ದೆಹಲಿ ಗಲಭೆ | ಸಿಎಎ ವಿರೋಧಿ ಹೋರಾಟಗಾರರ ವಾಟ್ಸಪ್ ಗ್ರೂಪ್ ಟಾರ್ಗೆಟ್ ಮಾಡಿದ ಪೊಲೀಸರು

Prasthutha|

ನವದೆಹಲಿ : ಬಿಜೆಪಿ ಪರ ಸಂಘಟನೆಗಳಾದ ಸಂಘ ಪರಿವಾರದ ಜೊತೆ ಪೊಲೀಸರ ನಂಟಿನ ಬಗ್ಗೆ ಬಹು ವರ್ಷಗಳಿಂದ ಚರ್ಚೆಗಳು ನಡೆಯುತ್ತಲೇ ಇವೆ. ಇದೀಗ ಕಳೆದ ಫೆಬ್ರವರಿ 23-25ರ ನಡುವೆ ದೆಹಲಿಯಲ್ಲಿ ಸುಮಾರು 53 ಮಂದಿಯ ಸಾವಿಗೆ ಕಾರಣವಾದ ಭೀಕರ ಗಲಭೆಯ ಸಂಚನ್ನು ಸಿಎಎ/ಎನ್ ಆರ್ ಸಿ/ಎನ್ ಪಿಆರ್ ಪ್ರತಿಭಟನಕಾರರು ರೂಪಿಸಿದ್ದರು ಎಂಬುದನ್ನು ಬಿಂಬಿಸಲು ಪೊಲೀಸರು ಮತ್ತು ಬಿಜೆಪಿ ಪರ ಸಂಘಟನೆಗಳು ಯಾವ ರೀತಿಯಲ್ಲಿ ಪ್ರಯತ್ನಿಸಿವೆ ಎಂಬುದರ ಬಗ್ಗೆ ಬೆಳಕು ಚೆಲ್ಲುವ ಮಹತ್ವದ ಅಂಶಗಳು ವರದಿಯಾಗಿವೆ.

- Advertisement -

ಕಳೆದ ಕೆಲವು ತಿಂಗಳುಗಳಲ್ಲಿ ಗಲಭೆಗಳನ್ನು ಯೋಜಿಸಿದ ಮತ್ತು ನಡೆಸಿದ ಆರೋಪದಲ್ಲಿ ಹಲವಾರು ಸಿಎಎ ವಿರೋಧಿ ಹೋರಾಟದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ, ಗಲಭೆಗೆ ಮುಂಚೆ ಕೋಮು ಉದ್ವಿಗ್ನದ ಉದ್ರೇಕಕಾರಿ ಮಾತುಗಳನ್ನಾಡಿದ್ದ ಬಿಜೆಪಿ ನಾಯಕರುಗಳಾದ ಕಪಿಲ್ ಮಿಶ್ರಾ, ಅನುರಾಗ್ ಠಾಕೂರ್ ಮತ್ತು ಇತರ ಬಿಜೆಪಿ ಪರ ಸಂಘಟನೆಗಳ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ.

ಗಲಭೆ ಪ್ರಕರಣಗಳಿಗೆ ಸಂಬಂಧಿಸಿದ ಹಲವು ಆರೋಪಿಗಳ ವಿರುದ್ಧ ಸಲ್ಲಿಕೆಯಾಗಿರುವ ದೋಷಾರೋಪ ಪಟ್ಟಿಯ ಅಂಶಗಳನ್ನು ಪರಿಶೀಲಿಸಿದಾಗ, ದೆಹಲಿ ಪೊಲೀಸರು ತನಿಖೆಯ ವಿಷಯದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿರುವುದು ಮಾಧ್ಯಮ ವರದಿಗಳಿಂದ ತಿಳಿದು ಬರುತ್ತಿದೆ.

