ದೆಹಲಿ ಗಲಭೆ | ತನಿಖಾಧಿಕಾರಿಗಳಿಗೆ ಎಚ್ಚರಿಕೆ ಸೂಚನೆ | ಪೊಲೀಸ್ ಗೆ ಹೈಕೋರ್ಟ್ ತರಾಟೆ

Prasthutha|

ನವದೆಹಲಿ : ಕಳೆದ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆಗೆ ಸಂಬಂಧಿಸಿದ ಹಿಂದೂ ಆರೋಪಿಗಳ ಬಂಧನದ ವೇಳೆ ಎಚ್ಚರಿಕೆ ವಹಿಸುವಂತೆ ತನಿಖಾ ತಂಡಗಳಿಗೆ ಸೂಚಿಸಿರುವ ಪೊಲೀಸ್ ಇಲಾಖೆಯ ಕ್ರಮಕ್ಕೆ ದೆಹಲಿ ಹೈಕೋರ್ಟ್ ಗರಂ ಆಗಿದೆ. ಈ ಸಂಬಂಧ ವಿಶೇಷ ಪೊಲೀಸ್ ಕಮೀಶನರ್ ಪ್ರವೀರ್ ರಂಜನ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಇಂತಹ ನಿರ್ದೇಶನ ನೀಡುವ ಅವಶ್ಯಕತೆ ಏನಾದರೂ ಇತ್ತು? ಎಂದು ಪ್ರಶ್ನಿಸಿದೆ. ಗಲಭೆ ಪ್ರಕರಣಗಳ ಕುರಿತು ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ತಾರತಮ್ಯ ಎಸಗುತ್ತಿರುವ ಬಗ್ಗೆ ಸುದ್ದಿಯೊಂದು ಬಹಿರಂಗವಾದ ಬಳಿಕ ದೆಹಲಿ ಪೊಲೀಸರ ಕ್ರಮಕ್ಕೆ ಭಾರೀ ಆಕ್ಷೇಪಗಳು ವ್ಯಕ್ತವಾಗುತ್ತಿವೆ.

- Advertisement -

ತಾವು ಅಥವಾ ತಮ್ಮ ಹಿಂದಿನ ಅಧಿಕಾರಿಗಳು ಇಂತಹ ಸೂಚನೆ ನೀಡಿದ ಕನಿಷ್ಠ ಐದು ಪತ್ರಗಳನ್ನು ಸಲ್ಲಿಸುವಂತೆ ರಂಜನ್ ಅವರಿಗೆ ಹೈಕೋರ್ಟ್ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೇತ್ ಸೂಚಿಸಿದ್ದಾರೆ. ಈಶಾನ್ಯ ದೆಹಲಿಯ ಕೆಲವು ಗಲಭೆ ಪೀಡಿತ ಪ್ರದೇಶಗಳಲ್ಲಿ ಕೆಲವು ಹಿಂದೂ ಯುವಕರನ್ನು ಬಂಧಿಸುವಾಗ ಹಿಂದೂ ಸಮುದಾಯದಲ್ಲಿ ಅಸಮಧಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಪ್ರಕರಣಗಳಿಗೆ ಸಂಬಂಧಿಸಿ ಬಂಧನಗಳನ್ನು ನಡೆಸುವಾಗ ಮುನ್ನೆಚ್ಚರಿಕೆ ವಹಿಸಬೇಕು ಎಂದು ಗಲಭೆ ಕುರಿತ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳಿಗೆ ರಂಜನ್ ತಮ್ಮ ಆದೇಶದಲ್ಲಿ ನಿರ್ದೇಶಿಸಿದ್ದರು ಎಂದು ವರದಿಗಳು ತಿಳಿಸಿವೆ. ಗಲಭೆಯಲ್ಲಿ ಮೃತಪಟ್ಟವರ ಕುಟುಂಬಗಳ ಇಬ್ಬರು ಈ ಆದೇಶವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಮುಂದಿನ ವಿಚಾರಣೆ ಆ.7ಕ್ಕೆ ಮುಂದೂಡಲಾಗಿದೆ.

ಎರಡೂ ಸಮುದಾಯಗಳಿಂದ ಸ್ವೀಕೃತವಾದ ಮನವಿಗಳ ಕುರಿತಂತೆ ಮತ್ತು ಪ್ರಕರಣಗಳ ತನಿಖೆಗೆ ಅವರನ್ನು ನಿರ್ದೇಶಿಸಲು ಹಾಗೂ ಎಚ್ಚರಿಸುವ ಉದ್ದೇಶದಿಂದ ತನಿಖಾಧಿಕಾರಿಗಳಿಗೆ ಇಂತಹ ಪತ್ರ ಬರೆಯಲಾಗಿತ್ತು ಎಂದು ದೆಹಲಿ ಪೊಲೀಸ್ ಪಿಆರ್ ಒ ಮನ್ ದೀಪ್ ಎಸ್. ರಾಂಧವ ಹೇಳಿದ್ದಾರೆ.

Join Whatsapp