ಗೌರಿ ಲಂಕೇಶ್ ಹತ್ಯೆ । ನಿಗೂಢವಾಗುಳಿದ 7.65MM ಪಿಸ್ತೂಲು । ಆರೋಪಿಗಳಿಗೆ ಶಿಕ್ಷೆ ಎಂದು ?

Prasthutha|

ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲದ ಫ್ಯಾಶಿಸ್ಟ್ ಶಕ್ತಿಗಳನ್ನು ತನ್ನ ಹರಿತವಾದ ಲೇಖನಿಯ ಮೂಲಕ ದಿಟ್ಟವಾಗಿ ಎದುರಿಸುತ್ತಿದ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಸೆಪ್ಟಂಬರ್ 5 ರಂದು ರಾತ್ರಿ ತನ್ನ ಮನೆಯ ಹೊರಗಡೆ ಹತ್ಯೆ ಮಾಡಲಾಗಿತ್ತು. ಅಂದಿನ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯನವರು ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದರು. ಅವರ ಅಧಿಕಾರವಧಿ ಮುಗಿಯುವ ವೇಳೆಗೆ ಅಂದರೆ ಮಾರ್ಚ್ 2018 ರಲ್ಲಿ ಹಿಂದೂ ಯುವಸೇನೆಯ ಸದಸ್ಯನಾಗಿದ್ದ ಕೆ. ಟಿ. ನವೀನ್ ಎಂಬ ಭಯೋತ್ಪಾದಕನನ್ನು ಬಂಧಿಸುವುದರೊಂದಿಗೆ ಈ ಹತ್ಯಾ ಪ್ರಕರಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಲಾಗಿತ್ತು..

- Advertisement -


ತದ ನಂತರ ಹೆಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಮೇಲೂ ತನಿಖೆಯಲ್ಲಿ ಪ್ರಗತಿ ಸಾಧಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 19 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಮೈತ್ರಿ ಸರಕಾರ ಪತನಗೊಂಡು ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಗೌರಿ ಹತ್ಯಾ ಪ್ರಕರಣ ಕುಂಟುತ್ತಾ ಸಾಗಿದೆ ಎಂದೇ ಹೇಳಬಹುದು. ವಿಶೇಷ ತನಿಖಾ ತಂಡ (ಸಿಟ್) ಈ ವರ್ಷದ ಮೇಯಲ್ಲಿ ಪ್ರಕರಣದ ಚಾರ್ಜ್ ಶೀಟನ್ನು ಸಲ್ಲಿಸಿದೆ. ಘಟನೆ ನಡೆದು ಮೂರು ವರ್ಷಗಳಾಗಿದ್ದು, ಪ್ರಕರಣ ವಿಚಾರಣಾ ಹಂತಕ್ಕೆ ಬಂದು ತಲುಪಿದೆ.