- Advertisement -

ಗಲಭೆಗೆ ಸಂಬಂಧಿಸಿ ಬಂಧಿಸಲ್ಪಟ್ಟವರ ದೋಷಾರೋಪ ಪಟ್ಟಿ ಮತ್ತು ಎಫ್ ಐಆರ್ ಗಳಲ್ಲಿ ಪೊಲೀಸರು “ದೆಹಲಿ ಪ್ರತಿಭಟನಕಾರರ ಬೆಂಬಲಿತ ಗ್ರೂಪ್ (ಡಿಪಿಎಸ್ ಜಿ)” ಎಂಬ ವಾಟ್ಸಾಪ್ ಗ್ರೂಪ್ ಅನ್ನು ಗುರಿ ಮಾಡಿರುವುದು ಸ್ಪಷ್ಟವಾಗುತ್ತದೆ. ಡಿಪಿಎಸ್ ಜಿ ವಾಟ್ಸಪ್ ಗ್ರೂಪ್ ನಲ್ಲಿ ಸಿಎಎಯನ್ನು ವಿರೋಧಿಸಿದ ದೇಶದ ಪ್ರಮುಖ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕಾರ್ಯಕರ್ತರು ಇದ್ದರು. ಈ ಗ್ರೂಪ್ ನಲ್ಲಿದ್ದ ಕೆಲವರನ್ನು ಈಗಾಗಲೇ ಬಂಧಿಸಲಾಗಿದೆ. ಬಂಧಿತರ ವಿರುದ್ಧ ಯುಎಪಿಎಯಂತಹ ಕಠಿಣ ಕಾನೂನಿನಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಚಿತ್ರರಂಗದ ರಾಹುಲ್ ರಾಯ್, ಸಬಾ ದೇವನ್, ರಾಜಕೀಯ ಕಾರ್ಯಕರ್ತರುಗಳಾದ ಕವಿತಾ ಕೃಷ್ಣನ್, ಯೋಗೇಂದ್ರ ಯಾದವ್, ಆ್ಯನಿ ರಾಜ, ಸಾಮಾಜಿಕ ಕಾರ್ಯಕರ್ತರುಗಳಾದ ಹರ್ಷ ಮಂದರ್, ಗೌತಮ್ ಮೋದಿ, ಎನ್. ಡಿ. ಜಯಪ್ರಕಾಶ್, ಅಪೂರ್ವಾನಂದ್, ಅಂಜಲಿ ಭಾರದ್ವಾಜ್, ನದೀಮ್ ಖಾನ್ ಮತ್ತು ಹಲವಾರು ಪ್ರಮುಖರು ಈ ಗ್ರೂಪ್ ನಲ್ಲಿದ್ದರು. ಯುಎಪಿಎಯಡಿ ಪ್ರಕರಣ ದಾಖಲಿಸಲ್ಪಟ್ಟಿರುವ ಪಿಂಜಾರಾ ತೋಡ್ ಸಂಸ್ಥಾಪಕ ಸದಸ್ಯೆ ನತಾಶ ನರ್ವಾಲ್, ಮಾಜಿ ಜೆಎನ್ ಯು ವಿದ್ಯಾರ್ಥಿ ಉಮರ್ ಖಾಲಿದ್, ಯುನೈಟೆಡ್ ಅಗೈನ್ಸ್ಟ್ ಹೇಟ್ ಕಾರ್ಯಕರ್ತ ಖಲೀದ್ ಸೈಫಿ ಮುಂತಾದವರು ಕೂಡ ಈ ಗ್ರೂಪ್ ನಲ್ಲಿದ್ದರು. ಈ ಮೂವರಲ್ಲಿ ಖಾಲಿದ್ ಮಾತ್ರ ಇಲ್ಲಿ ವರೆಗೆ ಬಂಧಿತನಾಗಿಲ್ಲ.

