ರಾಜ್ಯೋತ್ಸವದಲ್ಲಿ ಕನ್ನಡ ಧ್ವಜಕ್ಕೆ ಅವಮಾನ | ಇಂದು 5 ಗಂಟೆಯಿಂದ ಟ್ವಿಟರ್ ನಲ್ಲಿ #ನಮ್ಮಧ್ವಜ_ನಮ್ಮಹೆಮ್ಮೆ ಅಭಿಯಾನ

Prasthutha|

ಬೆಂಗಳೂರು : ನಿನ್ನೆ (ಭಾನುವಾರ) ರಾಜ್ಯಾದ್ಯಂತ ಕನ್ನಡಿಗರು ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಿಸಿದ್ದಾರೆ. ಆದರೆ, ಈ ವೇಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕನ್ನಡ ಧ್ವಜ ಹಾರಿಸದೆ, ಅವಮಾನ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಇಂದು (ಸೋಮವಾರ) ಸಂಜೆ 5 ಗಂಟೆಗೆ ಟ್ವಿಟರ್ ನಲ್ಲಿ  #ನಮ್ಮಧ್ವಜ_ನಮ್ಮಹೆಮ್ಮೆ ಅಭಿಯಾನ ನಡೆಸಲು ಹಲವು ಪ್ರಮುಖರು ಕರೆ ನೀಡಿದ್ದಾರೆ.

- Advertisement -

ಕನ್ನಡ ರಾಜ್ಯೋತ್ಸವ ಆಚರಣೆಗೆ 100ಕ್ಕಿಂತ ಹೆಚ್ಚು ಜನ ಸೇರಬಾರದು, ಮೆರವಣಿಗೆ ಮಾಡಬಾರದು, ಕಾರ್ಯಕ್ರಮಕ್ಕೆ ಅನುಮತಿ ಪಡೆಯಬೇಕೆಂಬ ನಿಯಮಗಳನ್ನು ಹೇರಿದ ಸರಕಾರ ಉಪಚುನಾವಣೆ ಪ್ರಚಾರದ ವೇಳೆ ಮಾತ್ರ ಇಂತಹ ಯಾವುದೇ ನಿರ್ಬಂಧ ಹೇರಿಲ್ಲ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ರಾಜ್ಯೋತ್ಸವದ ದಿನವಾದ ನಿನ್ನೆ ಹಲವು ಜಿಲ್ಲಾಕೇಂದ್ರಗಳಲ್ಲಿ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಕನ್ನಡಧ್ವಜ ಹಾರಿಸದೇ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಲಾಗಿದೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಕನ್ನಡಧ್ವಜ ಹಾರಿಸಿರುವಾಗ ಜಿಲ್ಲಾ ಉಸ್ತುವಾರಿ ಸಚಿವರು ಬಾವುಟ ಹಾರಿಸದಂತೆ ತಡೆದ ಶಕ್ತಿ ಯಾವುದು?” ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರಶ್ನಿಸಿದೆ. ಅಲ್ಲದೆ, ಈ ಸಂಬಂಧ 2-11-2020(ಇಂದು)ರ ಸಂಜೆ 5ಗಂಟೆಯಿಂದ #ನಮ್ಮಧ್ವಜ_ನಮ್ಮಹೆಮ್ಮೆ ಟ್ವಿಟರ್ ಆಂದೋಲನ ನೀಡಲು ಕರೆ ನೀಡಿದೆ.

- Advertisement -

ಕೆಲವೆಡೆ ನಡೆದ ಸರಕಾರಿ ಕಾರ್ಯಕ್ರಮಗಳಲ್ಲಿ ಕೇವಲ ರಾಷ್ಟ್ರಧ್ವಜ ಮಾತ್ರ ಹಾರಿಸಲಾಗಿತ್ತು. ಬಿಜೆಪಿಗರು ಈ ಹಿಂದೆಯೂ ಕನ್ನಡ ಧ್ವಜದ ವಿಚಾರದಲ್ಲಿ ನಿರ್ಲಕ್ಷ್ಯದ ಹೇಳಿಕೆಗಳನ್ನು ನೀಡಿದ್ದುದರಿಂದ, ಇದೀಗ ಆಡಳಿತವೇ ಕನ್ನಡ ಧ್ವಜ ಹಾರಾಟಕ್ಕೆ ಮುಂದಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದು ಕೇವಲ ಧ್ವಜದ ವಿಷಯ ಅಲ್ಲ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಕನ್ನಡಿಗರ ಅಸ್ಮಿತೆಯನ್ನು ಪ್ರಶ್ನಿಸುವ ಕೆಲಸದಲ್ಲಿ ನಿರತವಾಗಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.  

Join Whatsapp