ಗೌರಿ ಹತ್ಯೆ ನಡೆಸಿದ್ದ ಉಗ್ರ ಕಲ್ಬುರ್ಗಿ ಹತ್ಯೆಯಲ್ಲೂ ಭಾಗಿ : ತನಿಖಾ ತಂಡಕ್ಕೆ ಮಹತ್ವದ ಸಾಕ್ಷ್ಯ ಲಭ್ಯ !

Prasthutha|

ಬೆಂಗಳೂರು:  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಉಗ್ರ ಗಣೇಶ್ ಮಿಸ್ಕಿನ್, ಚಿಂತಕರಾಗಿದ್ದ ಎಂ ಎಂ ಕಲ್ಬುರ್ಗಿ ಹತ್ಯೆಯಲ್ಲೂ ಖುದ್ದು ಭಾಗಿಯಾಗಿದ್ದ ಎಂಬ ಮಹತ್ವದ ಅಂಶ ಬಯಲಾಗಿದೆ. ಈ ಕುರಿತು ಪ್ರಮುಖ ಸಾಕ್ಷ್ಯವನ್ನು ವಿಶೇಷ ತನಿಖಾ ತಂಡ ಕಲೆ ಹಾಕಿದೆ ಎಂದು ‘ಇಂಡಿಯನ್ ಎಕ್ಸ್ ಪ್ರೆಸ್ಸ್’ ವರದಿ ಮಾಡಿದೆ. ಗಣೇಶ್ ಮಿಸ್ಕಿನ್ ನ ಇಬ್ಬರು ಸಂಬಂಧಿಗಳ ನಡುವೆ ನಡೆದ 190 ಸೆಕೆಂಡ್ ನ ಆಡಿಯೋ ಈ ಕುರಿತು ಪ್ರಮುಖ ಸಾಕ್ಷಿ ಆಗಿದೆ ಎನ್ನಲಾಗಿದೆ.

- Advertisement -

ಗೌರಿ ಹತ್ಯೆಯಾದ ದಿನ ಅವರಿಗೆ ಗುಂಡಿಕ್ಕಿದವನೆಂದು ಭಾವಿಸಲಾಗಿರುವ ಪರಶುರಾಮ್ ವಾಗ್ಮೋರೆಯನ್ನು ಗೌರಿ ಮನೆ ತನಕ ಮೋಟಾರ್ ಸೈಕಲಿನಲ್ಲಿ ಕರೆತಂದವನು ಗಣೇಶ್ ಮಿಸ್ಕಿನ್ ಎನ್ನಲಾಗಿದ್ದು, 2018 ರಲ್ಲಿ ವಿಶೇಷ ತನಿಖಾ ತಂಡ (ಸಿಟ್) ಬಂಧಿಸಿದ ನಂತರ ಆತನ ಇಬ್ಬರು ಸಂಬಂಧಿಗಳ ನಡುವೆ ನಡೆದ ಫೋನ್ ಸಂಭಾಷಣೆಯಲ್ಲಿ ಚರ್ಚೆ ನಡೆಸಿದ್ದು, ಅದರಲ್ಲಿ ಗಣೇಶ್ ಮಿಸ್ಕಿನ್ ಕಲ್ಬುರ್ಗಿ ಹತ್ಯೆಯಲ್ಲೂ ಭಾಗಿಯಾದ ವಿಚಾರ ಬಯಲಾಗಿದೆ ಎಂದು ಸಿಟ್ ಗೆ ತಿಳಿದು ಬಂದಿತ್ತು.

ಒಬ್ಬ ಸಂಬಂಧಿ ಇನ್ನೊಬ್ಬಾತ ಓರ್ವ ‘ಅಂಕಲ್’ ಜೊತೆಗೆ ಮಾತನಾಡುತ್ತ, ತನ್ನ ಸಹೊದರ ಗಣೇಶ್ ಎರಡು ಹತ್ಯೆಗಳಲ್ಲಿ ಪಾಲ್ಗೊಂಡಿದ್ದ ಎಂದು ಹೇಳಿದ್ದ ಎಂದು ತನಿಖಾ ದಾಖಲೆಗಳಿಂದ ತಿಳಿದು ಬಂದಿದೆ. ಗಣೇಶ್ ಮಿಸ್ಕಿನ್ ನ ಕಲ್ಬುರ್ಗಿ ಹತ್ಯೆಯಲ್ಲಿನ ಶಾಮೀಲಾತಿಯ ಉಲ್ಲೇಖ ಇರುವ ಆಡಿಯೋವನ್ನೇ ವಿಶೇಷ ತನಿಖಾ ತಂಡ ಲಿಖಿತ ರೂಪದಲ್ಲಿ ಚಾರ್ಜ್ ಶೀಟ್ ಜೊತೆಗೆ ಸಲ್ಲಿಸಲಾಗಿದೆ. 

Join Whatsapp