ಪಂಜಾಬ್ | ಭೂಮಿ ಹಕ್ಕಿಗಾಗಿ ಪ್ರತಿಭಟಿಸಿದ ದಲಿತರ ಬಂಧನ

Prasthutha|

ಲುಧಿಯಾನ : ಪಂಜಾಬ್ ನ ಸಂಗ್ರೂರು ಜಿಲ್ಲೆಯ ಗ್ರಾಚೊನ್ ಗ್ರಾಮದಲ್ಲಿ ತಮ್ಮ ಹಕ್ಕಿನ ಭೂಮಿಗಾಗಿ ಪ್ರತಿಭಟನೆ ನಡೆಸುತ್ತಿದ್ದ 125 ದಲಿತರನ್ನು ಪೊಲೀಸರು ಬಂಧಿಸಿದ್ದಾರೆ. ಕೃಷಿ ಮಾಡಲು ದಲಿತರಿಗಾಗಿ ಮೀಸಲಿಟ್ಟ ಜಮೀನನ್ನು ಲೀಸ್ ಗೆ ಪಡೆಯಲು ನಕಲಿ ಅಭ್ಯರ್ಥಿಗಳನ್ನು ಮುಂದೆ ತರಲಾಗುತ್ತಿದೆ ಎಂದು ಆಪಾದಿಸಿ ಕಳೆದ ಶುಕ್ರವಾರ ನೂರಾರು ಮಂದಿ ಪ್ರತಿಭಟನೆ ನಡೆಸಿದ್ದರು. ಆ ದಿನ ಯಾರನ್ನೂ ಬಂಧಿಸಿರಲಿಲ್ಲ, ಆದರೆ ಕೆಲವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿತ್ತು. ಆದರೆ, ಬುಧವಾರ ಮತ್ತೆ ದಲಿತರು ಪ್ರತಿಭಟನೆ ನಿಂತಾಗ 125 ಮಂದಿಯನ್ನು ಬಂಧಿಸಲಾಗಿದೆ.

- Advertisement -

ಸಂಜೆ ಹೊತ್ತಿಗೆ ಬಂಧಿತರನ್ನು ಬಿಡುಗಡೆಗೊಳಿಸಲಾಗಿದೆ. ಆದರೆ, ಪ್ರತಿಭಟನೆಯ ಭಾಗವಾಗಿದ್ದ ಗ್ರಾಮದ ನಾಯಕ ಗುರುಚರಣ್ ಗ್ರಾಚೊನ್ ನಾಪತ್ತೆಯಾಗಿದ್ದಾರೆ. ಅವರ ಫೋನ್ ಸ್ವಿಚ್ ಆಫ್ ಬರುತ್ತಿದೆ. ಈ ಬಗ್ಗೆ ತಮಗೆ ಗೊತ್ತಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ ಎಂದು ಜಮೀನ್ ಪ್ರಪಾತಿ ಸಂಘರ್ಷ ಸಮಿತಿಯ ನಾಯಕ ಗುರುಮುಖ್ ಸಿಂಗ್ ಹೇಳಿದ್ದಾರೆ.

ಕಳೆದ 71 ದಿನಗಳಿಂದ ದಲಿತರು ಪ್ರತಿಭಟನೆ ನಡೆಸುತ್ತಿದ್ದಾರೆ. ದಲಿತರಿಗೆ ಮೀಸಲಾದ ಭೂಮಿಯಲ್ಲಿ ಗುಂಪು ಕೃಷಿಗೆ ಅವಕಾಶ ನೀಡಬೇಕು ಎಂದು ಅವರು ಬೇಡಿಕೆಯಿಟ್ಟಿದ್ದರು. ಕಳೆದ ಮೇ 20ರಿಂದ ಖಾಲಿ ಕೃಷಿ ಭೂಮಿಯಲ್ಲಿ ಅವರು ಧರಣಿ ಕೂತಿದ್ದರು.

- Advertisement -

ಗ್ರಾಮದಲ್ಲಿ ದಲಿತರ ಪಾಲಿನ 48 ಎಕರೆ ಕೃಷಿ ಭೂಮಿಯಿದೆ. ಇದರಲ್ಲಿ 18 ಎಕರೆಗೆ ದಲಿತರು ಪ್ರತಿ ಕುಟುಂಬ ತಲಾ 20,000 ರು.ಯಂತೆ ಪಾವತಿಸಿದೆ. ಇನ್ನುಳಿದ 30 ಎಕರೆಗೆ ಕಾಂಗ್ರೆಸ್ ನಾಯಕರು ತಮ್ಮ ಅನುಯಾಯಿಗಳನ್ನು ನಕಲಿ ಅಭ್ಯರ್ಥಿಗಳಾಗಿ ಅರ್ಜಿ ಸಲ್ಲಿಸಲು ಪ್ರೇರೇಪಿಸಿದ್ದಾರೆ. ಅವರು ದಲಿತರಿಗೆ ಉಳಿದ 18 ಎಕರೆ ಭೂಮಿಯಲ್ಲಿ ಕೃಷಿ ಮಾಡಲೂ ಬಿಡುತ್ತಿಲ್ಲ, ವಿಷಯ ಇತ್ಯರ್ಥವೂ ಮಾಡುತ್ತಿಲ್ಲ. ದನಗಳಿಗೆ ತಿನ್ನಲು ಏನೂ ಇಲ್ಲ. ಹೀಗಾಗಿ ದಲಿತರು ತಮ್ಮ ದನಗಳನ್ನು ಕ್ಯಾಬಿನೆಟ್ ಸಚಿವ ವಿಜಯೇಂದರ್ ಸಿಂಗ್ಲಾ ಮನೆ ವರೆಗೂ ಕೊಂಡೊಯ್ಯಲು ನಿರ್ಧರಿಸಿದ್ದರು. ಆದರೆ. ಕೊರೊನಾ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಮುಕೇಶ್ ಮಲಾಡ್ ಹೇಳಿದ್ದಾರೆ.

ಗ್ರಾಚೊನ್ ಗ್ರಾಮದ 178 ದಲಿತ ಕುಟುಂಬಗಳು ಈ 48 ಎಕರೆ ಭೂಮಿಯಲ್ಲಿ ಸಾಮೂಹಿಕ ಕೃಷಿ ಬಗ್ಗೆ ಆಸಕ್ತರಾಗಿದ್ದಾರೆ. ಅವರಲ್ಲಿ 70 ಮಂದಿ ಪ್ರತಿಭಟನಾರ್ಥವಾಗಿ ಹೊಲದಲ್ಲೇ ಮಲಗುತ್ತಿದ್ದಾರೆ.  

Join Whatsapp