ಡಿಪಿಎಸ್ ಜಿ ವಾಟ್ಸಪ್ ಗ್ರೂಪ್ ನಲ್ಲಿ ನಡೆದ ಕೆಲವು ಚರ್ಚೆಗಳ ಆಧಾರದಲ್ಲಿ ಗಲಭೆಗೆ ಸಂಚು ರೂಪಿಸಲಾದ ಬಗ್ಗೆ ಪ್ರತಿಪಾದನೆಗಳನ್ನು ಮಂಡಿಸಲು ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ವರದಿಯೊಂದು ಹೇಳುತ್ತದೆ. ಗಲಭೆಗೆ ಸಂಬಂಧಿಸಿ ವಿಚಾರಣೆ ನಡೆಸುತ್ತಿರುವ ದೆಹಲಿ ಪೊಲೀಸರ ವಿಶೇಷ ಘಟಕವು ಹಲವು ಸಾಮಾಜಿಕ ಕಾರ್ಯಕರ್ತರನ್ನು ಕರೆಸಿ ಮಾತನಾಡಿದಾಗ, ಡಿಪಿಎಸ್ ಜಿ ವಾಟ್ಸಪ್ ಗ್ರೂಪ್ ಬಗ್ಗೆ ಪ್ರಶ್ನಿಸಿದ್ದಾರೆ ಎನ್ನಲಾಗುತ್ತಿದೆ.

ಕೋರ್ಟ್ ನಲ್ಲಿ ಪೊಲೀಸರು ಸಲ್ಲಿಸಿದ ಕೆಲವು ದಾಖಲೆಗಳ ಪ್ರಕಾರವೂ, ಅವರು ಡಿಪಿಎಸ್ ಜಿ ಮತ್ತು ಅದರ ಸದಸ್ಯರನ್ನು ಗುರಿಪಡಿಸಿದ ಬಗ್ಗೆ ತಿಳಿದುಬರುತ್ತದೆ. ಗಲಭೆಗೆ ಸಂಬಂಧಿಸಿ ದೂರುದಾಖಲಾದ ಶಾದಾಬ್ ಅಹಮದ್ ಎಂಬಾತ ಡಿಪಿಎಸ್ ಜಿ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಸಿಎಎ ವಿರೋಧಿ ಹೋರಾಟ ಸ್ಥಳಕ್ಕೆ ಹಲವು ಬಾರಿ ಭೇಟಿ ನೀಡಿದ್ದು, ಈ ವೇಳೆ ಉದ್ರೇಕಕಾರಿ ಭಾಷಣಗಳನ್ನು ಮಾಡಲಾಗಿದೆ ಮತ್ತು ಪ್ರತಿಭಟನೆಯ ಭಾಗವಾಗಿ ಹಿಂಸಾಚಾರ ನಡೆಯಬೇಕು ಎಂದು ಗ್ರೂಪ್ ಸದಸ್ಯರು ಚರ್ಚಿಸಿದ್ದರು ಎಂದು ಆತ ತನ್ನ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಪೊಲೀಸರು ಪ್ರತಿಪಾದಿಸಿದ್ದಾರೆ. ಬಿಜನೂರ್ ಮೂಲದ ಅಹಮದ್ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದನು. “ಪೀಪಲ್ ಅಗೈನ್ಸ್ಟ್ ಫ್ಯಾಶಿಸಂ” ಎಂಬ ವಾಟ್ಸಪ್ ಗ್ರೂಪ್ ಮೂಲಕ ಸಿಎಎ/ಎನ್ ಆರ್ ಸಿ ವಿರೋಧಿ ಹೋರಾಟದ ಬಗ್ಗೆ ತನಗೆ ಗೊತ್ತಾಯಿತು. ಆ ಬಳಿಕ ತಾನು ಈ ಪ್ರತಿಭಟನೆಯಲ್ಲಿ ಸತತವಾಗಿ ಭಾಗವಹಿಸಲು ಆರಂಭಿಸಿದೆ. ಅಲ್ಲಿ ಕೆಲವು ಡಿಪಿಎಸ್ ಜಿ ಸದಸ್ಯರ ಪರಿಚಯವಾಯಿತು, ತನ್ನ ವೇದಿಕೆ ನಿರ್ವಹಣೆ ಕೆಲಸದಿಂದಾಗಿ ಅವರು ತನ್ನ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಅಹಮದ್ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾನೆ ಎನ್ನಲಾಗಿದೆ. ಹೀಗೆ ಭಾರತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ವೇಳೆ ಪ್ರತಿಭಟನೆಗೆ ಹಿಂಸಾತ್ಮಕ ಸ್ವರೂಪ ನೀಡುವ ಬಗ್ಗೆ ಪೂರ್ವಸಿದ್ಧತೆಗಳು ಹೇಗೆ ನಡೆದಿವೆ ಎಂಬುದನ್ನು ಅಹಮದ್ ತಿಳಿಸಿರುವುದಾಗಿ ಪೊಲೀಸರು ಪ್ರತಿಪಾದಿಸಿದ್ದಾರೆ.