ನಿಗೂಢತೆ ಉಳಿಸಿಕೊಂಡ 7.65 ಎಂಎಂ ಪಿಸ್ತೂಲು
ಪ್ರಕರಣ ವಿಚಾರಣಾ ಹಂತದಲ್ಲಿದ್ದರೂ ಕೃತ್ಯಕ್ಕೆ ಬಳಸಿದ ಅಸ್ತ್ರದ ಆಯಾಮ ಮಾತ್ರ ಇನ್ನೂ ಬಾಕಿಯುಳಿದಿದೆ. ದೇಶೀ ನಿರ್ಮಿತ 7.65 ಎಂಎಂ ಪಿಸ್ತೂಲು ಬಳಸಿ ಗೌರಿ ಹತ್ಯೆ ನಡೆಸಲಾಗಿದೆ ಎಂದು ತನಿಖಾ ತಂಡ ಪತ್ತೆ ಹಚ್ಚಿದ್ದರೂ, ತನಿಖೆಯ ವೇಳೆ ಆ ಅಸ್ತ್ರ ಮಾತ್ರ ಪತ್ತೆಯಾಗಿಲ್ಲ. 2019 ರಲ್ಲಿ ಸಿಟ್ ತಂಡ ಶರದ್ ಕಲಾಸ್ಕರ್ ಎಂಬ ಉಗ್ರನನ್ನು ಬಂಧಿಸಿದ್ದು, ಆತ ಬಾಯ್ಬಿಟ್ಟ ಪ್ರಕಾರ ಕೃತ್ಯಕ್ಕೆ ಬಳಸಿದ ಪಿಸ್ತೂಲನ್ನು ಮುಂಬೈನ ವಸಯಿ ಎಂಬ ಪ್ರದೇಶದಲ್ಲಿನ ಕೆರೆಯೊಂದಕ್ಕೆ ಎಸೆಯಲಾಗಿದೆ. ವಿಶೇಷ ತಂಡದ ಮೂಲಕ ಆ ಕೆರೆಯನ್ನು ಜಾಲಾಡಿದರೂ ಅಸ್ತ್ರ ಮಾತ್ರ ಪತ್ತೆಯಾಗಿರಲಿಲ್ಲ, ಕೊನೆಗೆ ಸಿಟ್ ಅದನ್ನು ಸ್ಥಗಿತಗೊಳಿಸಲು ತೀರ್ಮಾನಿಸಿತ್ತು.
ಈ ಪಿಸ್ತೂಲು ತನಿಖೆಯಲ್ಲಿ ಮಹತ್ವದ ಸಾಕ್ಷಿಯಾಗುವ ಸಾಧ್ಯತೆಯಿತ್ತು. ಮಾತ್ರವಲ್ಲ ಗೌರಿ ಲಂಕೇಶ್, ಪನ್ಸಾರ್ ಹಾಗೂ ಎಂ.ಎಂ.ಕಲ್ಬುರ್ಗಿ ಹತ್ಯೆಯಲ್ಲಿ ಇದೇ ಪಿಸ್ತೂಲ್ ಬಳಸಲಾಗಿದೆ ಎಂಬ ಅಂಶವೂ ತನಿಖಾ ಹಂತದಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಗೌರಿ ಲಂಕೇಶ್ ಹತ್ಯಾ ಸ್ಥಳದಲ್ಲಿ ನಾಲ್ಕು ಬುಲೆಟ್ ಗಳನ್ನು ಪತ್ತೆ ಹಚ್ಚಲಾಗಿತ್ತು. ಅದನ್ನು ಫಾರೆನ್ಸಿಕ್ ತನಿಖೆಗೆ ಒಳಪಡಿಸಲಾಗಿತ್ತು. ಅವರ ವರದಿಯ ಪ್ರಕಾರ ಆ ಬುಲೆಟ್ ಗಳು ನಿರ್ಮಿಸಿದ್ದ ಗುರುತುಗಳು ಪನ್ಸಾರೆ ಹಾಗೂ ಕಲ್ಬುರ್ಗಿ ಹತ್ಯೆಯಲ್ಲಿ ಸಿಕ್ಕ ಬುಲೆಟ್ ಉಳಿಸಿ ಹೋಗಿದ್ದ ಗುರುತುಗಳೊಂದಿಗೆ ಸಾಮ್ಯತೆ ಹೊಂದುತ್ತಿತ್ತು. ಹಾಗಾಗಿ ಈ ಮೂವರ ಹತ್ಯೆಗೆ ಒಂದೇ ರೀತಿಯ ಪಿಸ್ತೂಲು ಬಳಸಿದ್ದು ಸ್ಪಷ್ಟವಾಗಿತ್ತು.

