ಹೊಗೆ ಆರುವ ಮುನ್ನವೇ ಬೆಂಗಳೂರಿಗೆ ಮತ್ತೊಮ್ಮೆ ಬೆಂಕಿ ಹಚ್ಚುವ ಪ್ರಯತ್ನ : ನಟ ಪ್ರಥಮ್ ರಿಂದ ವಿವಾದಾತ್ಮಕ ಫೇಸ್ಬುಕ್ ಪೋಸ್ಟ್!

Prasthutha|

ಇತ್ತೀಚೆಗೆ ಬೆಂಗಳೂರಿನಲ್ಲಿ ನವೀನ್ ಎನ್ನುವ ಮತಾಂಧನೋರ್ವ ತನ್ನ ಫೇಸ್ಬುಕ್ ನಲ್ಲಿ ಹಾಕಿದ್ದ ಕಾಮೆಂಟ್ ಒಂದು ಮುಸ್ಲಿಮರ ಅಕ್ರೋಶಕ್ಕೆ ತುತ್ತಾಗಿ ಗಲಭೆಗೆ ಕಾರಣವಾಗಿತ್ತು. ಅದರ ಬೆಂಕಿಯ ಹೊಗೆ ಆರುವ ಮುನ್ನವೇ ವಿವಾದಾತ್ಮಕ ನಟ ಪ್ರಥಮ್ ತನ್ನ ಫೇಸ್ಬುಕ್ ಪೇಜಿನಲ್ಲಿ ಮುಸ್ಲಿಮ್ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಹಾಗೂ ದೇವರ ಬಗ್ಗೆ ನಿಂದನಾತ್ಮಕವಾಗಿ ಪೋಸ್ಟ್ ಹಾಕಿ ಮತ್ತೊಮ್ಮೆ ಬೆಂಗಳೂರಿಗೆ ಬೆಂಕಿ ಇಡುವ ಪ್ರಯತ್ನ ನಡೆಸಿದ್ದಾನೆ. ಸಾಮಾಜಿಕ ಜಾಲ ತಾಣಗಳಲ್ಲಿ ಈ ಕುರಿತು ತೀವ್ರ ತರದ ಆಕ್ರೋಶ ವ್ಯಕ್ತವಾಗಿದ್ದು, ತದ ನಂತರ ಪ್ರಥಮ್ ತನ್ನ ಪೋಸ್ಟನ್ನು ಪೇಜಿನಿಂದ ತೆಗೆದು ಹಾಕಿದ್ದರೂ ಆತನ ಬಂಧನಕ್ಕೆ ಒತ್ತಾಯ ವ್ಯಕ್ತವಾಗುತ್ತಿದೆ.

- Advertisement -

ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ನಿರಂತರವಾಗಿ ಅಮಾಯಕರನ್ನು ಬಂಧಿಸುತ್ತಿದ್ದಾರೆ ಎಂಬ ಆರೋಪದ ಮಧ್ಯೆಯೇ ನಿನ್ನೆ ಡಿಜೆ ಹಳ್ಳಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಕೆಲ ಬಂಧಿತರ ಪೋಷಕರು ಒಟ್ಟು ಸೇರಿ ತಮ್ಮ ಮಕ್ಕಳನ್ನು ವಿನಾಕಾರಣ ಬಂಧಿಸಲಾಗಿದೆ, ಅವರು ಅಮಾಯಕರು ಎಂದು ನೋವು ತೋಡಿಕೊಂಡಿದ್ದರು. ವಿಪರ್ಯಾಸವೆಂಬಂತೆ ಸಂಘಪರಿವಾರದ ಕೋಮುವಾದಕ್ಕೆ ಬಹಿರಂಗ ಬೆಂಬಲ ಸಾರಿರುವ ಕುಖ್ಯಾತಿಗೆ ಒಳಗಾಗಿರುವ ಕನ್ನಡ ಸುದ್ದಿ ಮಾಧ್ಯಮ ‘ಸುವರ್ಣ ನ್ಯೂಸ್’ ಈ ಕುರಿತು ವರದಿ ಮಾಡುತ್ತಾ, ಬಂಧಿತರೆಲ್ಲರೂ ಗಲಭೆಗೆ ನೇರ ಕಾರಣರು ಎನ್ನುವ ರೀತಿಯ ಪೂರ್ವಾಗ್ರಹಪೀಡಿತ ವರದಿ ಮಾಡಿತ್ತು. ಪೋಷಕರು ಮಾಡುವ ಆರೋಪದಲ್ಲಿ ಹುರುಳಿಲ್ಲ, ಬಂಧಿತರಿಗೆ ಗಲಭೆ ಮಾಡುವಾಗ ಮನೆಯವರ ನೆನಪಿರಲಿಲ್ಲವೇ ಎಂದು ವಿಕೃತ ಮನೋಸ್ಥಿತಿಯಲ್ಲಿ ವರದಿ ಮಾಡುತ್ತಾ ಅವರೆಲ್ಲರೂ ಗಲಭೆಯಲ್ಲಿ ಭಾಗಿಯಾದವರೇ ಎಂದು ಜನ ನಂಬುವಂತೆ ಈ ಮಾಧ್ಯಮ ತನ್ನದೇ ತೀರ್ಪು ನೀಡಿಬಿಟ್ಟಿದ್ದವು.

