ಉಡುಪಿ ನಗರಸಭೆಯಲ್ಲಿ ಭಾರೀ ಅವ್ಯವಹಾರ | ದಲಿತ ಮೀಸಲು ನಿಧಿ ದುರ್ಬಳಕೆ : ದಸಂಸ ಆರೋಪ

Prasthutha|

ಉಡುಪಿ : ಆರೋಗ್ಯ ಕಾರ್ಡ್ ಯೋಜನೆಯಲ್ಲಿ ದಲಿತರಿಗಾಗಿ ಮೀಸಲಿಟ್ಟ ಮೊತ್ತದಲ್ಲಿ ಭಾರೀ ಹಗರಣ ನಡೆದಿದೆ ಎಂದು ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಆಪಾದಿಸಿದ್ದಾರೆ.

- Advertisement -

ಶೇ.50ರಷ್ಟು ದಲಿತರಿಗೆ ಆರೋಗ್ಯ ಕಾರ್ಡ್ ಏನೆಂದೇ ಗೊತ್ತಿಲ್ಲ. ಆರೋಗ್ಯ ಕಾರ್ಡ್ ಗಾಗಿ ಪ್ರತಿ ವರ್ಷ 50 ಲಕ್ಷ ರೂ. ಪ್ರೀಮಿಯಂ ತುಂಬಲಾಗುತ್ತದೆ. ಮೃತ ಪಟ್ಟವರ ಹೆಸರಲ್ಲೂ ಪ್ರೀಮಿಯಂ ಮೊತ್ತ ಪಾವತಿಸಿ ಲಕ್ಷಾಂತರ ರೂ. ಅವ್ಯವಹಾರ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ. ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಈ ವಿಷಯ ಬಹಿರಂಗ ಪಡಿಸಿದ್ದಾರೆ.

ಕಳೆದ ಎಂಟು ವರ್ಷಗಳಲ್ಲಿ 5.24 ಕೋಟಿ ರೂ. ಈ ಯೋಜನೆಯಲ್ಲಿ ಮೀಸಲು ನಿಧಿಯನ್ನು ಬಳಸಿಕೊಳ್ಳಲಾಗಿದೆ. ಖಾಸಗಿ ವಿಮಾ ಸಂಸ್ಥೆಯೊಂದಿಗೆ ನಗರಸಭೆ ಸಿಬ್ಬಂದಿ ಈ ಹಗರಣದಲ್ಲಿ ಶಾಮೀಲಾಗಿದ್ದಾರೆ. ಮೂಡುಬೆಟ್ಟು ಒಂದೇ ವಾರ್ಡ್ ನಲ್ಲಿ ಬಹಳ ಹಿಂದೆಯೇ ಮೃತಪಟ್ಟ 30 ಮಂದಿಯ ಹೆಸರಲ್ಲಿ ಪ್ರೀಮಿಯಂ ಪಾವತಿಸಲಾಗಿದೆ. ಇದನ್ನು ಎಲ್ಲಾ 35 ವಾರ್ಡ್ ಗಳಿಗೂ ಲೆಕ್ಕಹಾಕಿದರೆ, ಇದೊಂದು ಹಗರಣವೆನಿಸುತ್ತಿದೆ. ಅದಕ್ಕೂ ಮಿಗಿಲಾಗಿ, ನಗರಸಭೆಯಾಗಲೀ, ವಿಮಾ ಕಂಪೆನಿಯಾಗಲಿ ಇಂತಹ ಆರೋಗ್ಯ ಕಾರ್ಡ್ ಗಳನ್ನು ವಿತರಿಸಿಲ್ಲ ಎಂದು ಅವರು ಆಪಾದಿಸಿದ್ದಾರೆ.