- Advertisement -

ಆ ಪಿಸ್ತೂಲು ಹೇಳುವ ಕರಾಳ ಕಥೆ!
ಗೌರಿ ಹತ್ಯೆಯಾದ ಮರುದಿನ ಉಗ್ರರ ತಂಡದ ಸದಸ್ಯರಲ್ಲಿ ಓರ್ವನಾದ ಸುರೇಶ್, ಪಿಸ್ತೂಲನ್ನು ಸುಧನ್ವಾ ಗೊಂಡಾಲೇಕರ್ ಎನ್ನುವ ಮತ್ತೋರ್ವನಿಗೆ ಹಸ್ತಾಂತರಿಸುತ್ತಾನೆ. ಸುಧನ್ವಾ ನಂತರ ಶರದ್ ಕಲಾಸ್ಕರ್ ಗೆ ನೀಡುತ್ತಾನೆ. 2018ರ ಮೇಯಲ್ಲಿ ತಂಡದ ಮೂವರು ಪ್ರಮುಖ ಉಗ್ರರು ಬಂಧಿತರಾದಾಗ ಕಲಾಸ್ಕರ್ ಗೆ ಅದನ್ನು ಎಲ್ಲಾದರೂ ಬಿಸಾಕುವಂತೆ ಹೇಳಲಾಯಿತು.
“ನಾವು ಆ ಮೂರು ಪಿಸ್ತೂಲಿನ ಸ್ಲೈಡ್ ಹಾಗೂ ಬ್ಯಾರಲ್ ಗಳನ್ನು ತೆಗೆದು ಹಾಕಿ ಅದನ್ನು ವಿಲೇವಾರಿ ಮಾಡಲು ತೀರ್ಮಾನಿಸಿದೆವು. ಉಳಿದ ಭಾಗಗಳನ್ನು ಬೇರೆ ಅಸ್ತ್ರ ನಿರ್ಮಾಣಕ್ಕೆ ಬಳಸಲು ಇಟ್ಟುಕೊಂಡೆವು. ಸ್ಲೈಡ್ ಮತ್ತು ಬ್ಯಾರಲ್ ಗಳನ್ನು ವೈಭವ್ ರಾವತ್ ನ ಕಾರಿನಲ್ಲಿ ಹೋಗಿ ನಾನು ಮತ್ತು ವೈಭವ್ ಜುಲೈ 23, 2018 ರ ರಾತ್ರಿ 9 ಗಂಟೆಗೆ ಮುಂಬೈ – ನಾಸಿಕ್ ಹೆದ್ದಾರಿಯ ಮಧ್ಯೆ ಸಿಗುವ ನದಿಯೊಂದಕ್ಕೆ ಎಸೆದಿದ್ದೆವು. ಉಳಿದ ಭಾಗಗಳನ್ನು ವೈಭವ್ ರಾವತ್ ತನ್ನ ನಳಸೋಪಾರಾದ ಮನೆಯಲ್ಲಿಟ್ಟುಕೊಂಡಿದ್ದ.” ಇದನ್ನು ಶರದ್ ಕಲಾಸ್ಕರ್ ನೀಡಿದ ತಪ್ಪೊಪ್ಪಿಗೆಯ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.


ಸಿಟ್ ತಂಡ ಅಧಿಕಾರಿಯೋರ್ವರು ಹೇಳುವಂತೆ, “ಆ ಪಿಸ್ತೂಲು ಮೂರು ಹತ್ಯೆಗಳಿಗೆ ಸಂಬಂಧಪಟ್ಟಿರುವುದರಿಂದ ಕರ್ನಾಟಕ ಪೊಲೀಸ್, ಮಹಾರಾಷ್ಟ್ರ ಪೊಲೀಸ್ ಹಾಗೂ ಸಿಬಿಐ ಜಂಟಿಯಾಗಿ ಅದನ್ನು ತೆಗೆಯಲು ಬಹಳ ಶ್ರಮಪಟ್ಟಿದ್ದೆವು. ಆದರೆ ಅದನ್ನು ಮರಳಿ ಪಡೆಯುವಲ್ಲಿ ವಿಫಲರಾಗಿದ್ದೇವೆ. ಆದರೆ ಪಿಸ್ತೂಲು ಇಲ್ಲದೆಯೂ ಕೂಡಾ ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗುವಂತೆ ಮಾಡಲು ನಮ್ಮ ಬಳಿ ಬಹಳಷ್ಟು ಇತರೆ ಸಾಕ್ಷ್ಯಗಳು ಇವೆ.” ಅದೇನೇ ಇದ್ದರೂ ಗೌರಿ ಲಂಕೇಶ್ ಅವರನ್ನು ಹತ್ಯೆಗೈದ ಜೀವ ವಿರೋಧಿ ಉಗ್ರರನ್ನು ಮಟ್ಟ ಹಾಕಲು ಬಹಳಷ್ಟು ಜೀವಪರ ಮನಸ್ಸುಗಳು ಕಾದು ಕುಳಿತಿವೆ. ಅದು ಆದಷ್ಟು ಶೀಘ್ರವಾಗಲಿ ಎಂಬುದೇ ಅವರೆಲ್ಲರ ಆಶಯ.

Join Whatsapp