ವಿವಾದಾಗಳಿಂದಲೇ ಕುಖ್ಯಾತಿ ಪಡೆದಿರುವ ಪ್ರಚಾರಪ್ರಿಯ ನಟ ಪ್ರಥಮ್, ಈ ವೀಡಿಯೋವನ್ನು ತನ್ನ ಫೇಸ್ಬುಕ್ ಪೇಜಿನಲ್ಲಿ ಉಲ್ಲೇಖಿಸುತ್ತಾ, “ಪ್ರತಿಭಟಿಸುವ ಮುಸ್ಲಿಮರು ಅಶಿಕ್ಷಿತರು ಎನ್ನುವ ರೀತಿಯ ಹಾಗೂ ನಾಲ್ಕು ತಿಂಗಳ ಅವಧಿಯಲ್ಲಿ ಇವರಿಗೆ ಎರಡು ಮಕ್ಕಳೇ ? ಎಲ್ಲವೂ ದೇವನ ಲೀಲೆ” ಎನ್ನುತ್ತಾ ಮುಸ್ಲಿಮ್ ಮಹಿಳೆಯರ ಹಾಗೂ ಧರ್ಮದ ಕುರಿತು ತೀರಾ ಕೀಳಭಿರುಚಿಯ ಹಾಗೂ ನಿಂದನಾತ್ಮಕ ಪೋಸ್ಟ್ ಮಾಡಿದ್ದ. ಇದರ ವಿರುದ್ಧ ಸಾಮಾಜಿಕ ತಾಣಗಳಲ್ಲಿ ತೀವ್ರ ತರದ ಆಕ್ರೋಶ ವ್ಯಕ್ಜ್ತವಾಗುತ್ತಿದ್ದಂತೆಯೆ ಪ್ರಥಮ್ ಪೋಸ್ಟನ್ನು ಡಿಲೀಟ್ ಮಾಡಿದ್ದಾನೆ. ಆದರೂ ಜಾಲತಾಣಿಗರು ಅವನನ್ನು ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

- Advertisement -

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಗಲಭೆಯ ಕಾವು ಆರುವ ಮುನ್ನವೇ ಮತ್ತೊಮ್ಮೆ ಮುಸ್ಲಿಮ್ ಸಮುದಾಯವನ್ನು ಕುಟುಕಿರುವ ಪ್ರಥಮ್, ಈ ರೀತಿಯ ಕೋಮು ಸಂಘರ್ಷಕ್ಕೆ ಕಾರಣವಾಗುವ ಪೋಸ್ಟ್ ಮಾಡುತ್ತಿರುವುದು ಇದು ಮೊದಲ ಬಾರಿಯೇನೂ ಅಲ್ಲ. ಈ ಹಿಂದೆಯೂ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ಮುಸ್ಲಿಮರ ಬಗ್ಗೆ ಕೀಳಾಗಿ ಪೋಸ್ಟ್ ಮಾಡಿದ್ದು, ಆದರೆ ಈ ಬಾರಿ ಜಾಲತಾಣಿಗರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಕೂಡಾ ಶೀಘ್ರವಾಗಿ ಆತನ ವಿರುದ್ಧ ಗಂಭೀರ ಪ್ರಕರಣ ದಾಖಲಿಸಿ ಬಂಧಿಸಿದರೆ, ಮುಂದೆ ಈ ರೀತಿ ಪೋಸ್ಟ್ ಮಾಡುವವರಿಗೆ ಒಂದು ಪಾಠವಾಗಿ ಪರಿಣಮಿಸಬಹುದಾಗಿದೆ.

ಪ್ರಥಮ್ ವಿರುದ್ಧ SDPI ದೂರು ದಾಖಲು

ಇದೇ ವೇಳೆ ಪ್ರಥಮ್ ಫೇಸ್ಬುಕ್ ಪೋಸ್ಟ್ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ SDPI ಪಕ್ಷ ದೂರು ದಾಖಲಿಸಿದೆ. ಈ ಕುರಿತು ಮಾಹಿತಿ ನೀಡಿರುವ ಪಕ್ಷದ ರಾಜ್ಯ ಉಪಾಧ್ಯಕ್ಷ ಅಡ್ವೊಕೇಟ್ ಅಬ್ದುಲ್ ಮಜೀದ್ ಅವರು, ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವಂತಹಾ ಹಾಗೂ ಕೋಮು ಸಾಮರಸ್ಯವನ್ನು ಕೆಡಿಸುವಂತಹಾ ಪೋಸ್ಟ್ ಮಾಡಿರುವ ಪ್ರಥಮ್ ವಿರುದ್ಧ ಪೊಲೀಸರು ಕೂಡಲೇ ದೂರು ದಾಖಲಿಸಿಕೊಂಡು ಆತನನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

Join Whatsapp