ಕಲ್ಲಡ್ಕ ಸಂಘಪರಿವಾರದ ಕಾರ್ಯಕರ್ತರಿಂದ ದನಗಳ್ಳತನ ಪ್ರಕರಣ । FIR ದಾಖಲಿಸದೆ ಆರೋಪಿಗಳನ್ನು ಬಿಡುಗಡೆಗೊಳಿಸಿದ ಪೊಲೀಸರು !

Prasthutha|

► ಪೊಲೀಸರ ನಡೆಯ ವಿರುದ್ಧ ಸಾರ್ವಜನಿಕರ ಆಕ್ರೋಶ

- Advertisement -

ಬಂಟ್ವಾಳ: ಇತ್ತೀಚೆಗೆ ಕಲ್ಲಡ್ಕದ ಕುಂಟಿಬಾಪು ಎಂಬಲ್ಲಿ ದನ ಕಳ್ಳತನಕ್ಕೆ ಯತ್ನಿಸುವಾಗ ಸಿಕ್ಕಿಬಿದ್ದ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಪೊಲೀಸರು ಎಫ್.ಐ.ಆರ್ ದಾಖಲಿಸದೆ ಬಿಡುಗಡೆಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಅ.29ರಂದು ಈದ್ ಮಿಲಾದ್ ಹಬ್ಬದ ದಿನದಂದು ಸಂಘಪರಿವಾರದ ಕಾರ್ಯಕರ್ತರೆಂದು ಆರೋಪಿಸಲಾದ ಕಲ್ಲಡ್ಕದ ನವೀನ್, ಮಾಧವ ಸುದೆಕಾರ್ ಮತ್ತು ಇನ್ನೋರ್ವ ವ್ಯಕ್ತಿಯನ್ನು ಬೀದಿಯಲ್ಲಿ ಮೇಯುತ್ತಿದ್ದ ದನವನ್ನು ಪಿಕಪ್ ಗೆ ತುಂಬಿಸಿ ಕೊಂಡೊಯ್ಯಲು ಪ್ರಯತ್ನಿಸುತ್ತಿರುವ ವೇಳೆ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ದನದ ಮಾಲೀಕ ಇಮ್ರಾನ್ ಪೊಲೀಸರಿಗೆ ದೂರು ನೀಡಿದ್ದರೂ ಎಫ್.ಐ.ಆರ್ ದಾಖಲಿಸಲಾಗಿಲ್ಲ ಮತ್ತು ಆರೋಪಿಗಳನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ ಎನ್ನಲಾಗಿದೆ.

- Advertisement -

ದೂರು ಸಂಖ್ಯೆ PO1072200600766 ಬಂಟ್ವಾಳ ಠಾಣೆಯಲ್ಲಿ ಬಾಕಿಯುಳಿದಿದೆ ಎಂಬ ಸಂದೇಶ ಇಮ್ರಾನ್ ರ ಮೊಬೈಲ್ ಗೆ ಬಂದಿದ್ದು, ಇದುವರೆಗೆ ಎಫ್.ಐ.ಆರ್ ದಾಖಲಿಸಲಾಗಿಲ್ಲ.

ಆರೋಪಿ ನವೀನ್,  ಕಲ್ಲಡ್ಕ ಪ್ರಭಾಕರ್ ಭಟ್ ಆಪ್ತನಾಗಿರುವ ಭಜರಂಗ ದಳದ ಸ್ಥಳೀಯ ನಾಯಕ ಮತ್ತು ರೌಡಿ ಶೀಟರ್ ಮಿಥುನ್ ಕಲ್ಲಡ್ಕ ನ ಸಹಚರನಾಗಿದ್ದು, ಕಲ್ಲಡ್ಕ ಸುತ್ತಮುತ್ತ ನಡೆದ ಹಲವು ಕೋಮುಗಲಭೆ ಮತ್ತು ಹಲ್ಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಸಂಘಪರಿವಾರ ಮತ್ತು ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಪೊಲೀಸರು ಈ ಪ್ರಕರಣದಲ್ಲಿ ಎಫ್.ಐ.ಆರ್ ದಾಖಲಿಸಿಲ್ಲ. ಇದೇ ವೇಳೆ, ಆರೋಪಿಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದವರಾಗಿದ್ದರೆ ಪೊಲೀಸರು ಎಫ್.ಐ.ಆರ್ ದಾಖಲಿಸದೆ ಆರೋಪಿಗಳನ್ನು ಬಿಡುಗಡೆಗೊಳಿಸುತ್ತಿದ್ದರೇ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

Join Whatsapp