- Advertisement -

ದುರ್ಬಳಕೆ ಮಾಡಲಾದ ಹಣ ನಗರಸಭೆಗೆ ಮರು ಪಾವತಿಸಬೇಕು. ಈ ವಿಷಯದಲ್ಲಿ ಜಿಲ್ಲಾಡಳಿವು ನಿರ್ಲಕ್ಷ್ಯ ತೋರಿದರೆ, 15 ದಿನಗಳೊಳಗೆ ನಗರಸಭೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಎಸ್ ಸಿಪಿ ಮತ್ತು ಟಿಎಸ್ ಪಿ ಅನುದಾನವನ್ನು ಉತ್ತಮ ಸ್ಥಿತಿಯಲ್ಲಿರುವ ರಸ್ತೆಗೆ ಬಳಸಿ ದುರ್ಬಳಕೆ ಮಾಡಲಾಗಿದೆ ಎಂದೂ ಅವರು ಇದೇ ವೇಳೆ ಆರೋಪಿಸಿದರು. ಎರಡು ಇಂದಿರಾ ಕ್ಯಾಂಟೀನ್ ವಿಚಾರದಲ್ಲೂ ನಕಲಿ ಬಿಲ್ ಗಳ ಮೂಲಕ ವಂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ನಗರಸಭೆಯ ಸಿಬ್ಬಂದಿ ಪೌರ ಕಾರ್ಮಿಕರಿಗೆ ಬೆದರಿಕೆಯೊಡ್ಡುತ್ತಾರೆ. ಅದೂ, ಅವರು ಕೊರಗ ಸಮುದಾಯದ ಮೇಲೆ ದೌರ್ಜನ್ಯ ಎಸಗುತ್ತಾರೆ. ಸರಕಾರದಿಂದ ಉಚಿತ ವಾಹನ ಪೂರೈಸಲಾಗಿದ್ದರೂ, ಸಿಬ್ಬಂದಿ ಪ್ರತಿ ತಿಂಗಳು ಕಮೀಶನ್ ಕೇಳುತ್ತಾರೆ ಎಂದೂ ಅವರು ಆರೋಪಿಸಿದ್ದಾರೆ.

ನಗರಸಭೆ ಕಮೀಶನರ್ ಪ್ರತಿಯೊಂದಕ್ಕೂ ಶಾಸಕರನ್ನು ಕೇಳಿ ಎನ್ನುತ್ತಾರೆ. ಸರಿಯಾದ ಉತ್ತರ ಯಾರಿಗೂ ನೀಡುವುದಿಲ್ಲ. ಈ ಹಗರಣ ಲೋಕಾಯುಕ್ತದ ಮೂಲಕ ತನಿಖೆಯಾಗಬೇಕು, ಪರಿಸರ ಮತ್ತು ಆರೋಗ್ಯ ಇಲಾಖೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ. ಪರಿಸರ ಅಧಿಕಾರಿ ಸ್ನೇಹಾ ಮತ್ತು ಆರೋಗ್ಯ ವಿಭಾಗ ಸಿಬ್ಬಂದಿ ಮನೋಹರ್ ಮತ್ತು ಕರುಣಾಕರ್ ಅವರನ್ನು ತಕ್ಷಣವೇ ವರ್ಗಾವಣೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಮಂಜುನಾಥ ಬಾಳಕುದ್ರು, ಭಾಸ್ಕರ್ ಮಾಸ್ತರ್, ಶಂಕರ್ ದಾಸ್, ಉಡುಪಿ ತಾಲೂಕು ಸಂಚಾಲಕ ವಿಠಲ ಉಚ್ಚಿಲ, ಕಾಪು ತಾಲೂಕು ಸಂಚಾಲಕ ಶಿವಾನಂದ ಮೂಡುಬೆಟ್ಟು, ನಗರ ಸಂಚಾಲಕ ಎಸ್.ಎಸ್. ಪ್ರಸಾದ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನ.17ರಿಂದ ಕಾಲೇಜು ಆರಂಭಿಸುವುದಾಗಿ ಸರಕಾರ ಘೋಷಿಸಿದೆ. ಈ ಬಗ್ಗೆ ಪರ-ವಿರೋಧ ಹೇಳಿಕೆಗಳು ವ್ಯಕ್ತವಾಗುತ್ತಿವೆ. ಕೋವಿಡ್ – 19 ಪ್ರಕರಣಗಳು ಇನ್ನೂ ಸಾಕಷ್ಟು ದೊಡ್ಡ ಪ್ರಮಾಣದಲ್ಲಿರುವಾಗ ಕಾಲೇಜು ಆರಂಭಿಸಲು ಸರಕಾರ ನಿರ್ಧಾರ ಕೈಗೊಂಡಿರುವುದು ಸರಿಯೇ? ತಪ್ಪೇ? ಎಂಬ ಬಗ್ಗೆ ‘ಪ್ರಸ್ತುತ’ ಜನಾಭಿಮತ ಸಂಗ್ರಹಿಸುತ್ತಿದೆ. ಈ ಬಗ್ಗೆ ನಿಮ್ಮ ನಿಲುವನ್ನು ‘ಪ್ರಸ್ತುತ’ ಫೇಸ್ ಬುಕ್ ಪೇಜ್ ನಲ್ಲಿ ವ್ಯಕ್ತಪಡಿಸಿ.

https://www.facebook.com/2171161852895947/posts/3694124020599715/

Join Whatsapp