆಯೇ ನೋಂದಾಯಿತಗೊಂಡಿತ್ತು. ಮುಸ್ಲಿಂ ಪಕ್ಷವು ಕೆಲವು ಭೂಮಿಯನ್ನು ಹಿಂದೂಗಳಿಗೆ ಬಿಟ್ಟುಕೊಟ್ಟಿತು. ಹಿಂದೂಗಳು ಅದನ್ನು ಸ್ವೀಕರಿಸಿದ್ದರು. ಅದೇ ರೀತಿ ಹಿಂದೂ ಪಕ್ಷವು ತಮ್ಮ ಭೂಮಿಯ ಕೆಲವು ಭಾಗವನ್ನು ಬಿಟ್ಟುಕೊಟ್ಟಿತು. ಅಲ್ಲಿ ಕೊಡು, ಕೊಳ್ಳುವಿಕೆಯ ವ್ಯವಹಾರ ನಡೆದಿತ್ತು. ಎರಡೂ ಕಡೆಯ ದೂರುಗಳನ್ನು ಹಿಂದೆಗೆಯಲಾಗಿತ್ತು. ನಂತರ ಒಪ್ಪಂದವನ್ನು ಜಾರಿಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮಾತ್ರವೇ ನ್ಯಾಯಾಲಯಗಳ ಸಹಾಯವನ್ನು ಬೇಡಬಹುದಾಗಿತ್ತು.

ಕೃಪೆ: ಫ್ರಂಟ್ ಲೈನ್

Join Whatsapp