ಉತ್ತರ ಪ್ರದೇಶ ಪೊಲೀಸರ ವಿಶೇಷ ತನಿಖಾ ವರದಿಗಳೇ ಹೇಳುತ್ತಿವೆ ‘ಲವ್ ಜಿಹಾದ್’ ಸುಳ್ಳು! | ಸಿಎಂ ಯೋಗಿ ಆದಿತ್ಯನಾಥ್ ಗೆ ಮುಖಭಂಗ

Prasthutha|

ಲಖನೌ : ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಇತ್ತೀಚೆಗೆ ‘ಲವ್ ಜಿಹಾದ್’ ಕಾನೂನು ತರುವ ಬಗ್ಗೆ ಚರ್ಚೆಗಳಾಗುತ್ತಿವೆ. ಅದರಲ್ಲೂ, ಮುಖ್ಯವಾಗಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರಕಾರ ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದೆಯೇ ಇದೆ. ಆದರೆ, ಯೋಗಿ ಸರಕಾರದ ‘ಲವ್ ಜಿಹಾದ್’ ಪ್ರಕರಣಗಳು ಏರಿಕೆಯಾಗಿದೆ ಎಂಬ ಪ್ರತಿಪಾದನೆಯೂ, ಅಲ್ಲಿನ ಪೊಲೀಸರ ವರದಿಗಳೂ ತದ್ವಿರುದ್ಧವಾದ ಮಾಹಿತಿಗಳನ್ನು ಪ್ರಕಟಿಸುತ್ತವೆ.

- Advertisement -

‘ಲವ್ ಜಿಹಾದ್’ ಮೂಲಕ ಹಿಂದೂ ಮಹಿಳೆಯರನ್ನು ಆಮಿಷವೊಡ್ಡಿ ಮುಸ್ಲಿಮ್ ಯುವಕರು ಪ್ರೀತಿಸಿ, ಮತಾಂತರ ಮಾಡಿ ವಂಚಿಸುತ್ತಾರೆ ಎಂದು ಆರೋಪಿಸುವ ಬಿಜೆಪಿ ಸರಕಾರದಲ್ಲಿ ಯೋಗಿ ಆದಿತ್ಯನಾಥ್ ‘ವಿಶೇಷ ತನಿಖಾ ಸಂಸ್ಥೆ’ಯನ್ನು ಸ್ಥಾಪಿಸಿದ್ದರು. ಈ ತನಿಖಾ ಸಂಸ್ಥೆಗಳು ನಡೆಸಿರುವ ಬಹುತೇಕ ಪ್ರಕರಣಗಳಲ್ಲಿ ಹಿಂದೂ-ಮುಸ್ಲಿಂ ಮದುವೆಯಾದ, ಪ್ರೀತಿಸಿದ ಜೋಡಿಗಳು ಪರಸ್ಪರ ಒಮ್ಮತದಿಂದಲೇ ಸಂಬಂಧ ಬೆಳೆಸಿವೆ ಎಂದು ವರದಿಯೊಂದು ಸಲ್ಲಿಕೆಯಾಗಿದೆ.

ಕಾನ್ಪುರ ಐಜಿಪಿ ಮೋಹಿತ್ ಅಗರ್ವಾಲ್ ಶನಿವಾರ ಸಲ್ಲಿಸಿರುವ ವರದಿಯಲ್ಲೇ ಇದು ಸ್ಪಷ್ಟವಾಗಿದೆ. ಕಾನ್ಪುರ ನಗರದ ಎಲ್ಲಾ 22 ಠಾಣೆಗಳಲ್ಲಿ ಹಿಂದೂ-ಮುಸ್ಲಿಂ ಪ್ರೇಮಿಗಳ ಪ್ರಕರಣಗಳ ಬಗ್ಗೆ ಪರಿಶೀಲಿಸಿದಾಗ ಕೇವಲ 14 ಪ್ರಕರಣಗಳು ಬೆಳಕಿಗೆ ಬಂದವು. ಅವುಗಳ ಕುರಿತಂತೆ ವಿಶೇಷ ತನಿಖಾ ತಂಡಗಳು ತನಿಖೆ ನಡೆಸಿವೆ.

- Advertisement -

ಹಿಂದೂ ಮಹಿಳೆಯರು ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆಯಾದ ಅಥವಾ ಜೊತೆಗಿರುವ 14 ಪ್ರಕರಣಗಳಲ್ಲಿ, ಎಂಟು ಪ್ರಕರಣಗಳಲ್ಲಿ ಅವರು ಸ್ವಯಂ ಇಚ್ಛೆಯಿಂದ ವಿವಾಹವಾಗಿರುವುದು ಅಥವಾ ಜೊತೆಗಿರುವುದು ಎಂಬುದು ಸ್ಪಷ್ಟವಾಗಿದೆ. ಒಂದು ಪ್ರಕರಣದಲ್ಲಿ ಸಾಕ್ಷ್ಯವಿಲ್ಲದೆ, ಆರೋಪಿ ಮುಸ್ಲಿಂ ವ್ಯಕ್ತಿಗೆ ಜಾಮೀನು ಸಿಕ್ಕಿದೆ.

ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ, ನಿಂದಿಸುವ ಮತ್ತು ಅಪರಾಧೀಕರಣಗೊಳಿಸುವ ಉದ್ದೇಶದಿಂದ ಬಿಜೆಪಿ ಮತ್ತು ಅದರ ಸಹ ಸಂಘಟನೆಗಳು ‘ಲವ್ ಜಿಹಾದ್’ ಕುರಿತು ಅಭಿಯಾನ ನಡೆಸುತ್ತಿವೆ. ಬಿಜೆಪಿ ಪರ ಇರುವ ಮಾಧ್ಯಮ ಸಂಸ್ಥೆಗಳೂ ಇದಕ್ಕೆ ಬಣ್ಣ ಹಚ್ಚಿ, ಕಟ್ಟುಕತೆಗಳನ್ನು ಕಟ್ಟಿ, ಬಿಜೆಪಿ ಬೆಂಬಲಿಗರನ್ನು ಓಲೈಸುವ ಕ್ರಿಯೆಯಲ್ಲಿ ಸತತವಾಗಿ ನಿರತವಾಗಿವೆ.

ವಾಸ್ತವದಲ್ಲಿ, ‘ಲವ್ ಜಿಹಾದ್’ ಇಲ್ಲ ಎಂದು ಸ್ವತಃ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸಂಸತ್ತಿನಲ್ಲೇ ವಿವರಣೆ ನೀಡಿದೆ. ಆದರೂ, ರಾಜಕೀಯ ದುರುದ್ದೇಶದಿಂದ, ಬಿಜೆಪಿ ಹಾಗೂ ಅದರ ಸಹ ಸಂಘಟನೆಗಳು, ಮಾಧ್ಯಮಗಳು ‘ಲವ್ ಜಿಹಾದ್’ ರಾಜಕಾರಣದಲ್ಲಿ ನಿರತವಾಗಿರುವುದು ವಿಪರ್ಯಾಸ.

Join Whatsapp