ಸಿಎಎ ವಿರೋಧಿ ಪ್ರತಿಭಟನೆಗೆ ಬೆಂಬಲ ಕ್ರೋಢೀಕರಿಸುವ ಬಗ್ಗೆ ಗ್ರೂಪ್ ಸದಸ್ಯರಲ್ಲಿ  ಪರಸ್ಪರ ಭಿನ್ನಾಭಿಪ್ರಾಯಗಳಿದ್ದವು. ಕೆಲವು ತೀವ್ರರೀತಿಯ ಚರ್ಚೆಗಳನ್ನು ಹುಟ್ಟುಹಾಕುತ್ತಿದ್ದವು. ಆದರೆ, ಇವುಗಳನ್ನು ಪ್ರಜಾಸತ್ತಾತ್ಮಕವಾಗಿ ಇತ್ಯರ್ಥಗೊಳಿಸಲಾಗಿತ್ತು ಎಂಬುದು ಗ್ರೂಪ್ ನ ಚಾಟ್ ಮಾಹಿತಿಗಳಿಂದ ತಿಳಿದು ಬರುತ್ತದೆ. ಆದರೆ, ಪೊಲೀಸರು ಇದೇ ಚಾಟ್ ಅಂಶಗಳನ್ನು ಈಗ ಗಲಭೆ ಸಂಚಿನ ಭಾಗವಾಗಿ ಪ್ರತಿಪಾದಿಸಲು ಸಿದ್ಧತೆ ನಡೆಸಿದ್ದಾರೆ.

ಎಲ್ಲ ಧರಣಿ ನಿರತರನ್ನು ಬಲವಂತವಾಗಿ ತೆರವುಗೊಳಿಸಿದ ಬಳಿಕ ಮಾರ್ಚ್ ನಲ್ಲಿ ಈ ವಾಟ್ಸಪ್ ಗ್ರೂಪ್ ಸ್ಥಗಿತಗೊಳಿಸಲ್ಪಟ್ಟಿದೆ. ಆದರೂ, ಪೊಲೀಸರು ಮಾತ್ರ ಈ ಗ್ರೂಪ್ ನಲ್ಲಿ ನಡೆದ ಚರ್ಚೆಗಳ ಆಯ್ದ ಭಾಗಗಳನ್ನು ಇರಿಸಿಕೊಂಡು, ಗಲಭೆಯ ಸಂಚು ರೂಪಿಸಿದ ದೋಷಾರೋಪವನ್ನು ಮಾಡುತ್ತಿದೆ. ಇದೇ ವೇಳೆ, ಗಲಭೆಯಲ್ಲಿ ನೇರ ಪಾತ್ರವಿರುವಂತೆ ಕಾಣುವ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಇವರು ಹಿಂದೇಟು ಹಾಕುತ್ತಿರುವುದು ಕಂಡು ಬರುತ್ತಿದೆ. ಸಿಎಎ ವಿರೋಧಿ ಹೋರಾಟಗಾರರು ರಸ್ತೆ ತಡೆ ನಡೆಸಿದ್ದು ಗಲಭೆಗೆ ಕಾರಣವಾಗಿದ್ದು ಎನ್ನುವುದು ಪೊಲೀಸರ ವಾದ. ಬಿಜೆಪಿಗರ ಕೃತ್ಯಗಳ ಬಗ್ಗೆ ಅವರು ಮೌನವಾಗಿದ್ದಾರೆ.

Join Whatsapp