ಬಿಹಾರ ಚುನಾವಣಾ ವಿಜಯೋತ್ಸವ ವೇಳೆ ಬಿಜೆಪಿ ಕಾರ್ಯಕರ್ತರಿಂದ ಮಸೀದಿಯಲ್ಲಿ ದಾಂಧಲೆ

Prasthutha|

ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ವಿಜೇತರಾದ ಬಿಜೆಪಿ ಅಭ್ಯರ್ಥಿಯ ಪರವಾಗಿ ವಿಜಯ ಯಾತ್ರೆ ನಡೆಸುವ ವೇಳೆ ಪಕ್ಷದ ಕಾರ್ಯಕರ್ತರು ಮಸೀದಿಯೊಂದರಲ್ಲಿ ದಾಂಧಲೆ ನಡೆಸಿದ ಘಟನೆ ವರದಿಯಾಗಿದೆ. ಈ ವೇಳೆ ಮಸೀದಿಯೊಳಗೆ ಪ್ರಾರ್ಥನೆ ಮಾಡುತ್ತಿದ್ದ ಐವರ ಮೇಲೆ ಗಂಭೀರ ಹಲ್ಲೆ ನಡೆಸಿದ ಬಗ್ಗೆಯೂ ತಿಳಿದುಬಂದಿದೆ.

- Advertisement -

ಪೂರ್ವ ಚಂಪಾರನ್ ಜಿಲ್ಲೆಯ ಜಮುವಾ ಗ್ರಾಮದಲ್ಲಿ ನ.11ರಂದು ಈ ಘಟನೆ ನಡೆದಿದೆ. ಘಟನೆಯ ಸಂದರ್ಭ ಕೆಲವು ವಾಹನಗಳನ್ನು ಜಖಂ ಮಾಡಲಾಗಿದೆ. ಮಸೀದಿಯ ಧ್ವನಿ ವರ್ಧಕ ಹಾಗೂ ಎರಡು ಗೇಟುಗಳನ್ನೂ ಮುರಿದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಬಿಜೆಪಿ ನಾಯಕ ಪವನ್ ಕುಮಾರ್ ಜೈಸ್ವಾಲ್ ಗೆದ್ದಿರುವ ಢಾಕಾ ವಿಧಾನಸಭಾ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ.

- Advertisement -

ಜೈಸ್ವಾಲ್ ಗೆಲುವನ್ನು ಸಂಭ್ರಮಿಸುತ್ತಿದ್ದ ಸುಮಾರು 500 ಮಂದಿ ಮಸೀದಿ ಬಳಿ ಪ್ರಾರ್ಥನೆ ಸಲ್ಲಿಸುತ್ತಿದ್ದವರ ಮೇಲೆ ಕಲ್ಲೆಸೆದಿದ್ದಾರೆ. ಮಸೀದಿ ಹತ್ತಿರ ಬರುತ್ತಿದ್ದಂತೆ ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಗೇಟುಗಳು ಹಾಗೂ ಧ್ವನಿವರ್ಧಕಗಳನ್ನು ಒಡೆದಿದ್ದಾರೆ ಎಂದು ಮಸೀದಿ ಉಸ್ತುವಾರಿ ಮಝರ್ ಆಲಂ ಹೇಳಿದ್ದಾರೆ.

ಈ ಮಸೀದಿ ಅತ್ಯಂತ ಹಳೆಯ ಮಸೀದಿಗಳಲ್ಲಿ ಒಂದು, ಗ್ರಾಮದಲ್ಲಿ 20-25 ಮುಸ್ಲಿಂ ಕುಟುಂಬಗಳಿವೆ. “ಇದು ನಿಮ್ಮ ದೇಶವಲ್ಲವೆಂದು ಹೇಳುತ್ತಾ, ನಮಗೆ ಈ ದೇಶ ಬಿಟ್ಟು ತೆರಳಲು ಅವರು ಹೇಳಿದರು’’ ಎಂದು ಮಝರ್ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.

ಮೆರವಣಿಗೆ ಮಸೀದಿ ಸಮೀಪ ಬರುತ್ತಿದ್ದಾಗ, ಮಸೀದಿ ಹೊರಗೆ ಅಂಗಡಿ ಹೊಂದಿದ್ದ ವ್ಯಕ್ತಿಯೊಬ್ಬರು, ಮಸೀದಿಯೊಳಗೆ ಪ್ರಾರ್ಥನೆ ನಡೆಯುತ್ತಿರುವುದರಿಂದ ಧ್ವನಿ ವರ್ಧಕ ನಿಲ್ಲಿಸುವಂತೆ ಕೋರಿಕೊಂಡರು. ಆ ವಿಷಯದಲ್ಲಿ ವಾಗ್ವಾದ ನಡೆದು, ಮೆರವಣಿಗೆಯಲ್ಲಿದ್ದವರು ಕಲ್ಲೆಸೆದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

Join Whatsapp